ಮೇಕೆದಾಟು ಯೋಜನೆ: 'ತಮಿಳುನಾಡು ಕ್ಯಾತೆ ರಾಜಕೀಯ ಸ್ಟಂಟ್' ಎಂದ ಸಿಎಂ ಬೊಮ್ಮಾಯಿ
ಬೆಂಗಳೂರು, ಜೂ. 14: ''ಮೇಕೆದಾಟು ಯೋಜನೆ ಸಂಬಂಧ ಕರ್ನಾಟಕ ಸರ್ಕಾರದ ಯೋಜನಾ ವರದಿಯನ್ನು ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ಸಭೆ ಅಂಗೀಕರಿಸುವ ಭರವಸೆಯಿದೆ. ಮೇಕೆದಾಟು ಯೋಜನೆ ಬಗ್ಗೆ ಕ್ಯಾತೆ ತೆಗೆದು ತಮಿಳುನಾಡು ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರ ಕಾನೂನು ಬಾಹಿರ. ನಮ್ಮ ನೀರಿನ ಹಕ್ಕಿನ ದುರ್ಬಳಕೆ ಹುನ್ನಾರ,'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಮೇಕೆದಾಟು ಯೋಜನೆ ಸಂಬಂಧ ವಿಸ್ತೃತ ಯೋಜನಾ ವರದಿ ( ಡಿಪಿಅರ್) ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ಅಂಗೀಕಾರವಾಗಬೇಕು ಎಂಬ ಷರತ್ತನ್ನು ಕೇಂದ್ರ ಜಲ ಆಯೋಗ ಷರತ್ತು ವಿಧಿಸಿತ್ತು. ಅದರಂತೆ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯ ಅಂಗೀಕರಕ್ಕೆ ಮೇಕೆದಾಟು ಯೋಜನಾ ವರದಿಯನ್ನು ಸಲ್ಲಿಸಲಾಗಿದೆ. ಈಗಾಗಲೇ ಹದಿನೈದು ಸಭೆ ನಡೆದಿದ್ದು ಈಗ ನಡೆಯಲಿರುವ ಸಭೆಯಲ್ಲಿ ಮೇಕೆದಾಟು ಯೋಜನೆಗೆ ಅಂಗೀಕಾರ ಸಿಗುವ ಭರವಸೆಯಿದೆ ಎಂದು ತಿಳಿಸಿದ್ದಾರೆ.
''ಮೇಕೆದಾಟು ಯೋಜನೆ ಬಗ್ಗೆ ಪ್ರಧಾನ ಮಂತ್ರಿಗಳಿಗೆ ತಮಿಳುನಾಡು ಸರ್ಕಾರ ಪತ್ರ ಬರೆದಿದೆ. ಆ ಪತ್ರವನ್ನು ತರಿಸಿಕೊಳ್ಳುತ್ತೇನೆ. ತಮಿಳುನಾಡು ಬೇಡಿಕೆ ಕಾನೂನು ಬಾಹಿರ. ಒಕ್ಕೂಟ ವ್ಯವಸ್ಥೆಗೆ ವಿರೋಧಿ. ನಮ್ಮ ನೀರಿನ ಹಕ್ಕಿನ ಮೇಲೆ ದುರ್ಬಳಕೆ ಹುನ್ನಾರ. ತಮಿಳುನಾಡು ನೀರಿನ ಹಕ್ಕಿನ ಮೇಲೆ ಮೇಕೆದಾಟು ಯೋಜನೆಯನ್ನು ರೂಪಿಸಿಲ್ಲ,'' ಎಂದು ಬೊಮ್ಮಾಯಿ ಹೇಳಿದರು.

''ನಮ್ಮ ನೀರಿನ ಹಕ್ಕಿನ ಮೇಲೆ ನಾವು ಯೋಜನೆ ರೂಪಿಸಿದ್ದೇವೆ. ಈಗಾಗಲೇ ಸಾಕಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ಹದಿನೈದು ಮೀಟಿಂಗ್ ಆಗಿದೆ. ಇವರೆಗೂ ಆಕ್ಷೇಪ ಬಂದಿಲ್ಲ. ಇದೀಗ ಆಕ್ಷೇಪ ಮಾಡುವ ಮೂಲಕ ತಮಿಳುನಾಡು ಸರ್ಕಾರ ರಾಜಕೀಯ ಸ್ಟಂಟ್ ಮಾಡುತ್ತಿದೆ,'' ಎಂದು ತಮಿಳುನಾಡು ಸರ್ಕಾರದ ವಿರುದ್ಧ ಬೊಮ್ಮಾಯಿ ಕಿಡಿಕಾರಿದರು.

''ಕಾವೇರಿ ನೀರು ವಿಚಾರ ಇಟ್ಟುಕೊಂಡು ರಾಜಕೀಯ ಸ್ಟಂಟ್ ಮಾಡುವುದು ಹಲವು ವರ್ಷದಿಂದ ನಡೆದುಕೊಂಡು ಬಂದಿದೆ. ಇದು ಲೋಕಲ್ ಸ್ಟಾಂಡ್ ಅಲ್ಲ. ಕಾನೂನು ಚೌಕಟ್ಟಿನಲ್ಲಿ ಮೇಕೆದಾಟು ಯೋಜನೆ ಜಾರಿಯಾಗುವ ವಿಶ್ವಾಸ ನಮಗಿದೆ. ನ್ಯಾಯ ಸಿಗುವ ಭರವಸೆ ನಮಗಿದೆ. ಕಾವೇರಿ ನದಿ ನೀರು ನಿರ್ವಹಣಾ ಮಂಡಳಿಯಲ್ಲಿ ನಮ್ಮ ಕರ್ನಾಟಕ ಸರ್ಕಾರದ ಅಧಿಕಾರಿಗಳು ಇರುತ್ತಾರೆ. ಯೋಜನೆ ವಾಸ್ತವವನ್ನು ನದಿ ನೀರು ನಿರ್ವಹಣಾ ಮಂಡಳಿಗೆ ಮನವರಿಕೆ ಮಾಡಿಕೊಡಲಿದ್ದಾರೆ,'' ಎಂದು ಬೊಮ್ಮಾಯಿ ತಿಳಿಸಿದ್ದಾರೆ.












Click it and Unblock the Notifications