ಆದಿಚುಂಚನಗಿರಿ ಶ್ರೀಗಳು ಬಿಜೆಪಿಯ ಸಿಎಂ ಅಭ್ಯರ್ಥಿಯೇ? ಆರ್.ಅಶೋಕ್ ಹೇಳಿದ್ದೇನು!
ಯಡಿಯೂರಪ್ಪನವರು ಸಿಎಂ ಹುದ್ದೆಗೆ ಪದತ್ಯಾಗ ಮಾಡಿದ ಸನ್ನಿವೇಶವನ್ನೊಮ್ಮೆ ಮೆಲುಕು ಹಾಕಿಕೊಳ್ಳೋಣ. ಕರ್ನಾಟಕದ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಚರ್ಚೆ ಜೋರಾಗಿಯೇ ನಡೆಯುತ್ತಿತ್ತು. ಬಿಜೆಪಿಯ ವರಿಷ್ಠರು ಕೂಡಾ ಕೊಂಚ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ.
ಅರವಿಂದ್ ಬೆಲ್ಲದ್, ಜಗದೀಶ್ ಶೆಟ್ಟರ್, ಬಸನಗೌಡ ಪಾಟೀಳ್ ಯತ್ನಳ್, ಬೊಮ್ಮಾಯಿ ಈ ರೀತಿ ಹಲವು ಹೆಸರುಗಳು ಸಿಎಂ ಅಭ್ಯರ್ಥಿ ಎಂದು ಮುನ್ನಲೆಗೆ ಬರುತ್ತಿತ್ತು. ಆ ಸಂದರ್ಭದಲ್ಲಿ ಮುನ್ನಲೆಗೆ ಬಂದಿದ್ದ ಇನ್ನೊಂದು ಹೆಸರೆಂದರೆ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀಗಳಾದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರದ್ದು.
ಆದಿಚುಂಚನಗಿರಿ ಶ್ರೀಗಳನ್ನು ಸಿಎಂ ಮಾಡಲು ಪ್ಲಾನ್: ಮೈಸೂರಿನಲ್ಲಿ ಚಂದ್ರಗುರು ಆರೋಪ
ಇದಕ್ಕೆ ಕಾರಣ ಇಲ್ಲದಿರಲ್ಲಿಲ್ಲ, ಯಾಕೆಂದರೆ ಉತ್ತರ ಪ್ರದೇಶದ ಗೋರಖನಾಥ ಮಠ ಮತ್ತು ಆದಿಚುಂಚನಗಿರಿ ಮಠವು ನಾಥ ಸಂಪ್ರದಾಯವನ್ನು ಪಾಲಿಸಿಕೊಂಡು ಬರುತ್ತಿರುವಂತದ್ದು. ಇದಲ್ಲದೇ, ಗೋರಖನಾಥ ಮಠದ ಪೀಠಾಧಿಪತಿಯೂ, ಉತ್ತರ ಪ್ರದೇಶದ ಸಿಎಂ ಕೂಡಾ ಆಗಿರುವ ಯೋಗಿ ಆದಿತ್ಯನಾಥ್ ಅವರು ಆ ವೇಳೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದರು.
ಒಕ್ಕಲಿಗ ಸಮುದಾಯದ ಪ್ರಮುಖ ಪೀಠವಾಗಿರುವುದರಿಂದ, ಆದಿಚುಂಚನಗಿರಿ ಶ್ರೀಗಳ ಹೆಸರು ಆ ವೇಳೆ ಮುನ್ನಲೆಗೆ ಬಂದಿತ್ತು. ಆದರೆ, ಬಸವರಾಜ ಬೊಮ್ಮಾಯಿಯವರ ಹೆಸರನ್ನು ಯಡಿಯೂರಪ್ಪ ಸೂಚಿಸಿದ್ದರಿಂದ ಅವರು ಸಿಎಂ ಆದರು. ಈಗ ಮತ್ತೆ, ಬಿಜೆಪಿಯ ಮುಂದಿನ ಸಿಎಂ ನಿರ್ಮಲಾನಂದ ಶ್ರೀಗಳು ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಸಚಿವ ಆರ್.ಆಶೋಕ್ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಸ್ವಾಮೀಜಿಗಳ ಹೆಗಲ ಮೇಲೆ ಕೈ ಫೋಟೋ, ಬಿಜೆಪಿಗೆ ಕಾಂಗ್ರೆಸ್ ಪಾಠ
ಮೈಸೂರಿನಲ್ಲಿ ಮಾತನಾಡುತ್ತಿದ್ದ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಮಾತನಾಡುತ್ತಿದ್ದ ಪ್ರಗತಿಪರ ಚಿಂತಕ ಪ್ರೊ.ಮಹೇಶ್ ಚಂದ್ರಗುರು, "ಚುಂಚನಗಿರಿ ಶ್ರೀಕ್ಷೇತ್ರಕ್ಕೆ ಒಂದು ದೊಡ್ಡ ಇತಿಹಾಸ ಇದೆ. ಹಿಂದಿನ ಶ್ರೀಗಳಾದ ಬಾಲಗಂಗಾಧರನಾಥ ಸ್ವಾಮೀಜಿಗಳು ಶಿಕ್ಷಣ, ದಾಸೋಹಕ್ಕೆ ಆದ್ಯತೆಯನ್ನು ನೀಡಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಬಹುದೊಡ್ಡ ಪ್ಲಾನ್ ರೂಪಿಸಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಸಿಎಂ ಮಾಡಲು ಬಿಜೆಪಿ ಯೋಜನೆ ಹಾಕಿಕೊಂಡಿದೆ"ಎಂದು ಇವರು ಆರೋಪಿಸಿದ್ದರು.
ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟನೆ
ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್, "ಯಾವುದೇ ಕಾರಣಕ್ಕೂ ನಿರ್ಮಲಾನಂದನಾಥ ಶ್ರೀಗಳನ್ನು ನಮ್ಮ ಪಕ್ಷ ಸಿಎಂ ಅಭ್ಯರ್ಥಿ ಎಂದು ಬಿಂಬಿಸುವುದಿಲ್ಲ. ಆದಿಚುಂಚನಗಿರಿ ಶ್ರೀಗಳು ಮಾತ್ರವಲ್ಲ, ರಾಜ್ಯದ ಯಾವುದೇ ಪೀಠಾಧಿಪತಿಗಳು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂದು ಸಚಿವರು ಸ್ಪಷ್ಟನೆಯನ್ನು ನೀಡಿದ್ದಾರೆ.
ರಾಜಕೀಯದಿಂದ ನಾನು ಬಹಳ ದೂರವಿದ್ದೇನೆ, ಆದಿಚುಂಚನಗಿರಿ ಶ್ರೀಗಳು
"ರಾಜಕೀಯದಿಂದ ನಾನು ಬಹಳ ದೂರವಿದ್ದೇನೆ, ನಮಗೆಲ್ಲರೂ ಭಕ್ತರೇ ಎನ್ನುವ ಮಾತನ್ನು ಶ್ರೀಗಳು ನನ್ನ ಬಳಿ ಹೇಳಿದ್ದಾರೆ. ಈಗ ನಡೆಯುತ್ತಿರುವ ಚರ್ಚೆಗಳು ಆಧಾರ ರಹಿತ ಮತ್ತು ಸತ್ಯಕ್ಕೆ ದೂರವಾದದು. ಮುಂದಿನ ಚುನಾವಣೆಯನ್ನು ನಾವು ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲೇ ಎದುರಿಸುತ್ತೇವೆ. ಬಹುಮತ ಬಂದ ನಂತರ ಸಿಎಂ ಯಾರಾಗಬೇಕು ಎನ್ನುವುದನ್ನು ವರಿಷ್ಠರು ನಿರ್ಧರಿಸುತ್ತಾರೆ"ಎಂದು ಅಶೋಕ್ ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಕೆಲಸವನ್ನು ಮಾಡಿದ್ದಾರೆ.
ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ಸಿ ಎನ್.ರವಿಕುಮಾರ್
"ಒಕ್ಕಲಿಗ ಪೀಠದ ಶ್ರೀಗಳನ್ನು ಸಿಎಂ ಮಾಡಬೇಕೆನ್ನುವ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ, ಯಾಕೆಂದರೆ ನನಗೆ ಆ ಬಗ್ಗೆ ತಿಳಿದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ಸಿನ ರಥಯಾತ್ರೆ ಯಾವುದೇ ರೀತಿಯಲ್ಲಿ ಬಿಜೆಪಿಗೆ ಕೌಂಟರ್ ಆಗುವುದಿಲ್ಲ. ನಾವೇ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತೇವೆ"ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಎಂಎಲ್ಸಿ ಎನ್.ರವಿಕುಮಾರ್ ಹೇಳಿದ್ದಾರೆ.