ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ವಿರುದ್ಧ ಹಕ್ಕುಚ್ಯುತಿ ದೂರು?
ಬೆಂಗಳೂರು, ಜೂನ್ 01: ಲಾಕ್ಡೌನ್ ಮಾರ್ಗದರ್ಶಿಗಳನ್ನು ಪಾಲನೆ ಮಾಡುವಂತೆ ರಾಜ್ಯ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ್ದ ಆದೇಶ ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗುವ ಸಾಧ್ಯತೆಗಳು ಕಂಡು ಬಂದಿವೆ. ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಅವರ ವಿರುದ್ಧ ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಕ್ಕುಚ್ಯುತಿ ದೂರು ಸಲ್ಲಿಸಲು ಮುಂದಾಗಿದೆ.
ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿ ಹಲವು ದೂರುಗಳು ವಿಧಾನಸಭೆ ಲೆಕ್ಕಪತ್ರ ಸಮಿತಿಗೆ ಬಂದಿದ್ದವು. ದೂರು ಆಧರಿಸಿ ತನಿಖೆಗೆ ಸಮಿತಿ ಮುಂದಾಗಿತ್ತು. ಆದರೆ ಯಾವುದೇ ಸ್ಥಳ ಪರಿಶೀಲನೆ ನಡೆಸದಂತೆ, ಸಮಿತಿ ಪ್ರವಾಸ ಮಾಡದಂತೆ ಸ್ಪೀಕರ್ ಕಚೇರಿ ಸಮಿತಿಗೆ ಸೂಚಿಸಿತ್ತು. ಇದೀಗ ಲೆಕ್ಕಪತ್ರ ಸಮಿತಿ ಹಾಗೂ ಸ್ಪೀಕರ್ ಕಚೇರಿ ಮಧ್ಯೆ ಕಾನೂನು ಸಮರಕ್ಕೆ ನಾಂದಿ ಹಾಡಿದ್ದು, ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಏರ್ಪಡುವ ಸಾಧ್ಯತೆಗಳು ದಟ್ಟವಾಗಿವೆ.

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ
ಶಾಸಕರ ಹಕ್ಕು ಎತ್ತಿಹಿಡಿಯುವ ವಿಧಾನಸಭೆ ಸ್ಪೀಕರ್ ಅವರೇ ಶಾಸಕರ ಹಕ್ಕುಚ್ಯುತಿ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡನೆ ಮಾಡಲು ವಿಧಾನಸಭೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ಧಾರ ಮಾಡಿದೆ ಎಂದು ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ.
ಯಾವುದೇ ಅವ್ಯವಹಾರದ ಆರೋಪ ಬಂದಾಗ ಅದನ್ನು ತಪಾಸಣೆ ಮಾಡುವ ಹಕ್ಕು ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಿದೆ. ಆದರೆ ಪರಿಶೀಲನೆ ಮಾಡುವುದಕ್ಕೆ ಸ್ಪೀಕರ್ ಕಚೇರಿ ನಮಗೆ ತಡೆಯೊಡ್ಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿ ಹೀಗೆ ನಮ್ಮ ಹಕ್ಕಿಗೆ ಚ್ಯುತಿಯಾಗಿದೆ. ಸ್ಪೀಕರ್ ನಡೆ ಸಂವಿಧಾನದ ನಿಯಮಕ್ಕೆ ತದ್ವಿರುದ್ಧವಾಗಿದೆ. ಇದನ್ನ ಗಮನಿಸಿದರೆ ಭ್ರಷ್ಟಾಚಾರಿಗಳನ್ನ ರಕ್ಷಿಸುವಂತಿದೆ. ನಿಯಮಗಳನ್ನ ಗಾಳಿಗೆ ತೂರಿ ಸ್ಪೀಕರ್ ಕಾಗೇರಿ ಈ ರೀತಿ ನಡೆದು ಕೊಂಡಿದ್ದಾರೆ. ಮಂಗಳವಾರ (ಜೂನ್ 2) ಸಭೆ ಸೇರಿ ಅಂತಿಮ ನಿರ್ಧಾರ ತೆಗೆದು ಕೊಳ್ಳುತ್ತೇವೆ ಎಂದು ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಸ್ಪೀಕರ್ ಕಚೇರಿ ಸ್ಪಷ್ಟನೆ
ಹಕ್ಕುಚ್ಯುತಿ ಆರೋಪ ಬರುವ ಮೊದಲೇ ಸ್ಪೀಕರ್ ಕಚೇರಿ ಪ್ರಕರಣದ ಬಗ್ಗೆ ಸ್ಪಷ್ಟನೆ ಕೊಟ್ಟಿತ್ತು. ದೇಶದಲ್ಲಿ ಕೊರೊನಾ ವೈರಸ್ ಸಂಕಷ್ಟದ ಸಂದರ್ಭಲ್ಲಿ ಹೊರಡಿಸಲಾಗಿರುವ ಲಾಕ್ಡೌನ್ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಅನ್ವಯ ಲಾಕ್ಡೌನ್ ಸಂದರ್ಭದಲ್ಲಿ ತಾತ್ಕಾಲಿಕವಾಗಿ ವಿಧಾನ ಮಂಡಲ ಹಾಗೂ ವಿಧಾನ ಸಭೆಯ ಸಮಿತಿಗಳು ಸಭೆಗಳನ್ನು ನಡೆಸುವುದನ್ನು ಸ್ಥಗಿತಗೊಳಿಸಲಾಗಿತ್ತು.
ನಂತರ ಹಂತ ಹಂತವಾಗಿ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಪ್ರಥಮ ಹಂತದಲ್ಲಿ ಮೇ 18 ರ ನಂತರ ಸಮಿತಿ ಸಭೆಗಳನ್ನು ನಡೆಸಲು ಮಾತ್ರ ಅವಕಾಶ ಕಲ್ಪಿಸಲಾಯಿತು. ವೈರಸ್ ಹರಡುವಿಕೆಯ ಗಂಭೀರತೆ ಪರಿಗಣಿಸಿ ಆರೋಗ್ಯದ ಹಿತದೃಷ್ಟಿಯಿಂದ ಸಮಿತಿಗಳು ರಾಜ್ಯದೊಳಗೆ ಅಥವಾ ಹೊರರಾಜ್ಯಗಳಲ್ಲಿ ಯಾವುದೇ ಅಧ್ಯಯನ ಪ್ರವಾಸವನ್ನು ಹಾಗೂ ಸ್ಥಳೀಯವಾಗಿ ಯಾವುದೇ ಭೇಟಿ ಅಥವಾ ಸ್ಥಳ ಪರಿಶೀಲನೆಗಳನ್ನು ಮುಂದಿನ ಆದೇಶದವರೆಗೆ ಕೈಗೊಳ್ಳಬಾರದೆಂದು ಸೂಚಿಸಲಾಗಿತ್ತು.
ಈ ಎಲ್ಲ ಸುರಕ್ಷತಾ ಕ್ರಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು ಕೈಗೊಳ್ಳಲಾಗಿದೆಯೇ ಹೊರತು ಅದರಲ್ಲಿ ಯಾವುದೇ ದುರುದ್ದೇಶ ಇಲ್ಲವೆಂದು ಸ್ಪೀಕರ್ ಕಚೇರಿ ಸ್ಪಷ್ಟಪಡಿಸಿದೆ.

ಏನದು ಹಗರಣ?
ಕೊರೊನಾ ವೈರಸ್ ಸೋಮಕಿನ ಹಿನ್ನೆಲೆಯಲ್ಲಿ ಖರೀದಿಸಿರುವ ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಲೆಕ್ಕಪತ್ರ ಸಮಿತಿ ಪರಿಶೀಲನೆ ನಡೆಸಲು ಮೂದಾಗಿತ್ತು. ಪ್ರಮುಖವಾಗಿ 3 ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂಬ ಲಿಖಿತ ದೂರುಗಳು ಸಮಿತಿಗೆ ಬಂದಿದ್ದವು ಎಂದು ಸಮಿತಿ ಅಧ್ಯಕ್ಷ, ಮಾಜಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದರು.
