ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಜನವರಿ 9 ರಂದು ಅಂತಿಮ ನಿರ್ಧಾರ: ಅನಿಲ್ ಕುಮಾರ್
ಕೋಲಾರ, ಜನವರಿ 3: ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಉತ್ತಮ ಆಡಳಿತ ನೀಡಿದ್ದಾರೆ. ಇಂತಹವರ ಬಗ್ಗೆ ವರ್ತೂರ್ ಪ್ರಕಾಶ್ ಹಗುರವಾಗಿ ಮಾತನಾಡುತ್ತಾರೆ. ಅಲ್ಲದೆ ಒಂದು ಸುಳ್ಳನ್ನು ನೂರು ಸಾರಿ ಸುಳ್ಳು ಹೇಳಿ ನಿಜ ಮಾಡಲು ಹೋಗುತ್ತಿದ್ದಾರೆ, ವರ್ತೂರು ಪ್ರಕಾಶ್ ಒಬ್ಬ ಮಹಾನ್ ಸುಳ್ಳುಗಾರ ಎಂದು ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್ ಕಿಡಿಕಾರಿದರು.
ಈ ಕುರಿತು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಜನವರಿ 9 ರಂದು ಕೋಲಾರ ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ. ಅಂದು ನೂರಕ್ಕೆ ನೂರರಷ್ಟು ಕೋಲಾರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸ್ಪಷ್ಟವಾದಂತಹ ತೀರ್ಮಾನ ಹೇಳುತ್ತಾರೆ. ಸಿದ್ದರಾಮಯ್ಯ ಸ್ಪರ್ಧೆಗೆ ಸಂಬಂಧಿಸಿದ ಎಲ್ಲಾ ಗೊಂದಲಗಳಿಗೆ ಅಂದು ತಿಲಾಂಜಲಿ ಇಡುತ್ತಾರೆ ಎಂದು ಹೇಳಿದರು.
ವಿರೋಧಿಗಳು ಸಿದ್ದರಾಮಯ್ಯ ವಿರುದ್ಧ ಬೇಕಂತಲೇ ಅಪಪ್ರಚಾರ ಮಾಡುತ್ತಿದ್ದಾರೆ
ಜನವರಿ 9ರಂದು ನಗರದ ಜ್ಯೂನಿಯರ್ ಕಾಲೇಜಿನ ಮಿನಿ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಮಾಡುತ್ತಿದ್ದೇವೆ. ಅಂದು ಸುಮಾರು 10 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಸಭೆಯಲ್ಲಿ ಭಾಗಿಯಾಗುತ್ತಿದ್ದಾರೆ. ಬೇರೆಯವರ ರೀತಿ ನಾವು ಯಾವುದೇ ಟೋಕನ್ ಕೊಟ್ಟು ಅಥವಾ ಬಿರಿಯಾನಿ ಊಟಗಳನ್ನು ಹಾಕಿಸಿ ಸಭೆಗೆ ಕರೆತರುತ್ತಿಲ್ಲ. ಕೋಲಾರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮಾತ್ರ ಸಭೆಗೆ ಬರುತ್ತಾರೆ. ಅಂದು ಕೋಲಾರ ಕ್ಷೇತ್ರದವರು ಬಿಟ್ಟು ಹೊರಗಡೆಯಿಂದ ಯಾರೂ ಬರುವುದಿಲ್ಲ. ಕಳೆದ ಬಾರಿ ಸಿದ್ದರಾಮಯ್ಯ ಬಂದಾಗಲೂ ಅಷ್ಟೇ ಕ್ಷೇತ್ರ ಬಿಟ್ಟು ಹೊರಗಿನವರು ಯಾರೂ ಬಂದಿಲ್ಲ. ಆದ್ರೆ ವಿರೋಧಿಗಳು ಬೇಕಂತಲೇ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅನಿಲ್ ಕುಮಾರ್ ಕಿಡಿಕಾರಿದರು.

ವರ್ತೂರು ಪ್ರಕಾಶ್ ಅವರಿಗೆ ತಲೆಗೂ ನಾಲಿಗೆಗೂ ಕನೆಕ್ಷನ್ ಇಲ್ಲ
ವರ್ತೂರು ಪ್ರಕಾಶ್ ಅವರಿಗೆ ತಲೆಗೂ ನಾಲಿಗೆಗೂ ಕನೆಕ್ಷನ್ ಇಲ್ಲ. ಏನು ಬೇಕಾದ್ರು ಮಾತಾಡ್ತಾರೆ. 2018ರ ಚುನಾವಣೆ ಪೂರ್ವದಲ್ಲೂ ಇದೇ ರೀತಿ ಮಾತಾಡಿದರು. ಸಿದ್ದರಾಮಯ್ಯನವರ ಬಗ್ಗೆಯೂ ಹಗುರವಾಗಿ ಮಾತನಾಡಿದರು. ಇದರ ಪರಿಣಾಮ 10 ವರ್ಷಗಳ ಕಾಲ ಶಾಸಕರೂ, ಸಚಿವರೂ ಆಗಿದ್ದ ಅವರು 3ನೇ ಸ್ಥಾನಕ್ಕೆ ಕುಸಿದರು. 2 ಲಕ್ಷ 25 ಸಾವಿರ ಮತಕ್ಕೆ ಕೇವಲ 34 ಸಾವಿರ ಮತಗಳನ್ನಷ್ಟೇ ಪಡೆದರು. ವರ್ತೂರು ಪ್ರಕಾಶ್ ಮಹಾನ್ ಸುಳ್ಳುಗಾರ. ಶ್ರೀನಿವಾಸಗೌಡರ ಅಭಿವೃದ್ಧಿ ಕಾರ್ಯಗಳು ಏನಾಗಿವೆ ನಿಮ್ಮ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗಿದ್ದವು ಎಂದು ವರ್ತೂರ್ ಪ್ರಕಾಶ್ ಅವರನ್ನು ಪ್ರಶ್ನಿಸಿದರು. ಅವರ ಕಾರ್ಯಕ್ರಮಗಳಿಗೆ ಚೇರ್ ಗಳು, ಪಟಾಕಿಗಳು, ಬಿರಿಯಾನಿ ಊಟ ಎಲ್ಲವೂ ಕೋಲಾರದಿಂದಲೇ ಹೋಗುವುದು. ಇನ್ನು ಬೇರೆ ಬೇರೆ ಕ್ಷೇತ್ರಗಳಿಂದ ಅಭಿಮಾನಿಗಳನ್ನು ಕರೆಸುತ್ತಾರೆ ಎಂದು ವ್ಯಂಗ್ಯವಾಡಿದರು.












Click it and Unblock the Notifications