'ಅಲ್ಲಾ ಮೇಲಾಣೆ, ನಾನೇ ಸೂಸೈಡ್ ಬಾಂಬ್ ಹಾಕೊಂಡು ಪಾಕ್ ಮೇಲೆ ಯುದ್ಧ ಮಾಡ್ತೀನಿ'
ಪೆಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಮೇಲೆ ಯುದ್ಧದ ಎಚ್ಚರಿಕೆ ನೀಡಿ ಅಲರ್ಟ್ ಆಗಿದೆ. ಕೇಂದ್ರ ಸರ್ಕಾರದ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲವೂ ಇದೆ ಎಂದು ಕಾಂಗ್ರೆಸ್ ಕೂಡ ಹೇಳಿದೆ. ಇದೀಗ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಮ್ಮದೇ ಶೈಲಿಯಲ್ಲಿ ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಮಾತುಗಳನ್ನಾಡಿದ್ದಾರೆ. ಅಗತ್ಯವಿದ್ದರೆ ನಾನೇ ಪಾಕಿಸ್ತಾನದ ಮೇಲೆ ಯುದ್ಧ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾರೆ.
ನಾವು ಭಾರತೀಯರು, ನಾವು ಹಿಂದೂಸ್ತಾನಿ, ನಮಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಪಾಕಿಸ್ತಾನದ ಜೊತೆ ಯುದ್ಧ ಮಾಡಬೇಕು ಅಂದ್ರೆ ನಾನು ರೆಡಿ. ಮಂತ್ರಿಯಾಗಿ ಅದು ನನ್ನ ಕರ್ತವ್ಯ. ನಾನು ಪಾಕಿಸ್ತಾನಕ್ಕೆ ಹೋಗಿ ಯುದ್ಧ ಮಾಡಲು ಸಿದ್ಧ ಎಂದು ಘೋಷಿಸಿದ್ದಾರೆ. ನಾನೇ ಯುದ್ಧ ಮಾಡ್ತೀನಿ, ನಡೀರಿ ದೇಶಕ್ಕಾಗಿ ಹೋಗೋಣ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನನಗೆ ಅವಕಾಶ ಕೊಟ್ರೆ, ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ನಾನೇ ಹೋಗ್ತೀನಿ. ಪಾಕಿಸ್ತಾನ ಎಂದಿಗೂ ನಮಗೆ ಸಂಬಂಧವಿಲ್ಲ ಎಂದು ಜಮೀರ್ ವೀರಾವೇಶದ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನ ಎಂದಿಗೂ ನಮ್ಮ ಶತ್ರು ದೇಶ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಲಿ. ಮೋದಿ ಹಾಗೂ ಅಮಿತ್ ಶಾ ನನಗೆ ಅವಕಾಶ ಕೊಡ್ಲಿ, ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋಕೆ ಸಿದ್ಧನಿದ್ದೀನಿ. ನಾನು ಸುಮ್ಮನೆ ತಮಾಷೆಗೆ ಈ ಮಾತು ಹೇಳ್ತಿಲ್ಲ. ಅಲ್ಲಾ ಮೇಲಾಣೆ, ದೇವರ ಮೇಲಾಣೆ, ನನ್ನ ಮಾತಿಗೆ ನಾನು ಬದ್ಧ. ನಾನೇ ಆತ್ಮಾಹುತಿ ಬಾಂಬ್ ಕಟ್ಕೊಂಡು ಪಾಕಿಸ್ತಾನಕ್ಕೆ ಹೋಗ್ತೀನಿ, ನಮ್ಮ ಪ್ರಧಾನಿಗಳು ನನಗೆ ಅನುಮತಿ ನೀಡಲಿ ಎಂದು ಹೇಳಿಕೆ ನೀಡಿದ್ದಾರೆ.
ತನ್ನ ಕ್ಷೇತ್ರದಲ್ಲಿ ಸೂಸೈಡ್ ಬಾಂಬರ್ ಆಗಲಿ
ಜಮೀರ್ ಹೇಳಿಕೆ ಬಗ್ಗೆ ಬಿಜೆಪಿ ನಾಯಕ ಡಿವಿ ಸದಾನಂದ ಗೌಡ ವ್ಯಂಗ್ಯವಾಡಿದ್ದಾರೆ. ಜಮೀರ್ ಪಾಕಿಸ್ತಾನಕ್ಕೆ ಹೋಗಿ ಸೂಸೈಡ್ ಬಾಂಬರ್ ಆಗೋದೆಲ್ಲ ಬೇಡ, ಅವರು ಮೊದಲು ತಮ್ಮ ಕ್ಷೇತ್ರದಲ್ಲಿ ಸೂಸೈಡ್ ಬಾಂಬರ್ ಆಗಿ ಆತ್ಮಾಹುತಿ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ನಮ್ಮ ಭಾಗದಲ್ಲಿ ಯಕ್ಷಗಾನಕ್ಕೆ ಮೊದಲು ಒಬ್ಬ ಹಾಸ್ಯಗಾರ ಜನರನ್ನು ರಂಜಿಸಲು ಬರುತ್ತಾರೆ. ಈ ಜಮೀರ್ ಕೂಡ ಅವರಂತೆಯೇ ಎಂದು ವ್ಯಂಗ್ಯವಾಡಿದ್ದಾರೆ.

ಜಮೀರ್ ಪಾಕಿಸ್ತಾನಕ್ಕೆ ಹೋಗಿ ಬಾಂಬ್ ಹಾಕೋದು ಬೇಡ, ಮೊದಲು ಅವರ ಕ್ಷೇತ್ರದಲ್ಲಿ ಅವರು ಆತ್ಮಾಹುತಿ ಬಾಂಬರ್ ಆಗಲಿ. ಜಮೀರ್ ಆತ್ಮಾಹುತಿ ಬಾಂಬರ್ ಆದರು ಎಂದು ಜಗತ್ತಿಗೆ ಒಂದು ಸಂದೇಶ ಹೋಗಲಿ, ಅದನ್ನು ಬಿಟ್ಟು ಸುಮ್ಮನೆ ಮನರಂಜನೆಗೆ ಮಾತನಾಡುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಜಮೀರ್ಗೆ ಟಾಂಗ್ ನೀಡಿದ್ದಾರೆ. ಬಾಂಬ್ ಕಟ್ಟಿಕೊಂಡು ಪಾಕ್ ಗಡಿಗೆ ಹೋಗುತ್ತೇನೆ ಎನ್ನುವ ಸಚಿವ ಜಮೀರ್ ಅಹ್ಮದ್ ಖಾನ್ ಶಾಂತವಾಗಿದ್ದರೆ ಸಾಕು. ನೀವು ಏನು ಮಾಡುವುದೂ ಬೇಡ. ಸುಮ್ಮನಿದ್ದರೆ ಅದೇ ಸಾಕು. ಸೇನೆಯನ್ನು ನಂಬಿ ಸುಮ್ಮನಿರುವುದು ಒಳ್ಳೆಯದು ಎಂದು ಜೋಶಿ ಕಿವಿಮಾತು ಹೇಳಿದ್ದಾರೆ.












Click it and Unblock the Notifications