ಸಿದ್ದರಾಮಯ್ಯ ಕೋಲಾರ ಯಾತ್ರೆ ರಾಜಕೀಯ ಗಿಮಿಕ್: ಶ್ರೀರಾಮುಲು
ಕೋಲಾರ, ನವೆಂಬರ್ 11: ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ನಾಮಪತ್ರ ಸಲ್ಲಿಸುವುದಕ್ಕೆ ನಾನು ಮತ್ತೆ ಕೋಲಾರಕ್ಕೆ ಬರುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರ ಕೋಲಾರ ಭೇಟಿ ಬಗ್ಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ.
ಚುನಾವಣೆ ಗಿಮಿಕ್ಗಾಗಿ ಸಿದ್ದರಾಮಯ್ಯ ರಾಜಕೀಯ: ಶ್ರೀರಾಮುಲು
ಚುನಾವಣೆ ಗಿಮಿಕ್ಗಾಗಿ ಸಿದ್ದರಾಮಯ್ಯ ರಾಜಕೀಯ ಮಾಡ್ತಿದ್ದಾರೆ, ಅವರಿಗೆ ಭವಿಷ್ಯವಿಲ್ಲ ಎಂದು ಸಾರಿಗೆ ಸಚಿವ ಶ್ರಿರಾಮುಲು ಹೇಳಿದರು. ಈ ಬಗ್ಗೆ ಕೊಪ್ಪಳದಲ್ಲಿ ಭಾನುವಾರ ಮಾತನಾಡಿ, ರಾಜಕೀಯ ಪುನರ್ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಜನರಿಗೆ ಸಿದ್ದರಾಮಯ್ಯ ಮೋಸ ಮಾಡ್ತಿದ್ದಾರೆ. ಚುನಾವಣೆ ಗಿಮಿಕ್ಗಾಗಿ ಸಿದ್ದರಾಮಯ್ಯ ಕೋಲಾರ ಯಾತ್ರೆ ಮಾಡ್ತಾಯಿದ್ದಾರೆ ಎಂದು ಸಚಿವ ಶ್ರೀರಾಮುಲು ಹೇಳಿದರು. ಸಿದ್ದರಾಮಯ್ಯ ಅವರನ್ನ ಬಾದಾಮಿ ಜನರು ಯಾವ ಕಾರಣಕ್ಕೂ ಕ್ಷಮಿಸಲ್ಲ. ಸಿದ್ದರಾಮಯ್ಯ ಅವರು ಕೊನೆದಾಗಿ ಸ್ಪರ್ಧೆ ಮಾಡೋದು ವರುಣಾದಲ್ಲೇ. ಆದರೆ ಈಗ ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ ಎಂದು ಶ್ರೀರಾಮುಲು ಭವಿಷ್ಯ ನುಡಿದರು.
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಜಾಸ್ತಿ ಒತ್ತಡ ಇದೆ: ಸಿದ್ದರಾಮಯ್ಯ
ಸಿದ್ದರಾಮಯ್ಯ ಜನರ ಅಟೆನ್ಶನ್ ಡೈವರ್ಟ್ ಮಾಡ್ಲಿಕ್ಕೆ ಪಾದಯಾತ್ರೆ ಮಾಡ್ತಿದ್ದಾರೆ. ಕೋಲಾರದಿಂದ ಡಿಮ್ಯಾಂಡ್ ಕ್ರಿಯೇಟ್ ಮಾಡ್ತಿದ್ದಾರೆ. ರಾಜಕಿಯ ಪುನರ್ಜನ್ಮ ನೀಡಿದ ಬಾದಾಮಿ ಜನರಿಗೆ ಸಿದ್ದರಾಮಯ್ಯ ಕೈ ಕೊಡ್ತಾಯಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಿ ಎಂ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕಿಳಿಸ್ತೀವಿ ವರುಣಾದಿಂದ ಕೂಡಾ ಅವರನ್ನು ಸೋಲಿಸ್ಲಿಕ್ಕೆ ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಾರೆ. ಮಾಜಿ ಸಿ ಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿಗಿಂತ ಅವರ ಪಕ್ಷದ ಡಿ ಕೆ ಶಿವಕುಮಾರ್ ಭಯ ಹೆಚ್ಚಾಗಿದೆ. ಅವರು ಎಲ್ಲೆ ಚುನಾವಣೆಗೆ ನಿಂತರು ಡಿಕೆ ಶಿವಕುಮಾರ್ ಭಯ ಕಾಡ್ತಿದೆ. ಡಿ ಕೆ ಶಿವಕುಮಾರ್ ಪ್ರಭಾವ ಇಲ್ಲದ ಕಡೆಯಲ್ಲಿ ಚುನಾವಣೆ ನಿಲ್ಲಲು ಹುಡುಕಾಟ ನಡೆಸಿದ್ದಾರೆ ಎಂದರು.
ಚುನಾವಣೆಗೆ ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ
ಕೋಲಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವರುಣಾ, ಚಾಮರಾಜನಗರ, ಚಾಮರಾಜಪೇಟೆ, ಸೇರಿ ಹಲವು ಕಡೆ ಸ್ಪರ್ಧೆಗೆ ಒತ್ತಾಯ ಮಾಡುತ್ತಿದ್ದಾರೆ. ನಿಮ್ಮ ಅಭಿಮಾನಕ್ಕೆ ನಾನು ಆಭಾರಿಯಾಗಿದ್ದೇನೆ. ನನ್ನ ಅವಧಿಯಲ್ಲಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಾದಾಮಿ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸಿದ್ದಾರೆ. ಇಂದಿನ ಸರ್ಕಾರ ಜಾತಿ, ಧರ್ಮ ಒಡೆಯುವ ಕೆಲಸ ಮಾಡ್ತಿದೆ. ನಾವು ಎಲ್ಲಾ ಜಾತಿ, ಧರ್ಮಗಳನ್ನು ಸಮನಾಗಿ ಗೌರವಿಸಿದ್ದೇವೆ ಎಂದರು.
ಮುಂಬರುವ ವಿಧಾನಸಭೆ ಚುನಾವಣೆಗೆ ಕ್ಷೇತ್ರದ ಹುಡುಕಾಟದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ ಬಿಜೆಪಿ ನಾಯಕರ ಟೀಕೆಗಳು ಹೆಚ್ಚಾಗಿವೆ. ಇತ್ತ ಕೋಲಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೇರಿದಂತೆ ಅನೇಕರು ಸಿದ್ದರಾಮಯ್ಯರಿಗೆ ಹೂ ಮಳೆ ಗೈದು, ಪಟಾಕಿ ಸಿಡಿಸಿ ಸಂಭ್ರಮದಿಂದ ಬರ ಮಾಡಿಕೊಂಡಿದ್ದಾರೆ.
ಇನ್ನು ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಇಳಿಯುತ್ತಿದ್ದಂತೆ ವಿಶೇಷ ಬಸ್ ಇಳಿದು ಕಾರು ಹತ್ತಿ ಕೋಲಾರಮ್ಮ ದೇಗುಲದತ್ತ ಹೊರಟರು. ಬಳಿಕ ಕೋಲಾರ ದೇವಾಲಯದಲ್ಲಿ ತಾಯಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕೋಲಾರದ ಮುಂದಿನ ಶಾಸಕ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಪರ ಘೋಷಣೆ ಕೂಗಿದರು.
300 ಕೆ ಜಿ ಸೇಬಿನ ಹಾರ ಹಾಕಿ ಕೋಲಾರದಲ್ಲಿ ಸಿದ್ದರಾಮಯ್ಯಗೆ ಭರ್ಜರಿ ಸ್ವಾಗತ
ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ಗೆ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಂತೆ ಸುಮಾರು 300 ಕೆಜಿ ಆ್ಯಪಲ್ ಹಾರ ಹಾಕಿ ಕ್ರಿಶ್ಚಿಯನ್ ಮುಖಂಡರು ಸ್ವಾಗತ ಕೋರಿದ್ದಾರೆ. ಈ ವೇಳೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೃಷ್ಣಬೈರೇಗೌಡ, ಶಾಸಕ ನಂಜೇಗೌಡ, ಶಾಸಕ ಶರತ್ ಬಚ್ಚೇಗೌಡ, ಬೈರತಿ ಸುರೇಶ್, ಎಂಎಲ್ಸಿ ಅನಿಲ್ ಕುಮಾರ್, ಚಿಂತಾಮಣಿ ಸುಧಾಕರ್ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿದ್ದರು.