ಮತದಾರರ ಮಾಹಿತಿ ಕಳವಿನಲ್ಲಿ ಮೋದಿ ಸರ್ಕಾರವೂ ಭಾಗಿ: ಸುರ್ಜೆವಾಲ
ಬೆಂಗಳೂರು, ನವೆಂಬರ್ 25: ಮತದಾರರ ಮಾಹಿತಿ ಕಳವು ಹಗರಣ ಈಗ ಜನರ ಮುಂದಿದೆ. ಇತ್ತೀಚಿನ ಬೆಳವಣಿಗೆಗಳ ಪ್ರಕಾರ ಈ ಹಗರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತ್ರವಲ್ಲ ಕೇಂದ್ರದ ನರೇಂದ್ರ ಮೋದಿ ಸರ್ಕಾರವೂ ಭಾಗಿಯಾಗಿದೆ. ಕೇವಲ ಮತದಾರರ ಮಾಹಿತಿ ಕಳವು ಮಾತ್ರವಲ್ಲ ದೇಶ ಹಾಗೂ ರಾಜ್ಯದ ಹಣ ಲೂಟಿ ಮಾಡುತ್ತಿವೆ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕಿಡಿಕಾರಿದರು.
ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಿಟಿಜನ್ ಸರ್ವೀಸಸ್ ಸೆಂಟರ್ ನಿಂದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು, ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಅವರಿಗೂ ಪಾವತಿಯಾಗಿದೆ. ಇದರಿಂದ ಈ ಹಗರಣದ ಸ್ವರೂಪ ಬೃಹದಾಕಾರವಾಗಿರುವುದು ಸ್ಪಷ್ಟವಾಗಿದೆ. ಜನರ ಹಣ ಲೂಟಿ ಮಾಡಿ, ಅವ್ಯವಹಾರ ನಡೆಸಲಾಗಿದೆ ಎಂದು ಆರೋಪಿಸಿದರು.
ಬೊಮ್ಮಾಯಿ ಅವರ ಜತೆಗೆ ರವಿಕುಮಾರ್ ಹಾಗೂ ಅವರ ಆಪ್ತರ ಖಾತೆಗಳಿಗೆ ಕೇಂದ್ರ ಸರ್ಕಾರದ ಸಂಸ್ಥೆಯಿಂದ ಎಷ್ಟು ಕೋಟಿ ಹಣ ವರ್ಗಾವಣೆ ಮಾಡಲಾಗಿದೆ?. ಈ ಹಣ ಪಡೆದವರು ಯಾರು? ಎಂಬುದು ತನಿಖೆ ಮೂಲಕ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
ಮತದಾರರ ಮಾಹಿತಿ ಕಳವು ಪ್ರಕರಣದಲ್ಲಿ ಬೊಮ್ಮಾಯಿ ಅವರು ಪ್ರಮುಖ ಕಿಂಗ್ ಪಿನ್ ಆಗಿದ್ದು, ಈ ವಿಚಾರವಾಗಿ ಜನರು ಹಾಗೂ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆಗಳಿಗೆ ಅವರು ಉತ್ತರ ನೀಡುತ್ತಿಲ್ಲ. ಕೇಂದ್ರ ಸರ್ಕಾರದ ಸಂಸ್ಥೆಯಿಂದ ಆರೋಪಿ ಹಾಗೂ ಆತನ ಆಪ್ತರ ಖಾತೆಗಳಿಗೆ ಹಣ ವರ್ಗಾವಣೆ ಹೇಗಾಯಿತು?. ಇದೆಲ್ಲದರ ಸತ್ಯಾಂಶ ಹೊರಬರಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ಇನ್ನೂ ನಾವು ಈ ವಿಚಾರವನ್ನು ಪ್ರತಿ ಕ್ಷೇತ್ರ ಹಾಗೂ ಬೂತ್ ಗಳಿಗೆ ಕೊಂಡೊಯ್ಯುತ್ತೇವೆ ಎಂದರು.
