20 ಲಕ್ಷ ಕೋಟಿ ಘೋಷಿಸಿದ ಪ್ರಧಾನಿಯನ್ನು ಕೊಂಡಾಡಿದ ಸಚಿವ ಸಿ.ಟಿ.ರವಿ
ಬೆಂಗಳೂರು, ಮೇ.12: ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೊಳ ಪ್ರಜೆಗಳ ನೆರವಿಗಾಗಿ ಪ್ರಧಾನಿ ನರೇಂದ್ರ ಮೋದಿ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಪ್ರಕಟಿಸಿರುವುದು ದೇಶದ ಒಂದು ಚರಿತ್ರಾರ್ಹ ಹೆಜ್ಜೆ' ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಬಣ್ಣಿಸಿದ್ದಾರೆ.
ಪ್ರಧಾನಿ ಘೋಷಿಸಿರುವ ವಿಶೇಷ ಪ್ಯಾಕೇಜ್ ಕುರಿತಂತೆ ಮಾತನಾಡಿದ ಸಚಿವ ಸಿ.ಟಿ.ರವಿ, ಭಾರತದ ರಾಜಕೀಯ ಇತಿಹಾಸದಲ್ಲೇ ಅತೀ ದೊಡ್ಡ ಪ್ಯಾಕೇಜ್ ಇದಾಗಿದ್ದು, ಭಾರತವನ್ನು ಮತ್ತೆ ಮೇಲೆದ್ದು ನಿಲ್ಲಿಸುವ ಪ್ರಯತ್ನವನ್ನು ಮೋದಿ ಮಾಡಿದ್ದಾರೆ ಎಂದು ವ್ಯಾಖ್ಯಾನಿಸಿದ್ದಾರೆ.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆಗೆ ಬಿಎಸ್ ವೈ ಅಭಿನಂದನೆ
ಇದುವರೆಗೂ ಪ್ರಧಾನಿಯವರನ್ನು ಟೀಕಿಸುವವರಿಗೆ ಇದೀಗ ನಿರಾಸೆಯಾಗಿದೆ. ಜನರಲ್ಲಿ ವಿಶ್ವಾಸ ಮೂಡಿದೆ. ಈ ವಿಶ್ವಾಸದ ಆರ್ಥಿಕ ಪ್ಯಾಕೇಜ್ ಭಾರತವನ್ನು ಪುಟಿದೇಳುವಂತೆ ಮಾಡುತ್ತದೆ. ಇದು ವಿಶ್ವಾಸದ ಪ್ಯಾಕೇಜ್ ಆಗಿದ್ದು, ಆರ್ಥಿಕತೆಗೆ ಚೈತನ್ಯ ಕೊಡುತ್ತೆ ಎಂದು ಸಿ.ಟಿ.ರವಿ ಹೇಳಿದ್ದಾರೆ.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಗೆ ಸ್ವಾಗತ:
ದೇಶದಲ್ಲಿ ಘೋಷಿಸಲಾದ ಆರ್ಥಿಕ ಪ್ಯಾಕೇಜ್ ನಿಂದ ಮೂಲಸೌಕರ್ಯಕ್ಕೆ ಆದ್ಯತೆ ಕೊಡುವರ ಜೊತೆಗೆ ಟೆಕ್ನಾಲಜಿ ಬಳಸಿಕೊಂಡು ಜನಸಂಖ್ಯೆಯನ್ನೂ ಜೋಡಿಸಿಕೊಂಡು ಬೇಡಿಕೆ ಆಧರಿಸಿ ಲೋಕಲ್ ನಿಂದ ಗ್ಲೋಬಲ್ ವರೆಗೂ ತೆಗೆದುಕೊಂಡು ಹೋಗಲಿದೆ. ರೈತರು, ಕಾರ್ಮಿಕರು, ಮಧ್ಯಮವರ್ಗದವರು, ಉದ್ದಿಮೆದಾರರು ಸಹಿತ ಎಲ್ಲಾ ವರ್ಗದವರಿಗೂ ಕೊಡುಗೆಯಾಗಿ ನೀಡಿರುವ ಈ ಪ್ಯಾಕೇಜನ್ನು ಸ್ವಾಗತಿಸುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಪ್ರಧಾನಿ ಪ್ರಕಟಿಸಿರುವ ಈ ಪ್ಯಾಕೇಜ್ ಆರ್ಥಿಕ ವಿಷಯದಲ್ಲಿ ನವಚೈತನ್ಯವನ್ನು ಮೂಡಿಸುತ್ತದೆ. ಭಾರತ ಜಾಗತಿಕವಾಗಿ ದೊಡ್ಡ ಪಾತ್ರವನ್ನು ವಹಿಸಲು ಕಾರಣೀಭೂತವಾಗುತ್ತದೆ ಎಂದು ಸಚಿವ ಸಿ.ಟಿ.ರವಿ ವಿಶ್ಲೇಷಣೆ ಮಾಡಿದ್ದಾರೆ.
ಇಂತಹ ಪ್ರಧಾನಿಯನ್ನು ಪಡೆದ ಭಾರತವೇ ಧನ್ಯ:
ಪ್ರಧಾನಿಯವರು ಸ್ವದೇಶೀ ಚಿಂತನೆಗೂ ಆದ್ಯತೆ ನೀಡಿದ್ದಾರೆ. ಭಾರತ ಸ್ವಾಲಂಬನೆಗೂ ಆದ್ಯತೆ ಕೊಟ್ಟಿದ್ದಾರೆ. ಮೇಕ್ ಇನ್ ಇಂಡಿಯಾ ಅನುಷ್ಠಾನವನ್ನು ಕೂಡಾ ಈ ಪ್ಯಾಕೇಜ್ ಮೂಲಕ ಕಾಣುವ ಹಂಬಲ ಮೋದಿಯವರದ್ದು. ಇಂತಹ ಪ್ರಧಾನಮಂತ್ರಿಯನ್ನು ಪಡೆದ ಭಾರತವೇ ಧನ್ಯ ಎಂದು ಸಚಿವ ಸಿ.ಟಿ.ರವಿ ಕೊಂಡಾಡಿದ್ದಾರೆ. ಜಗತ್ತಿನ ಬೇರೆಬೇರೆ ದೇಶಗಳು ಬೇರೆ ಬೇರೆ ಕಾರಣಕ್ಕೆ ಶ್ರೀಮಂತವಾಗಿರಬಹುದು. ಆದರೆ ಇಂತಹ ದೂರದೃಷ್ಟಿಯುಳ್ಳ, ಜನರ ಪರವಾಗಿ ಮಿಡಿಯವ, ಶ್ರೀಮಂತ ಮನಸ್ಥಿತಿಯ ಆತ್ಮ ವಿಶ್ವಾಸ ತುಂಬಬಲ್ಲ ನಾಯಕ ಭಾರತಕ್ಕೆ ಸಿಕ್ಕಿರುವುದು ಸಂತಸದ ಸಂಗತಿ ಎಂದು ಸಿ.ಟಿ. ರವಿ, ನರೇಂದ್ರ ಮೋದಿ ಬಗ್ಗೆ ಗುಣಗಾನ ಮಾಡಿದ್ದಾರೆ.