'ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ತನಿಖೆಯ ನಾಟಕ ಮಾಡಿದೆ'
ಬೆಂಗಳೂರು, ಆಗಸ್ಟ್. 24 : 'ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದರು.
ಗುರುವಾರ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಸಿಐಡಿ ತನಿಖೆಯಲ್ಲಿ ಲೋಪವಾಗಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದರು.

'ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಯಾರ ಸೂಚನೆಯಂತೆ ಸಾಕ್ಷಿಗಳನ್ನು ನಾಶ ಮಾಡಲಾಗಿದೆ? ಎಂದು ಸರ್ಕಾರ ಹೇಳಿಕೆ ನೀಡಬೇಕು. ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ವಹಿಸಬೇಕು' ಎಂದು ಆಗ್ರಹಿಸಿದರು.
'ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಚು ನಡೆಸಿ ಸಾಕ್ಷಿಗಳನ್ನು ನಾಶ ಮಾಡಲಾಗಿದೆ. ಕೆಂಪಯ್ಯ ಅವರ ಕೈವಾಡ ಇದರಲ್ಲಿದೆ. ಅವರ ಸೂಚನೆಯಂತೆಯೇ ಫೋಟೋಗಳು, ದೂರವಾಣಿ ಕರೆಗಳ ಮಾಹಿತಿ ನಾಶ ಮಾಡಲಾಗಿದೆ' ಎಂದು ಆರೋಪಿಸಿದರು.
'ಸರ್ಕಾರ ಎಸಿಬಿ, ಸಿಐಡಿಗಳನ್ನು ಸಾಕ್ಷಿಗಳ ನಾಶಕ್ಕೆ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ಅನುಪಮಾ ಶೆಣೈ, ಕಲ್ಲಪ್ಪ ಹಂಡಿಭಾಗ್, ಡಿ.ಕೆ.ರವಿ ಮುಂತಾದ ಪ್ರಾಮಾಣಿಕ ಅಧಿಕಾರಿಗಳಿಗೆ ಉಸಿರು ಗಟ್ಟಿಸುವ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿತ್ತು' ಎಂದು ದೂರಿದರು.
'ರಾಜ್ಯ ಸರ್ಕಾರ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆಯ ನಾಟಕ ಮಾಡಿದೆ. ಸರ್ಕಾರ ತನ್ನ ಇಚ್ಛೆಗೆ ಬೇಕಾದಂತೆ ವರದಿ ಮಾಡಿಸಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಬಹಿರಂಗವಾಗಿದೆ' ಎಂದರು.
'ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ದೂರು ಕೊಡುತ್ತೇನೆ. ಆಗಸ್ಟ್ 25ರಂದು ರಾಜನಾಥ್ ಸಿಂಗ್ ಭೇಟಿ ಮಾಡಲಾಗುವುದು' ಎಂದರು.












Click it and Unblock the Notifications