ಬಿಜೆಪಿಯವರ ಅಪಪ್ರಚಾರವೇ ಅವರಿಗೆ ತಿರುಗುಬಾಣ- ಸಚಿವ ಪ್ರಿಯಾಂಕ್ ಖರ್ಗೆ
ಹಾಸನ, ಡಿಸೆಂಬರ್ 05: ಕನ್ನಡಿಗರ ಆಶೀರ್ವಾದ, ಬೆಂಬಲ, ಪ್ರೋತ್ಸಾಹದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿ ಆಡಳಿತ ನಡೆಸುತ್ತಿದೆ. ಆದರೆ ಇದನ್ನು ಸಹಿಸದ ಬಿಜೆಪಿಗರು ರಾಜ್ಯ ಸರ್ಕಾರದ ಮೇಲೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ವಾಸ್ತವವಾಗಿ ಅದು ಅವರಿಗೆ ತಿರುಗುಬಾಣವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಹಾಸನದಲ್ಲಿ ಆಯೋಜಿಸರುವ ಜನಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನದ ಜನರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ. ಕರ್ನಾಟಕದಲ್ಲಿ ಮತ್ತು ಹಾಸನದಲ್ಲಿ ಸ್ವಾಭಿಮಾನಕ್ಕೆ, ಸಂವಿಧಾನಕ್ಕೆ ಆದ್ಯತೆ ನೀಡಿರುವುದು ನಮಗೆಲ್ಲ ಹೆಚ್ಚಿನ ಶಕ್ತಿ ತುಂಬಿದೆ.

ಉತ್ತರ ಭಾರತದ ರಾಜ್ಯಗಳು ಸಹ ಕರ್ನಾಟಕದ ಗ್ಯಾರಂಟಿಗಳ ಬಗ್ಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಹೆಚ್ಚಿನ ಅಭಿವೃದ್ಧಿಯೊಂದಿಗೆ ಗ್ಯಾರಂಟಿಗಳನ್ನು ಸಹ ಮನೆಬಾಗಿಲಿಗೆ ತಲುಪಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯೊಂದಿಗೆ ನವ ಕರ್ನಾಟಕ ನಿರ್ಮಾಣ ಮಾಡುವುದಕ್ಕೆ, ಪ್ರತಿಯೊಬ್ಬರಿಗೂ ಸಾಮಾಜಿಕವಾಗಿ, ಆರ್ಥಿಕವಾಗಿ, ಸ್ವಾಭಿಮಾನದ ಬದುಕು ಕಟ್ಟಿಕೊಡುವುದಕ್ಕೆ ಮುಂದಾಗಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪ್ರಗತಿಪರ ಆಲೋಚನೆಗಳು ಇರುತ್ತೇವೆ. ಆದರೆ ಬಿಜೆಪಿ ಸರ್ಕಾರದಲ್ಲಿ ಇದ್ಯಾವುದು ಇರುವುದಿಲ್ಲ ಎಂದು ಬಿಜೆಪಿ ವಿರುದ್ಧ ಲೇವಡಿ ಮಾಡಿದರು.
ಸಂವಿಧಾನವನ್ನು ನಾಶ ಮಾಡುವುದಕ್ಕೆ ರಾಜ್ಯದ ಅಭಿವೃದ್ಧಿಯನ್ನು ತಡೆಯುವುದಕ್ಕಾಗಿ ಸಿಬಿಐ, ಐಟಿ, ಇಡಿ ಮೂಲಕ ಬಿಜೆಪಿ ಸತತ ಪ್ರಯತ್ನ ಪಡುತ್ತಿದೆ. ಆದರೆ ಕನ್ನಡಿಗರಾದ ನಾವು ಅದಕ್ಕೆ ಅವಕಾಶ ಮಾಡಿ ಕೊಡದೆ ಸಂವಿಧಾನ ರಕ್ಷಣೆ ಮಾಡುವುದಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕಿದೆ ಎಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಾಸನದಲ್ಲಿ ನಡೆಯುತ್ತಿರುವ ಜನಕಲ್ಯಾಣ ಸಮಾವೇಶಕ್ಕೆ ರಾಜ್ಯದ ಮೂಲೆಮೂಲೆಯಿಂದ ಬಂದು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದು, ಕಾಂಗ್ರೆಸ್ ಪಕ್ಷದೊಂದಿಗೆ ನಾವಿದ್ದೇವೆ ಎಂದು ತೋರಿದ್ದಾರೆ. ಸರ್ವರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications