ಕಾಂಗ್ರೆಸ್ ಪಕ್ಷ 40ರಿಂದ 50 ಶಾಸಕ ಸ್ಥಾನ ಗೆದ್ದರೆ ಅದೇ ಹೆಚ್ಚು: ಅಶ್ವತ್ಥ ನಾರಾಯಣ
ಬೆಂಗಳೂರು, ಜನವರಿ 13: ಕಾಂಗ್ರೆಸ್ ಪಕ್ಷವು 'ಪ್ರಜಾಧ್ವನಿ' ಬಸ್ಸಿನಲ್ಲಿರುವ ಸೀಟಿನಷ್ಟು ಶಾಸಕರನ್ನು ರಾಜ್ಯದಲ್ಲಿ ಗೆದ್ದರೆ ಅದೇ ಹೆಚ್ಚು. ಕಾಂಗ್ರೆಸ್, 40ರಿಂದ 50 ಶಾಸಕ ಸ್ಥಾನ ಗೆಲ್ಲುವುದೂ ಅಸಾಧ್ಯ ಎಂದು ಸಚಿವ ಸಿ.ಎನ್.ಅಶ್ವತ್ಥ ನಾರಾಯಣ್ ಅವರು ತಿಳಿಸಿದರು.
ಈ ಕುರಿತು ಶುಕ್ರವಾರ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ "ಜಗನ್ನಾಥ ಭವನ"ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. 120ಕ್ಕಿಂತ ಹೆಚ್ಚಿದ್ದ ಸ್ಥಾನಗಳನ್ನು 79ಕ್ಕೆ ತಂದ ಸಾಧನೆಯೇ ಸಿದ್ದರಾಮಯ್ಯರದು ಎಂದರು. ನಿದ್ರೆ ರಾಮಯ್ಯ, ಎಸಿಬಿ ರಾಮಯ್ಯ ಸೇರಿ ಹಲವು ಹೆಸರು ಅವರಿಗಿದೆ ಎಂದು ಟೀಕಿಸಿದರು.
ಸಂವಿಧಾನದ ಆಶಯವನ್ನು ಗೌರವಿಸದ, ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿದ ಪಕ್ಷ ಕಾಂಗ್ರೆಸ್. ಭಯಭೀತ ಕಾಂಗ್ರೆಸ್ಸಿಗರು ಹಗಲುಗನಸಿನೊಂದಿಗೆ ಯಾತ್ರೆ ಮಾಡುತ್ತಿದ್ದಾರೆ. 50 ಸೀಟಿನೊಂದಿಗೆ ಎರಡನೇ ಸ್ಥಾನ ಜೆಡಿಎಸ್ಗೆ ಸಿಗುತ್ತದೋ ಅಥವಾ ಕಾಂಗ್ರೆಸ್ ಪಕ್ಷಕ್ಕೋ ಎಂದು ನೋಡಬೇಕಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಕನಿಷ್ಠ ಸ್ಥಾನಕ್ಕೆ ಇಳಿದಂತೆ ಇಲ್ಲಿಯೂ ಆಗಲಿದೆ. ಆ ಪಕ್ಷವು ಭರವಸೆ ಇಲ್ಲದೆ ಸೊರಗಿದೆ ಎಂದು ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ ಪಕ್ಷದ 'ಪ್ರಜಾಧ್ವನಿ' ಪ್ರವಾಸವು ಅರ್ಥಹೀನ ಎಂದು ಟೀಕಿಸಿದರಲ್ಲದೆ, ಕಾಂಗ್ರೆಸ್ ಪಕ್ಷದೊಳಗೆ ಅವರು ಪ್ರಜಾಪ್ರಭುತ್ವ, ಪ್ರಜಾಧ್ವನಿಗೆ ಗೌರವ ಕೊಟ್ಟಿಲ್ಲ. ಆ ಪಕ್ಷದ ಮೂಲಸ್ತಂಭವೇ ಕುಟುಂಬ. ಆ ಪಕ್ಷದಲ್ಲಿ ಪ್ರಜಾಪ್ರಭುತ್ವಕ್ಕೆ ಏನೂ ಮಹತ್ವ ಇಲ್ಲ. ಮಾನ್ಯತೆಯೂ ಇಲ್ಲ. ಆ ಪಕ್ಷವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅದರ ಇಚ್ಛೆ, ಮೂಲ ಉದ್ದೇಶಗಳನ್ನು ಹೇಗೆ ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಮಹದಾಯಿ ಸಮಸ್ಯೆ ಬಗೆಹರಿಸಲು ಅವರಿಗೆ ಆಗಿರಲಿಲ್ಲ. ನಮ್ಮ ಮುಖ್ಯಮಂತ್ರಿ ಬೊಮ್ಮಾಯಿಯವರ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ಕೇಂದ್ರ ಸರಕಾರದ ನೆರವಿನಿಂದ ಡಿಪಿಆರ್ ಒಪ್ಪಿಗೆ ಪಡೆದು ಅನುಷ್ಠಾನಕ್ಕೆ ಬರುತ್ತಿದೆ. ಎತ್ತಿನಹೊಳೆ ವಿಚಾರದಲ್ಲೂ ಅಷ್ಟೇ. ಅದನ್ನು ಬದ್ಧತೆಯಿಂದ ಜಾರಿಗೊಳಿಸುತ್ತಿದ್ದೇವೆ. ಕೃಷ್ಣಾ ಸೇರಿ ನೀರಾವರಿ ವಿಚಾರದಲ್ಲಿ ಬಹಳಷ್ಟು ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇವೆ. ವಿವೇಕಾನಂದ ಕಾರ್ಯಕ್ರಮದ ಮೂಲಕ ರಾಜ್ಯದ ಉದ್ದಗಲಕ್ಕೆ ಶಾಲೆಗಳನ್ನು ಅಭಿವೃದ್ಧಿ ಮಾಡುತ್ತಿದ್ದೇವೆ. ಒಕ್ಕಲಿಗರ ನಿಗಮಕ್ಕೆ ಹಣ ಕೊಟ್ಟಿಲ್ಲ ಎಂಬ ಆಪಾದನೆ ಸತ್ಯಕ್ಕೆ ದೂರವಾದುದು. ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡದೆ ಸುಳ್ಳು ಹೇಳುತ್ತಿರುವವರ ಯಾತ್ರೆ ಇದೆಂದು ಆಕ್ಷೇಪಿಸಿದರು.
ದಲ್ಲಾಳಿಗಳು, ಮಧ್ಯವರ್ತಿಗಳನ್ನು ಬೆಳೆಸಿದ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದು. ಪಟ್ಟಿ ಮಾಡಿರುವುದು ಶಿವಕುಮಾರ್-ಸಿದ್ದರಾಮಯ್ಯ ಅವರದ್ದು. ಅಧಿಕಾರ ದುರ್ಬಳಕೆ ಮಾಡಿ ಭ್ರಷ್ಟಾಚಾರ ಸಂಸ್ಕೃತಿ ಬೆಳೆಸಿದವರು ಕಾಂಗ್ರೆಸ್ಸಿಗರು. ರಾಹುಲ್ ಗಾಂಧಿಯವರು ಭಾರತ್ ಜೋಡೋ ಮಾಡುತ್ತಿದ್ದಾರೆ. ಅವರು ಮೊದಲು ಶಿವಕುಮಾರ್-ಸಿದ್ದರಾಮಯ್ಯ ಅವರನ್ನು ಜೋಡಿಸಲಿ ಎಂದು ಸಿ.ಎನ್.ಅಶ್ವತ್ಥ್ನಾರಾಯಣ್ ಅವರು ಸವಾಲು ಹಾಕಿದರು.
ಕೆ.ಎಚ್.ಮುನಿಯಪ್ಪ, ಪರಮೇಶ್ವರ್, ಖರ್ಗೆ ಸೇರಿ ಹಲವಾರು ನಾಯಕರಿದ್ದಾರೆ. ಇವರ ನಾಯಕರನ್ನು ಜೋಡಿಸಿ ಪಕ್ಷ ಮುಂದೆ ತೆಗೆದುಕೊಂಡು ಹೋಗಬೇಕಿದೆ. ಕಾಂಗ್ರೆಸ್ ಪಕ್ಷವು ವ್ಯಕ್ತಿ ಆಧಾರಿತವಾಗಿದೆ. ನಾವು ಪಕ್ಷ- ಕಾರ್ಯಕರ್ತರ ಆಧರಿತವಾಗಿ ಕೆಲಸ ಮಾಡುತ್ತಿದ್ದೇವೆ. ಇದುವೇ ವ್ಯತ್ಯಾಸ ಎಂದು ತಿಳಿಸಿದರು.
