ಸೇಮ್ ಕಾರು ಖರೀದಿಸಿ ಯಡಿಯೂರಪ್ಪಗೆ ಟಕ್ಕರ್ ಕೊಟ್ಟ ಯತ್ನಾಳ್, ಇದರ ಬೆಲೆ ಎಷ್ಟು?
ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ಯತ್ನಾಳ್ ಬಣದವರು ಹೈಕಮಾಂಡ್ ಮನವೊಲಿಸಿ ಮತ್ತೆ ಪಕ್ಷಕ್ಕೆ ವಾಪಸ್ ಕರೆತರುವ ಪ್ರಯತ್ನದಲ್ಲಿದ್ದಾರೆ. ಹೀಗಿರುವಾಗಲೇ ಯತ್ನಾಳ್ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕುತೂಹಲವೆಂದರೆ ಇಂತದ್ದೇ ಕಾರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಬಳಿಯೂ ಇದೆ. ಅಂತಹ ಕಾರನ್ನೇ ಖರೀದಿಸುವ ಮೂಲಕ ಬಿಎಸ್ವೈಗೆ ಟಕ್ಕರ್ ಕೊಟ್ರಾ ಎಂಬ ಮಾತು ಕೇಳಿಬರುತ್ತಿದೆ.
ಹೌದು, ಯತ್ನಾಳ್ ಅವರು ಸುಮಾರು ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುವ ಟೊಯೋಟಾ ವೆಲ್ಫೈರ್ ಐಷಾರಾಮಿ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರಿಸಿದ್ದಾರೆ. ಈ ಕಾರಿಗೆ ಯತ್ನಾಳ್ ಅವರ ಪುತ್ರ ವಿಶೇಷ ಪೂಜೆ ಸಲ್ಲಿಸಿ ಬರಮಾಡಿಕೊಂಡಿದ್ದಾರೆ. ಹೊಸ ಪಕ್ಷ ಕಟ್ಟುವ ಚಿಂತನೆಯಲ್ಲಿರುವ ಯತ್ನಾಳ್ ಅವರು ರಾಜ್ಯ ಪ್ರವಾಸ ಮಾಡುವುದಾಗಿ ಇತ್ತೀಚೆಗೆ ಹೇಳಿದ್ದರು. ಹಾಗಾಗಿ ರಾಜ್ಯ ಪ್ರವಾಸ ಮಾಡುವ ಕಾರಣಕ್ಕಾಗಿಯೇ ಈ ದುಬಾರಿ ಕಾರನ್ನು ಯತ್ನಾಳ್ ಅವರು ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಅಚ್ಚರಿ ವಿಚಾರ ಅಂದ್ರೆ ಇದೇ ಕಾರನ್ನು ಈ ಹಿಂದೆ ಬಿಜೆಪಿಯ ಯಡಿಯೂರಪ್ಪ ಅವರೂ ಖರೀದಿಸಿದ್ದರು. ಅವರು ಕೂಡ ರಾಜ್ಯ ಪ್ರವಾಸ ಮಾಡಲೆಂದೇ ಒಂದೂವರೆ ಕೋಟಿ ರೂಪಾಯಿ ಬೆಲೆಬಾಳುವ ವೆಲ್ಫೈರ್ ಕಾರು ಖರೀದಿಸಿದ್ದರು. ಈಗ ಯತ್ನಾಳ್ ಅವರು ಕೂಡ ಅಂತದ್ದೇ ಕಾರನ್ನು ಖರೀದಿಸುವ ಮೂಲಕ ಬಿಎಸ್ವೈ ಕುಟುಂಬಕ್ಕೆ ಟಕ್ಕರ್ ಕೊಟ್ಟಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಎಸ್.ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರು ಬಂದಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಯಡಿಯೂರಪ್ಪ ಅವರು ರಾಜ್ಯದಲ್ಲಿ ಪಕ್ಷ ಸಂಘಟನೆಯ ಹೊಣೆ ಹೊತ್ತಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದ ಅವರು ತಮ್ಮ ರಾಜ್ಯ ಪ್ರವಾಸಕ್ಕೆಂದು ಕೋಟಿ ರೂಪಾಯಿ ಬೆಲೆ ಬಾಳುವ ಹೊಸ ಟೊಯೊಟಾ ವೆಲ್ಫೈರ್ ಕಾರನ್ನು ಖರೀದಿಸಿದ್ದರು.

ಈ ವೆಲ್ಫೈರ್ ಕಾರನ್ನು ಕೆಲವೇ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಜೆಡಿಎಸ್ ನಾಯಕ ರೇವಣ್ಣ ಅವರ ಪತ್ನಿ ಭವಾನಿ ಅವರೂ ಇದೇ ಕಾರನ್ನು ಖರೀದಿಸಿದ್ದಾರೆ. ಈ ದುಬಾರಿ ಕಾರಿನಲ್ಲಿ ಹಲವು ವಿಶೇಷತೆಗಳಿದ್ದು, ನೆಮ್ಮದಿಯ ಪ್ರಯಾಣದ ಅನುಭವ ನೀಡುತ್ತದೆ ಎಂದು ಹೇಳಲಾಗಿದೆ. ಈ ಕಾರಿನ ಬೆಲೆ ಸುಮಾರು ಒಂದೂವರೆ ಕೋಟಿ ರೂಪಾಯಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.
ಜನರೇ ಹೊಸ ಪಕ್ಷ ಕಟ್ಟಲು ನನಗೆ ಸಲಹೆ ಕೊಡ್ತಿದ್ದಾರೆ. ಈ ಬಗ್ಗೆ ವಿಜಯದಶಮಿ ವೇಳೆಗೆ ನಿರ್ಧಾರ ಪ್ರಕಟಿಸುತ್ತೇನೆ. ನಾನು ಯಾವ ಕಾರಣಕ್ಕೂ ಮತ್ತೆ ದೆಹಲಿಗೆ ಹೋಗುವುದಿಲ್ಲ, ಉಚ್ಛಾಟನೆ ಮರುಪರಿಶೀಲನೆ ಮಾಡಿ ಎಂದು ಮನವಿ ಕೂಡ ಮಾಡಲ್ಲ. ನಾನು ಹಿಂದೂಗಳ ಪರವಾಗಿ ಹೋರಾಟ ಮಾಡುವೆ. ಇದಕ್ಕಾಗಿ ಇಡೀ ರಾಜ್ಯ ಪ್ರವಾಸ ಮಾಡುತ್ತೇನೆ. ಹಿಂದೂಗಳ ರಕ್ಷಣೆ ಹಾಘೂ ಉತ್ತರ ಕರ್ನಾಟಕ ಭಾಗದ ಬಗ್ಗೆ ಧ್ವನಿ ಎತ್ತುವವರು ಯಾರೂ ಇಲ್ಲ. ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಯತ್ನಾಳ್ ಹೇಳಿದ್ದರು, ಇದೇ ಕಾರಿನಲ್ಲಿ ರಾಜ್ಯ ಸುತ್ತಲಿದ್ದಾರೆ ಎನ್ನಲಾಗಿದೆ.












Click it and Unblock the Notifications