ಪಟಾಕಿ ಅವಘಡ ಚಿಕಿತ್ಸೆಗೆಂದು 30 ಹಾಸಿಗೆ ಮೀಸಲಿಟ್ಟ ಮಿಂಟೋ ಆಸ್ಪತ್ರೆ
ಬೆಂಗಳೂರು, ಅಕ್ಟೋಬರ್ 23: ಕರ್ನಾಟಕದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆಚರಣೆ ವೇಳೆ ಪಟಾಕಿ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬೆಂಗಳೂರು ಮಿಂಟೋ ಕಣ್ಣಿನ ಆಸ್ಪತ್ರೆಯು ದಿನ 24 ಗಂಟೆಯು ಸೇವೆ ಒದಗಿಸಲಿದೆ. ಅದಕ್ಕಾಗಿ ಹಾಸಿಗೆಯನ್ನು ಮೀಸಲಿಟ್ಟಿದೆ.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಸ್ಪತ್ರೆ ನಿದೇಶಕಿ ಡಾ.ಸುಜಾತಾ ಅವರು, ದೀಪಾವಳಿ ಹಬ್ಬದ ಬದುಕಲ್ಲಿ ಬೆಳಗಾಬೇಕು. ಕತ್ತಲೆಗೆ ನೂಕಬಾರದು. ಪಟಾಕಿ ಹೊಡೆಯುವಾಗಿ ಕೈಗೆ, ಕಣ್ಣಿಗೆ ಗಾಯಗಳು ಆಗುವ ಸಾಧ್ಯತೆ ಇರುತ್ತದೆ. ಈ ನಿಟ್ಟಿನಲ್ಲಿ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ತೆರದು ಒಟ್ಟು 30 ಹಾಸಿಗೆಗಳನ್ನು ಚಿಕಿತ್ಸೆಗೆಂದು ಮೀಸಲಿಡಲಾಗಿದೆ ಎಂದರು.
ಪಟಾಕಿಯಿಂದ ಬದುಕು ಕತ್ತಲಾಗದಿರಲಿ... ಪಟಾಕಿ ಸಿಡಿಸುವಾಗ ಹುಷಾರ್!
ರಾಜ್ಯ ಸರ್ಕಾರ ಹಸಿರು ಪಟಾಕಿ ಹೊರತುಪಡಿಸಿ ಉಳಿದೆಲ್ಲವನ್ನು ನಿಷೇಧಿಸಿದೆ. ಇಂತಿಷ್ಟೇ ಸಮಯದಲ್ಲಿ ಪಟಾಕಿ ಹೊಡೆಯೇಬೇಕು ಎಂದು ಸೂಚಿಸಿದೆ. ಹಸಿರು ಪಟಾಕಿಯಲ್ಲಿ ರಾಸಾಯನಿಕಗಳ ಪ್ರಮಾಣ ಶೇ. 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಮಾಲಿನ್ಯ ಕಾರಕವಲ್ಲದ ಇನ್ನಿತರ ರಸಾಯನಿಕ ಬಳಕೆ ಮಾಡಲಾಗುತ್ತದೆ. ಆದರೆ ಅವುಗಳಿಂದಲೂ ಹೆಚ್ಚು ಸದ್ದು ಹೊರ ಬರುತ್ತದೆ. ಈ ವೇಳೆಯೂ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ವೈದ್ಯರಿಂದ 24ಗಂಟೆಯು ಸೇವೆ
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ದಿನದ 24ಗಂಟೆಯು ರೋಗಿಗಳಿಗೆ ಚಿಕಿತ್ಸೆ ಲಭ್ಯವಿದೆ. ಸಮರ್ಪಕ ಔಷಧಿಗಳು ಲಭ್ಯವಿದ್ದು, ಅಗತ್ಯ ವೈದ್ಯರು, ಸಿಬ್ಬಂದಿಗಳಿಗೆ ಒಂದು ವಾರ ರಜೆ ನೀಡಲಾಗಿಲ್ಲ. ಅಗತ್ಯ ಸಿಬ್ಬಂದಿಗಳು ದಿನಪೂರ್ತಿ ಸೇವೆ ನೀಡಲು ಸಜ್ಜಾಗಿದ್ದಾರೆ. ಬೆಂಗಳೂರು ಸೇರಿದಂತೆ ಇನ್ನತರ ಕಡೆಗಳಲ್ಲಿ ಈರೀತಿ ಪಟಾಕಿ ಅವಘಡಗಳು ಸಂಭವಿಸಿದರೆ, ತುರ್ತ ಚಿಕಿತ್ಸೆ ಬೇಕಾದರೆ ಆಸ್ಪತ್ರೆಗೆ ದಾಖಲಾಬಹುದು. ಜೊತೆಗೆ ಸಹಾಯವಾಣಿ- 94808 32430ಗೆ ಸಂಪರ್ಕಿಸುವಂತೆ ಅವರು ಹೇಳಿದರು.
