ಯಡಿಯೂರಪ್ಪ ಬುರುಡೆ ಶಂಕರ: ಕಾಗೋಡು ತಿಮ್ಮಪ್ಪ ವ್ಯಂಗ್ಯ
ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಮೊದಲು ತಮ್ಮ ವಿರುದ್ಧದ ಪ್ರಕರಣಗಳನ್ನು ಮರೆತುಬಿಟ್ಟರಾ ಎಂದು ಪ್ರಶ್ನಿಸಿದ ಕಂದಾಯ ಸಚಿವರು.
ಬೆಂಗಳೂರು, ಫೆಬ್ರವರಿ 22: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಓರ್ವ ಬುರುಡೆ ಶಂಕರ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುವ ಯಡಿಯೂರಪ್ಪನವರಿಗೆ ತಮ್ಮ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳು ಮರೆತೋ ಹೋದವೇ'' ಎಂದು ಪ್ರಶ್ನಿಸಿದ್ದಾರೆ.[ಸಿದ್ದು ಮೇಲೆ ಕಲಬುರಗಿಯಲ್ಲಿ ಬಿಎಸ್ವೈ ಭ್ರಷ್ಟಾಚಾರದ ಅಸ್ತ್ರ]
ಉದ್ಯಾನ ನಗರಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಉಕ್ಕಿನ ಸೇತುವೆ ಯೋಜನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕುಟುಂಬ, 65 ಕೋಟಿ ರು. ಕಿಕ್ ಬ್ಯಾಕ್ ಪಡೆದಿದೆ ಎಂದು ಯಡಿಯೂರಪ್ಪ ಇತ್ತೀಚೆಗೆ ಆರೋಪಿಸಿದ್ದರು. ಬುಧವಾರ ಕಲಬುರಗಿಯಲ್ಲೂ ಇದೇ ಆರೋಪವನ್ನು ಮಾಡಿದ್ದರು.[ಸಿದ್ದು ವಿರುದ್ಧ ಆರೋಪ ಸುಳ್ಳಾದರೆ ರಾಜಕೀಯ ನಿವೃತ್ತಿ: ಯಡಿಯೂರಪ್ಪ]
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಗೋಡು ತಿಮ್ಮಪ್ಪ, ''ಮಾಜಿ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರು ವಿವೇಚನೆಯಿಂದ ಮಾತನಾಡುವುದನ್ನು ಕಲಿಯಬೇಕು. ಸಿಎಂ ಆಗಿದ್ದ ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲಿಗೆ ಹಾಕಲು ಎಷ್ಟು ದಿನ ಬೇಕಾಯಿತು. ಅವರು ಜವಾಬ್ದಾರಿಯುತವಾಗಿ ಮಾತನಾಡುವುದನ್ನು ಕಲಿಯಬೇಕು'' ಎಂದು ಅವರು ತಿಳಿಸಿದರು.[ಮದ್ದು ಅರೆದು ಕಳಿಸಿದ ಮೇಲೆ ಮುದ್ದುಗರೆಯುತ್ತಿದ್ದಾರಾ ಬಿಎಸ್ವೈ,ಈಶು?]