ನಟ ದರ್ಶನ್ ಕೇಸ್ ಪಬ್ಲಿಕ್ ಮ್ಯಾಟ್ರೇ ಅಲ್ಲ: ಹೀಗಂದಿದ್ಯಾರು?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರ ಫೋಟೋ ಲೀಕ್ ಆಗಿದ್ದು, ದರ್ಶನ್ ಸಿಗರೇಟ್ ಸೇದಿಕೊಂಡು ಆರಾಮಾಗಿದ್ದಾರೆ ಎಂಬ ವಿಚಾರ ರಾಜ್ಯದಲ್ಲೆಡೆ ಸಂಚಲನ ಸೃಷ್ಟಿಸಿದೆ. ಇದೇ ವೇಳೆ ದರ್ಶನ್ ಕೇಸ್ ವಿಚಾರವು ಪಬ್ಲಿಕ್ ಮ್ಯಾಟ್ರೇ ಅಲ್ಲ ಎಂದು ರಾಜಕಾರಣಿಯೊಬ್ಬರು ಹೇಳಿರುವುದು ಗಮನ ಸೆಳೆದಿದೆ.
ಜೈಲಿನಲ್ಲಿ ನಟ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರವಾಗಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಬಳಿ ಮಾಧ್ಯಮಗಳು ಪ್ರಶ್ನೆ ಎತ್ತಿದಾಗ ಈ ರೀತಿ ಉತ್ತರಿಸಿದ್ದಾರೆ. ದರ್ಶನ್ ವಿಚಾರ ಸಾರ್ವಜನಿಕ ಹಿತಾಸಕ್ತಿಯ ವಿಷಯವೇ ಅಲ್ಲ. ಎಲ್ಲದಕ್ಕೂ ಉತ್ತರ ಕೊಡಲು ಆಗುವುದಿಲ್ಲ. ಅದು ಆ ಇಲಾಖೆಗೆ ಸಂಬಂಧಿಸಿರುವ ವಿಚಾರ. ಹಾಗಾಗಿ ಈ ವಿಚಾರಕ್ಕೆ ಇಲಾಖೆಯವರೇ ಉತ್ತರ ಕೊಡಬೇಕು ಎಂದಿದ್ದಾರೆ.

ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಚಾರವೇ ಅಲ್ಲ. ದರ್ಶನ್ಗೆ ರಾಜಾತಿಥ್ಯ ನೀಡಿದ್ದರೆ ಅದರ ಬಗ್ಗೆ ಕ್ರಮ ಜರುಗಿಸಲು ಇಲಾಖೆಯಲ್ಲಿ ಸಂಬಧಪಟ್ಟ ಅಧಿಕಾರಿಗಳು ಇದ್ದಾರೆ. ಹಾಗಾಗಿ ಅವರೇ ಈ ಬಗ್ಗೆ ಉತ್ತರಿಸಿದರೆ ಅದಕ್ಕೊಂದು ಮಹತ್ವ ಇರುತ್ತದೆ. ಅದು ಬಿಟ್ಟು ಈ ವಿಚಾರವನ್ನು ರಾಜ್ಯದ ಜೊತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಗಳೊಂದಿಗೆ ಸಿಗರೇಟ್ ಸೇದಿಕೊಂಡು ಕುಳಿತಿರುವ ಫೋಟೋ ನಿನ್ನೆ ಲೀಕ್ ಆಗಿತ್ತು. ಈ ಫೋಟೋ ಎಲ್ಲೆಡೆ ಹರಿದಾಡಿ, ಜೈಲಿನಲ್ಲಿ ದರ್ಶನ್ ಅವರಿಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೆ ಈ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಅವರು ಜೈಲಿನ ಅಧಿಕಾರಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅವರೂ ಈ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ, ಜೈಲಿನ ಏಳು ಮಂದಿ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಲ್ಲದೆ, ದರ್ಶನ್ ಹಾಗೂ ಇತರೆ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಫೋಟೊ ಲೀಕ್ ಆಗಿದ್ದು ಹೇಗೆ?: ಜೈಲಿನಲ್ಲಿ ದರ್ಶನ್ ಹೇಗಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಜೈಲಿನಲ್ಲಿ ದರ್ಶನ್ ಮೋಜು ಮಸ್ತಿ ಮಾಡುತ್ತಿರುವುದು ಒಂದೆಡೆ ಶಾಕ್ ನೀಡಿದ್ದರೆ, ಈ ಫೋಟೊ ಲೀಕ್ ಆಗಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲಿ ಬಂದು ನಿಂತಿದೆ. ಮೂಲಗಳ ಪ್ರಕಾರ ಜೈಲಿನಲ್ಲಿರುವ ಕೈದಿಯೊಬ್ಬ ಈ ಫೋಟೊ ತೆಗೆದು ತನ್ನ ಹೆಂಡತಿಗೆ ವಾಟ್ಸಾಪ್ ಮಾಡಿದ್ದನಂತೆ. ಬಳಿಕ ಫೋಟೋ ಅಲ್ಲಿಂದಲೇ ಲೀಕ್ ಆಗಿದೆ ಎಂದು ಹೇಳಲಾಗುತ್ತಿದೆ. ಫೋಟೋದಲ್ಲಿ ದರ್ಶನ್ ಮೂರ್ನಾಲ್ಕು ಮಂದಿಯೊಂದಿಗೆ ಕುಳಿತು ಜಾಲಿಯಾಗಿ ಮಾತುಕತೆ ನಡೆಸುತ್ತಿದ್ದು, ಅದರಲ್ಲಿ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಕೂಡ ಇದ್ದಾನೆ ಎನ್ನಲಾಗಿದೆ. ಸದ್ಯ ಜೈಲು ಸೇರಿದ್ದರೂ ಒಳಗೆ ಆರಾಮದಾಯಕವಾಗಿ ಟೀ ಕುಡಿಯುತ್ತಾ, ಹರಟೆ ಹೊಡೆಯುತ್ತಿರುವ ಫೋಟೊ ವೈರಲ್ ಆದ ಬೆನ್ನಲ್ಲೇ ದರ್ಶನ್ಗೆ ರಾಜಾತಿಥ್ಯ ನೀಡಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.












Click it and Unblock the Notifications