ಪಟಾಕಿ ಅವಘಡ ನಡೆದಾಗ ಮೊದಲ ಏನು ಮಾಡಬೇಕು?
ಪಟಾಕಿ ಹೊಡೆಯುವಾಗ ಅದು ಸಿಡಿದು ಕಣ್ಣಿಗೆ ಪೆಟ್ಟಾದರೆ ಮೊದಲು ಶುಭ್ರ ಬಟ್ಟೆಯಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಕಣ್ಣನ್ನು ಉಜ್ಜುವುದು, ತೊಳೆದುಕೊಳ್ಳುವುದು, ಊದುವುದನ್ನು ಮಾಡಬಾರದು. ನಂತರ ಕೂಡಲೇ ಹತ್ತಿರ ಕಣ್ಣಿನ ಆಸ್ಪತ್ರೆ ತೆರಳಿ ವೈದ್ಯರನ್ನು ಸಂಪರ್ಕಿಸಬೇಕು. ಪಟಾಕಿ ಸಿಡಿದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆಯಾಗುವ ಜೊತೆಗೆ ಸುಟ್ಟ ಪಟಾಕಿ ಪುಡಿ ಮೈಗೆ ಮೆಟ್ಟುವುದು ತಪ್ಪಲಿದೆ ಎಂದು ವಿವರಿಸಿದರು.
ಪಟಾಕಿ ಹೊಡೆಯುವ ಪ್ರಕ್ರಿಯೆ ಹೀಗಿರಲಿ
ದೀಪಗಳ ಹಬ್ಬ ದೀಪಾವಳಿ ಆಚರಣೆಯಲ್ಲಿ ಪಟಾಕಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಪಟಾಕಿ ಹೊಡೆಯುವಾಗ ಚೂರು ಯಾಮಾರಿದರೂ ಸಾಕಷ್ಟು ದುಷ್ಪರಿಣಾಮ ಬೀರುವ ಸಾಧ್ಯತೆಯು ಇದೆ. ಆದ್ದರಿಂದ ಪಟಾಕಿ ಹೇಗೆ ಹಚ್ಚಬೇಕು ಎಂದು ವೈದ್ಯರು ಕೆಲವು ಸಲಹೆ ನೀಡಿದ್ದಾರೆ.
ಐಎಸ್ಐ ಗುರುತು ಇರುವ ಹಸಿರು ಪಟಾಕಿಗಳನ್ನು ಮಾತ್ರವೇ ಗುರುತಿಸಿ, ಪಟಾಕಿಗಳ ಮೇಲಿನ ಎಚ್ಚರಿಕೆ ನಿಯಮ ಗಮನಿಸಿ ಹಾಗೂ ಪಾಲಿಸಿ. ಎರಡರಿಂದ ಮೂರು ಅಡಿ ದೂರ ನಿಂತು ಪಟಾಕಿ ಹಚ್ಚಿ. ಉದ್ದನೆಯ ಕೋಲು ಬಳಸುವ ಜೊತೆಗೆ ಮೈದಾನ ಜನ ಕಡಿಮೆ ಇರುವ ಸ್ಥಳವನ್ನು ಪಟಾಕಿ ಸಿಡಿಸಲು ಆಯ್ಕೆ ಮಾಡಿಕೊಳ್ಳಿ. ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ಸ್ಥಳದಲ್ಲಿ ಪಟಾಕಿಗಳನ್ನು ಸಂಗ್ರಹಿಸಿಡಬೇಡಿ.
ಪಟಾಕಿ ಹೊಡೆಯಲು ಗಾಜಿನ ಬಳಕೆ ಅಪಾಯಕಾರಿ
ಪಟಾಕಿ ಹಚ್ಚುವಾಗ ಗಾಜಿನ ಸಿಸೆ, ಬಾಟಲಿಗಳನ್ನು ಬಳಸಬೇಡಿ, ಏಕೆಂದರೆ ಬಾಟಲಿ ಸಿಡಿದು ನಿಮ್ಮ ಕಣ್ಣಿಗೆ ಗಾಯ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. ಮಕ್ಕಳನ್ನು ಪಟಾಕಿ ಸಿಡಿಸುವಂತೆ, ಅಥವಾ ಒಂಟಿಯಾಗಿ ಪಟಾಕಿ ಸಿಡಿಸಲು ಅವಕಾಶ ಕೊಡಬೇಡಿ. ಕೈಯಿಂದ ಸಹ ಪಟಾಕಿ ಹೊಡೆಯಬಾರದು. ಹಲವುಬಾರಿ ಕೈಯಲ್ಲಿಯೇ ಪಟಾಕಿ ಸಿಡಿದು ಅನಾಹುತಗಳು ಆಗಿದ್ದು ಉಂಟು ಎಂದು ನಿರ್ದೇಶಕಿ ಡಾ.ಸುಜಾತಾ ಅವರು ತಿಳಿಸಿದರು.