ಸಿದ್ದರಾಮಯ್ಯ ಬಂದ ಮೇಲೆ ಕಾಂಗ್ರೆಸ್ ಪಕ್ಷದ ದಲಿತರು ಸರ್ವನಾಶವಾಗಿ ಹೋದರು-ಛಲವಾದಿ ನಾರಾಯಣಸ್ವಾಮಿ
ಹುಬ್ಬಳ್ಳಿ, ಫೆಬ್ರವರಿ 14: ಮುಖ್ಯಮಂತ್ರಿ ಸಿದ್ದರಾಮಯ್ಯ ನಂತಹ ಸೋಗಲಾಡಿ ಇನ್ನೊಬ್ಬರಿಲ್ಲ ಎಂದು ಬಿಜೆಪಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಲಿತರ ಮೇಲೆ ಸಿದ್ದರಾಮಯ್ಯಗೆ ಕಾಳಜಿ ಇಲ್ಲ. ಸಿದ್ದರಾಮಯ್ಯ ಬಂದು ಕಾಂಗ್ರೆಸ್ ಪಕ್ಷದಲ್ಲಿನ ದಲಿತರು ಸರ್ವನಾಶವಾಗಿ ಹೋದರು ಎಂದು ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಮಂತ್ರಿ ಅಭ್ಯರ್ಥಿಗೆ ಸೂಚನೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಸೂಚಿಸಿರುವುದು ಟಿಎಂಸಿ ಲೀಡರ್ ಮಮತಾ ಬ್ಯಾನರ್ಜಿ. ಅದು ಕಾಂಗ್ರೆಸ್ಗೆ ಇರುಸು ಮರುಸು ತಂದಿದೆ. ಎರಡು ಮೂರು ಸಲ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಆಗುವ ಅವಕಾಶ ಇತ್ತು. ಆಗ ಅವರನ್ನು ಯಾಕೆ ಸಿಎಂ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ದೇಶದಲ್ಲಿ ಇನ್ನೊಂದು ಐವತ್ತು ವರ್ಷದಲ್ಲಿ ಕಾಂಗ್ರೆಸ್ ಅಸ್ತಿತ್ವದಲ್ಲಿ ಇರುತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಸದ್ಯ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಯಾವುದೇ ಸೂಚನೆ ಇಲ್ಲವೇ ಇಲ್ಲ. ಕಾಂಗ್ರೆಸ್ನವರು ನಮಗೆ ರಾಹುಲ್ ಗಾಂಧಿ ಬೇಕು ಎಂದಿದ್ದಾರೆ. ಈ ಮೂಲಕ ಖರ್ಗೆ ಅವರ ಹೆಸರನ್ನು ವಿರೋಧ ಮಾಡಿದ್ದಾರೆ. ಕರ್ನಾಟಕದಲ್ಲಿ ನಾಲ್ಕು,ಐದು ಬಾರಿ ಅವಕಾಶಗಳು ಬಂದಿದ್ದವು. ಅವರನ್ನು ಮುಖ್ಯಮಂತ್ರಿ ಮಾಡಬಹುದಿತ್ತು. ಒಂದು ಮುಖ್ಯಮಂತ್ರಿಯನ್ನೇ ಕೊಡಲಾರದವರು ಪ್ರಧಾನಿ ಸ್ಥಾನ ಕೊಡುತ್ತಾರೆಯೇ ಎಂದರು.
ಸದಾಶಿವ ಆಯೋಗ ಜಾರಿ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ಎನ್ನುವುದು ಒಂದು ದುಷ್ಟಕೋಟ. ಕಾಂಗ್ರೆಸ್ ಜೊತೆಗೆ ಯಾರು ಸ್ನೇಹ ಮಾಡಬಾರದು. ಸದಾಶಿವ ಆಯೋಗ ಜಾರಿಗೆ ತಂದರೂ, ಕಾಂಗ್ರೆಸ್ನವರು ಆಯೋಗ ಮಾಡಿ ಮೇಲೆ ಯಾವುದೇ ಹಣ ಕೊಡಲಿಲ್ಲ. ನಂತರ ಯಡಿಯೂರಪ್ಪನವರು ಬಂದ ಮೇಲೆ ಅದಕ್ಕೆ ಹಣ ಕೊಟ್ಟರು.

ಆರು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರ ಇತ್ತು. ಒಂದು ದಿನ ಸಹ ಚಕಾರ ಎತ್ತಲಿಲ್ಲ, ತಾಕತ್ ಇದ್ದವರು ಆವಾಗ ಜಾರಿ ಮಾಡಬಹುದು ಇತ್ತು. ನಮಗೆ ಹೇಳುವರು ಏನು ಮಾಡಿದರು. ಈಗ ಕೇಂದ್ರಕ್ಕೆ 341 ಕಲಂಗೆ ತಿದ್ದುಪಡಿ ಜಾರಿ ತನ್ನಿ ಅಂತಾ ಕಳುಹಿಸಿದ್ದಾರೆ. ಆದರೆ ಆಯೋಗದ ಶಿಫಾರಸ್ಸು ಜಾರಿ ಮಾಡಿ ಅಂತಾ ಹೇಳಲಿಲ್ಲ.
ಇದರಲ್ಲಿ ನಾವು ಕೂಡ ಒಂದು ತಪ್ಪು ಮಾಡಿದೆವು. ಚುನಾವಣಾ ಸಂದರ್ಭದಲ್ಲಿ ಜಾರಿ ಮಾಡಿದವು. ಆದರೆ ಅದರಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಅದರಲ್ಲಿನ ನ್ಯೂನತೆಗಳನ್ನು ಜನರಿಗೆ ಹೇಳಲಿಲ್ಲ. ಇದರಿಂದ ಗೊಂದಲ ಉಂಟಾಯಿತು. ನಾವು ಚುನಾವಣೆಗೆ ಒಂದು ವರ್ಷ ಅಥವಾ ಆರು ತಿಂಗಳು ಮೊದಲೇ ಮಾಡಬೇಕಿತ್ತು. ಇದರಲ್ಲಿ ಅನೇಕ ಅಪಪ್ರಚಾರವನ್ನು ಮಾಡಿದವರು ಕಾಂಗ್ರೆಸ್ನವರು ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications