ಕರ್ನಾಟಕ ಸಮರ್ಥವಾಗಿದೆ ಎಂದು ಆಂಧ್ರಗೆ ತಿರುಗೇಟು: ಏನಿದು ಆಂಧ್ರ - ಕರ್ನಾಟಕ ವಿವಾದ ?
ಆಂಧ್ರ ಪ್ರದೇಶಕ್ಕೆ ಬನ್ನಿ ಎಂದು ಉದ್ಯಮಗಳಿಗೆ ಆಹ್ವಾನ ನೀಡಿರುವ ಆಂಧ್ರ ಪ್ರದೇಶದ ಸಚಿವ ನಾ.ರಾ ಲೋಕೇಶ್ಗೆ ಟ್ವೀಟ್ ಮೂಲಕವೇ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಆತ್ಮೀಯ ನಾರಾ ಲೋಕೇಶ್ ಅವರೇ, ಕರ್ನಾಟಕವು ಕೇವಲ ಭೂಮಿಯನ್ನು ನೀಡುವುದಿಲ್ಲ - ಇದು ಭಾರತದ ನಂ.1 ಏರೋಸ್ಪೇಸ್ ಮತ್ತು ರಕ್ಷಣಾ ಪರಿಸರ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಕರ್ನಾಟಕವೂ ಸರ್ಮಥವಾಗಿದೆ ಎಂದು ಹೇಳಿ, ಆಂಧ್ರಕ್ಕೂ ಶುಭವಾಗಲಿ ಎಂದಿದ್ದಾರೆ.
ನಾವು ದಶಕಗಳಲ್ಲಿ ದೇಶದ ಪ್ರಬಲ ಏರೋಸ್ಪೇಸ್ ನೆಲೆಯನ್ನು ನಿರ್ಮಿಸಿದ್ದೇವೆ. ಭಾರತದ ಏರೋಸ್ಪೇಸ್ ಉತ್ಪಾದನೆಯ 65% ಕೊಡುಗೆ ನೀಡುತ್ತಿದ್ದೇವೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಂ.1, ಜಾಗತಿಕವಾಗಿ 3 ನೇ ಸ್ಥಾನದಲ್ಲಿದ್ದೇವೆ. ಇದು ಕೇವಲ ಭೂಮಿಯ ಬಗ್ಗೆ ಅಲ್ಲ. ಏನು ಮಾಡಬೇಕು, ಯಾವಾಗ ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕೆಂದು ನಮಗೆ ತಿಳಿದಿದೆ. ಯಾವುದೂ ಕೈ ಜಾರುವುದಿಲ್ಲ. $1 ಟ್ರಿಲಿಯನ್ ಆರ್ಥಿಕತೆಯನ್ನು ತಲುಪಿದ ಮೊದಲ ರಾಜ್ಯಗಳಲ್ಲಿ #ಕರ್ನಾಟಕ ಒಂದಾಗಿದೆ ಮತ್ತು ಇದು ಕೇವಲ ಏರೋಸ್ಪೇಸ್ ಅಲ್ಲ; ಅನೇಕ ಹೊಸ ಕೈಗಾರಿಕೆಗಳು ಕರ್ನಾಟಕವನ್ನು ಆಯ್ಕೆ ಮಾಡುತ್ತಲೇ ಇರುತ್ತವೆ. ಅಸ್ತಿತ್ವದಲ್ಲಿರುವ ಕಂಪನಿಗಳು ಇಲ್ಲಿ ವಿಸ್ತರಿಸುತ್ತಲೇ ಇರುತ್ತವೆ. ಬೆಳವಣಿಗೆ ಮತ್ತು ಹೊಸ ಹೂಡಿಕೆಗಳನ್ನು ಬೆಂಬಲಿಸಲು ಅಗತ್ಯವಿರುವ ಭೂಮಿ ಮತ್ತು ಪರಿಸರ ವ್ಯವಸ್ಥೆಯನ್ನು ನಾವು ಯಾವಾಗಲೂ ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ರಾಜ್ಯಕ್ಕೂ ಶುಭಾಶಯಗಳು ಎಂದು ಎಂ. ಬಿ ಪಾಟೀಲ್ ಅವರು ಹೇಳಿದ್ದಾರೆ.

ಎಂ ಬಿ ಪಾಟೀಲ್ಗೂ ಸಾಮರ್ಥ್ಯವಿದೆ. ಕರ್ನಾಟಕ ರಾಜ್ಯಕ್ಕೂ ಸಮರ್ಥವಾಗಿದೆ. ಒಬ್ಬೇ ಒಬ್ಬರು ಉದ್ಯಮಿಯೂ ಕರ್ನಾಟಕದಿಂದ ಹೊರಗೆ ಹೋಗಲು ನಾವು ಬಿಡುವುದಿಲ್ಲ. ಕರ್ನಾಟಕದಲ್ಲಿ ಕೈಗಾರಿಕಾ ಪ್ರದೇಶಗಳಿಗೆ ನಮ್ಮ ಪಾಲಿನ ನೀರು ಬಳಸಿಕೊಳ್ಳುವುದಕ್ಕೆ 3,600 ಕೋಟಿ ರೂಪಾಯಿ ವೆಚ್ಚದಲ್ಲಿ ಸಮಗ್ರ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಆಂಧ್ರ ಸಚಿವ ನಾರಾ ಲೋಕೇಶ್ ಹೇಳಿದ್ದೇನು ?
ಭೂಸ್ವಾಧೀನ ಪ್ರಕ್ರಿಯೆಯನ್ನು ಕರ್ನಾಟಕ ಸರ್ಕಾರ ಕೈಬಿಟ್ಟ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಸಚಿವ ನಾರಾ ಲೋಕೇಶ್ ಅವರು ಆತ್ಮೀಯ ಏರೋಸ್ಪೇಸ್ ಉದ್ಯಮಿಗಳೇ ಇದರ ಬಗ್ಗೆ ಕೇಳಿ ಬೇಸರವಾಯಿತು. ನಿಮಗಾಗಿ ನನ್ನ ಬಳಿ ಇದಕ್ಕಿಂತ ಉತ್ತಮವಾದ ಐಡಿಯಾ ಇದೆ. ನೀವು ಆಂಧ್ರಪ್ರದೇಶವನ್ನು ಏಕೆ ನೋಡಬಾರದು? ಅತ್ಯುತ್ತಮ ಪ್ರೋತ್ಸಾಹ ಧನ ಮತ್ತು 8000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ (ಬೆಂಗಳೂರಿನ ಹೊರಗೆ) ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು ನಾವು ನಿಮಗಾಗಿ ಹೊಂದಿದ್ದೇವೆ! ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗಲು ಆಶಿಸುತ್ತೇವೆ 😊 ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಹೊಸ ವಿವಾದ: ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ನಡುವೆ ಉತ್ತಮ ಸಂಬಂಧವಿದೆ. ಆದರೆ, ಆಂಧ್ರ ಪ್ರದೇಶದ ಸಚಿವ ನಾರಾ ಲೋಕೇಶ್ ಅವರು ಕೊಟ್ಟಿರುವ ಹೇಳಿಕೆಯು ಹೊಸ ವಿವಾದಕ್ಕೆ ಕಾರಣವಾಗಿದೆ. ಎರಡೂ ರಾಜ್ಯಗಳ ನಡುವೆ ಐಟಿ -ಬಿಟಿಗೆ ಭಾರೀ ಪೈಪೋಟಿ ಇದೆ. ಈ ಹಿಂದೆ ಅಖಂಡ ಆಂಧ್ರಪ್ರದೇಶವಿದ್ದಾಗ ಹೈದರಾಬಾದ್ ನಗರವನ್ನು ಬೆಂಗಳೂರಿಗೆ ಪೈಪೋಟಿ ಕೊಡುವಂತೆ ಆಂಧ್ರಪ್ರದೇಶದ ಸಿಎಂ ಆಗಿರುವ ಚಂದ್ರಬಾಬು ನಾಯ್ಡು ಅವರು ಅಭಿವೃದ್ಧಿಪಡಿಸಿದ್ದರು. ಇದೀಗ ಅಮರಾವತಿ ಪ್ರದೇಶವನ್ನು ಆಂಧ್ರ ರಾಜಧಾನಿ ಹಾಗೂ ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದಾರೆ.












Click it and Unblock the Notifications