ರಾಸಲೀಲೆ ಪ್ರಕರಣ: ಸಂತ್ರಸ್ತ ಮಹಿಳೆಯಿಂದ ದಿಢೀರ್ ದೂರು
ಇದ್ದಕ್ಕಿದ್ದಂತೆ ಸಂತ್ರಸ್ಥ ಮಹಿಳೆ ಮಾಧ್ಯಮದವರ ಕಣ್ಣುತಪ್ಪಿಸಿ ಶನಿವಾರ ತಡರಾತ್ರಿ ನವನಗರ ಪೊಲೀಸ್ ಠಾಣೆಗೆ ಬಂದು ನಾಲ್ವರ ವಿರುದ್ಧ ದೂರು ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ
ಬಾಗಲಕೋಟೆ, ಡಿಸೆಂಬರ್ 18: ರಾಜ್ಯ ಸರಕಾರಕ್ಕೆ ಮುಜುಗರವನ್ನುಂಟು ಮಾಡಿ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಎಚ್.ವೈ.ಮೇಟಿ, ಅವರ ರಾಸಲೀಲೆ ಸಂತ್ರಸ್ತ ಮಹಿಳೆ ದಿಡೀರ್ ನಾಲ್ಕು ಜನರ ಮೇಲೆ ದೂರು ನೀಡಿದ್ದಾರೆ.
ಇದ್ದಕ್ಕಿದ್ದಂತೆ ಸಂತ್ರಸ್ಥ ಮಹಿಳೆ ಮಾಧ್ಯಮದವರ ಕಣ್ಣುತಪ್ಪಿಸಿ ಶನಿವಾರ ತಡರಾತ್ರಿ ನವನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮೊದಲು ಎಲ್ಲೂ ಯಾರ ವಿರುದ್ಧವೂ ದೂರು ದಾಖಲಾಗಿರಲಿಲ್ಲ. ಆದರೆ ಈಗ ಡಿಎಆರ್ ಪೇದೆ ಸುಭಾಷ್ ಸೇರಿದಂತೆ ನಾಲ್ವರ ವಿರುದ್ಧ ಪ್ರಾಣ ಬೆದರಿಕೆ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.[ಮೇಟಿ ಸ್ಥಾನಕ್ಕೆ ಯಾರ ನೇಮಕವೂ ಇಲ್ಲ, ಸಂಪುಟ ವಿಸ್ತರಣೆಯಿಲ್ಲ: ಸಿಎಂ]
ರಾಸಲೀಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಈ ಮಹಿಳೆ ಹಾಗೂ ಪೇದೆ ಸುಭಾಷ್ ನಾಪತ್ತೆಯಾಗಿದ್ದರು. ಸುಭಾಷ್ ಇನ್ನೂ ಎಲ್ಲಿದ್ದಾರೆ ಎಂಬುದು ತಿಳಿದು ಬಂದಿಲ್ಲ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪ್ರಕರಣದಲ್ಲಿ ಹೆಸರು ಕೇಳಿ ಬಂದವರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗುತ್ತಿದೆ. ಈ ವೇಳೆ ಮಹಿಳೆ ದಿಢೀರ್ ದೂರು ಕೊಟ್ಟಿರುವುದು ಪ್ರಕರಣದ ಕುತೂಹಲವನ್ನು ಹೆಚ್ಚಿಸಿದೆ.
ಈ ಪ್ರಕರಣದಲ್ಲಿ ಬ್ಲಾಕ್ಮೇಲ್ ತಂತ್ರ, ಹಣ ವಸೂಲಿಗಾಗಿ ಸಚಿವರನ್ನು ಎತ್ತಿಕಟ್ಟಿದ್ದಾರೆಯೇ? ಮುಂತಾದ ಸಂಶಯಗಳ ಬಗ್ಗೆ ಸಿಎಂ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಆರ್ಟಿಐ ಕಾರ್ಯಕರ್ತ ರಾಜಶೇಖರ ಮಲಾಲಿ, ಸುಭಾಷ್ ಮುಗುಳಕೋಡ, ಸಂತ್ರಸ್ಥ ಮಹಿಳೆ ಸೇರಿದಂತೆ ಈ ಪ್ರಕರಣದಲ್ಲಿ ಇರುವವರ ವಿಚಾರಣೆ ನಡೆಸಲಿದೆ.
ರಾಜಶೇಖರ್ ದೂರಿಗೆ ಕೋರ್ಟ್ ಮಾನ್ಯತೆ
ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣ ಕುರಿತು ಜೀವ ಬೆದರಿಕೆ ಆರೋಪದಡಿ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಡಿ.11ರಂದು ರಕ್ಷಣೆ ಕೋರಿ ಗಾಂಧಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ದೂರನ್ನು ಪೊಲೀಸರು ಕೋರ್ಟ್ ಅನುಮತಿ ಪಡೆದು ಮೇಟಿ ಬೆಂಬಲಿಗರ ವಿರುದ್ಧ ಐಪಿಸಿ ಸೆಕ್ಷನ್ 104, 34ರಡಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಟಿ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆಡಿಯೋ ಮಾಧ್ಯಮಗಳಲ್ಲಿ ಹರಿದಾಡಿತ್ತು.