ಸ್ವಾರ್ಥ ರಾಜಕಾರಣ, ಹಿಂದೂ ಧರ್ಮ ವಿಭಜನೆಗೆ ಯತ್ನ, ಜಾತಿ ಭೇದ, ಭ್ರಷ್ಟಾಚಾರ ಮಾಡಿದ್ದು, ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಹಿಂದಕ್ಕೆ ಪಡೆದ ಕಾಂಗ್ರೆಸ್ಸಿಗರು ಇವತ್ತು ಭ್ರಷ್ಟಾಚಾರ ಕುರಿತು ಮಾತನಾಡುತ್ತಾರೆ. 40 ಶೇಕಡಾ ಬಗ್ಗೆ ಮಾತನಾಡುತ್ತಾರೆ. ಶೇ 40ರಿಂದ ಶೇ 100 ಭ್ರಷ್ಟಾಚಾರ ಮಾಡಿದವರು ಕಾಂಗ್ರೆಸ್ನವರು. ಅವರು ಮಾಡಿದ ಕೆಲಸಗಳನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ. ಸಾಕ್ಷಿ, ಆಧಾರಗಳಿಲ್ಲದೆ ಆಪಾದನೆ ಮಾಡುತ್ತಿದ್ದು, ಆರೋಪ ಮಾಡಿದ ಗುತ್ತಿಗೆದಾರರು ಸೆರೆಮನೆಗೆ ಹೋಗಿದ್ದಾರೆ. ಇವರ ಕುಮ್ಮಕ್ಕಿನಿಂದ ಗುತ್ತಿಗೆದಾರ ನ್ಯಾಯಾಲಯದಲ್ಲಿ ಕಣ್ಣೀರು ಹಾಕುವಂತಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನವರು ತಡಕಾಟ, ಹುಡುಕಾಟದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದವರು ಸಂಪೂರ್ಣ ಹತಾಶ ಸ್ಥಿತಿಯಲ್ಲಿದ್ದಾರೆ. ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಯ ಭಯದಿಂದ ತಡೆಯಾಜ್ಞೆ ತಂದ ಸ್ಟೇ ಸಿದ್ದರಾಮಯ್ಯನವರು ಬೇರೆಯವರ ಕುರಿತು ಅವಹೇಳನಕಾರಿ ಹೇಳಿಕೆ ಕೊಡುತ್ತಾರೆ ಎಂದು ಟೀಕಿಸಿದರು. ಪುಸ್ತಕದಲ್ಲಿ ಏನಿದೆ ಎಂದು ನೋಡಿ ಬಳಿಕ ಮಾನನಷ್ಟ ಮೊಕದ್ದಮೆ ಹಾಕಬಹುದಿತ್ತಲ್ಲವೇ ಎಂದು ಕೇಳಿದರು.
ಸಿದ್ದರಾಮಯ್ಯ ಸದನದಲ್ಲಿ ತಮ್ಮ ಪೌರುಷವನ್ನು ಯಾಕೆ ತೋರಿಸುತ್ತಿಲ್ಲ? ತುಂಬ ವಿಚಾರ ಗೊತ್ತಿದ್ದರೆ ಮಾತನಾಡಬಹುದಲ್ಲವೇ? ರಾಜ್ಯಕ್ಕೆ ಅತಿ ಹೆಚ್ಚಿನ ಸಾಲ ಪಡೆದುಕೊಂಡವರು ಸಿದ್ದರಾಮಯ್ಯ. ನಾವು ವಿಪರೀತ ಮಳೆ, ಕೋವಿಡ್ ಸೋಂಕಿನ ಕಾಲದಲ್ಲಿ ಆದಾಯ ಸಂಪೂರ್ಣ ಕುಸಿದ ಕಾರಣ ಸಾಲ ಪಡೆದೆವು. ಆಗ ಗರಿಷ್ಠ ಸಾಲ ಪಡೆದ ಸಿದ್ದರಾಮಯ್ಯರು ಈಗ 200 ಯೂನಿಟ್ ಕರೆಂಟ್ ಉಚಿತವಾಗಿ ಕೊಡುವ ಭರವಸೆ ಕೊಡುತ್ತಾರೆ. ಅಧಿಕಾರದಲ್ಲಿದ್ದಾಗ ಪವರ್ ಕಟ್ ಮಾಡಿ, ಬಜೆಟನ್ನು ಲೈಟ್ ಹಾಕಿ ಓದಿ ಮಂಡಿಸಿದ ಮಹಾಪುರುಷ ಅವರು ಎಂದು ತಿಳಿಸಿದರು.