ಇನ್ನೂ ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಾತನಾಡಿ, ಮತದಾರರ ಮಾಹಿತಿ ಕಳವು, ಮಾರಾಟ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ತನಿಖೆ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಈ ಆಯೋಗವು ಉಪ ಆಯುಕ್ತರನ್ನು ತನಿಖೆಗೆ ನೇಮಕ ಮಾಡಿದ್ದು, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಮಧ್ಯೆ ತಮ್ಮನ್ನು ತಾವೇ ಗಂಡಸು ಎಂದು ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದವರು ಹಾಗೂ ಚಿಲುಮೆ ಸಂಸ್ಥೆಯ ಪ್ರಮುಖ ಕಿಂಗ್ ಪಿನ್ ಗಳು ಕೇಂದ್ರ ಸರ್ಕಾರದ ಸಂಸ್ಥೆಗಳಿಂದ ಹಲವು ವ್ಯಕ್ತಿಗಳ ಖಾತೆಗೆ ಹಣ ಹಾಕಿಸಿ, ಅವುಗಳನ್ನು ನಗದೀಕರಣ ಮಾಡಿಕೊಂಡಿದ್ದಾರೆ. ಇವರೆಲ್ಲರೂ ಹೇಳಿಕೆ ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಈ ಹಣವನ್ನು ಯಾರು ಯಾವ ಕಾರಣಕ್ಕೆ ಯಾರಿಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಂಶ ಬೆಳಕಿಗೆ ಬರಬೇಕು.
ನಮ್ಮ ಬಗ್ಗೆ ಏನೇ ಮಾಹಿತಿ ಇದ್ದರೂ ಇದರ ವಿಚಾರವನ್ನು ಮಾಧ್ಯಮಗಳ ವಿವೇಚನೆಗೆ ಬಿಡುತ್ತೇವೆ. ಕೆಲ ಮಾಧ್ಯಮಗಳು ಈ ರೈತರ ಜತೆ ಮಾತುಕತೆ ನಡೆಸಿವೆ. ಇವರು ಹೇಳಿಕೊಂಡಿರುವ ವಿಚಾರ ಬಯಲಾಗಿದ್ದು, ಈ ಬಗ್ಗೆ ತನಿಖೆಯಾಗಬೇಕು.
ಪ್ರತಿ ಬೂತ್ ಗಳಲ್ಲಿ ಮತಗಳನ್ನು ಉಳಿಸಿಕೊಳ್ಳಲು ಜಾಗೃತಿ ಮೂಡಿಸಲು ಮಾರ್ಗದರ್ಶನ ನೀಡಲಾಗುವುದು. ಈ ಸರ್ಕಾರ ಅಲ್ಪಸಂಖ್ಯಾತರು, ಪರಿಶಿಷ್ಟರ ಮತಗಳನ್ನು ಕಿತ್ತುಹಾಕುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅರ್ಜಿ ಹಾಕಿರುವ ಎಲ್ಲರೂ ಹಳ್ಳಿಗಳಿಗೆ ಹೋಗಿ ಪಕ್ಷ ಸಂಘಟನೆ ಮಾಡಬೇಕು. ಕ್ಷೇತ್ರ ಮಟ್ಟದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಹೋರಾಟ ಮಾಡಬೇಕು ಎಂದು ಮಾರ್ಗದರ್ಶನ ನೀಡಲಾಗುವುದು.
ಬಿಜೆಪಿಯ ಮ್ಯಾಚ್ ಫಿಕ್ಸಿಂಗ್; ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ತಗಾದೆ ತೆಗೆಯುತ್ತಿರುವ ವಿಚಾರವಾಗಿ ಮಾತನಾಡಿ, ಇದೆಲ್ಲ ಬಿಜೆಪಿಯ ಮ್ಯಾಚ್ ಫಿಕ್ಸಿಂಗ್. ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ಇದೆ. ಈ ವಿಚಾರವಾಗಿ ಫಡ್ನವೀಸ್ ಏನು ಹೇಳಿದ್ದಾರೆ? ಅವರು ಬೆಳಗಾವಿ ಮಾತ್ರವಲ್ಲ, ಕಾರವಾರವನ್ನು ಕಬಳಿಸಲು ನೋಡುತ್ತಿದ್ದಾರೆ.
ಇದೆಲ್ಲವೂ ಪೂರ್ವನಿಯೋಜಿತ ಷಡ್ಯಂತ್ರ. ರಾಜ್ಯದ ಒಂದು ಅಡಿ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆ ಇಲ್ಲ. ರಾಜ್ಯದಲ್ಲಿರುವ ಮರಾಠಿಗರು ನಮ್ಮ ರಾಜ್ಯದವರೇ. ಅವರ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ಸರ್ಕಾರಗಳು ಅದನ್ನು ಮಾಡಿಕೊಂಡು ಬರುತ್ತಿವೆ. ಈಗ ರಾಜಕೀಯ ಉದ್ದೇಶಕ್ಕೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.