ಪಿ.ಪಿ.ಇ. ಕಿಟ್ ಖರೀದಿ: ಮಹಾರಾಷ್ಟ್ರ ಮೂಲದ ಅಮರಾವತಿಯ ಪ್ಲಾಸ್ಟಿ ಸರ್ಜಿ ಇಂಡಸ್ಟ್ರೀಸ್ ಮೂಲಕ ಖರೀದಿಸಿರುವ ಪಿ.ಪಿ.ಇ ಕಿಟ್ಗಳು ಕಳಪೆ ಗುಣಮಟ್ಟದ್ದಾಗಿದ್ದು, 2 ಬಾರಿ ಖರೀದಿಸಲಾಗಿದ್ದು 2 ಬಾರಿಯ ದರಗಳಲ್ಲಿ ಭಾರಿ ಪ್ರಮಾಣದ ಅಂತರವಿದೆ ಎಂಬುದು ಲೆಕ್ಕಪತ್ರ ಸಮಿತಿಯ ಗಮನಕ್ಕೆ ಬಂದಿತ್ತು.
ಕೋವಿಡ್ ಟೆಸ್ಟ್ ಕಿಟ್ ಖರೀದಿ: ರಾಜಸ್ಥಾನ ಸರ್ಕಾರವು ಚೀನಾದ 2 ಕಂಪನಿಗಳಿಂದ ಖರೀದಿ ಮಾಡಿ ಬಳಕೆಗೆ ಯೋಗ್ಯವಲ್ಲವೆಂದು ನಿರ್ಧರಿಸಿದ ಮೇಲೆ ಅದೇ ಕಂಪನಿಯ ಪರೀಕ್ಷಾ ಕಿಟ್ಗಳನ್ನು ಖರೀದಿಸಿದ ರಾಜ್ಯ ಸರ್ಕಾರ ನಂತರ ಈ ಕಿಟ್ಗಳು ಕಳಪೆ ಗುಣಮಟ್ಟದ್ದವೆಂದು ನಿರ್ಧರಿಸಿ ಬಳಕೆಯನ್ನು ನಿಲ್ಲಿಸಿದೆ.
ಬಳಕೆ ಮಾಡಲಾದ ವೆಂಟಿಲೇಟರ್ಗಳನ್ನು ಖರೀದಿ ಮಾಡಿ ಕೋಟ್ಯಾಂತರ ರೂಪಾಯಿ ಪಾವತಿ ಮಾಡಲಾಗಿದೆ. ದೆಹಲಿಯ ಆರ್.ಕೆ ಮೆಡಿಕಲ್ ಸೊಲ್ಯೂಷನ್ಸ್ ಸಂಸ್ಥೆಯಿಂದ ಕಳಪೆ ಗುಣಮಟ್ಟದ ವೆಂಟಿಲೇಟರ್ಗಳನ್ನು ಖರೀದಿಸಲಾಗಿದೆ.
ಸ್ಯಾನಿಟೈಸರ್ ಖರೀದಿ: 500 ಎಂ.ಎಲ್ ಸ್ಯಾನಿಟೈಸರ್ ಬಾಟಲ್ಗಳ್ನು 97.44 ರೂಪಾಯಿಗಳಿಗೆ ಖರೀದಿ ಮಾಡಲಾಗಿದೆ. ಆದರೆ ಆ ಕಂಪನಿಯು ಒಟ್ಟು ಖರೀದಿಯ ಅರ್ಧದಷ್ಟು ಮಾತ್ರ ಪೂರೈಸಿದೆ. ಇದೇ ಕಂಪನಿಯಿಂದ ಮತ್ತೊಮ್ಮೆ ಪ್ರತಿ ಸ್ಯಾನಿಟೈಸರ್ಗೆ 250 ರೂಪಾಯಿಯಂತೆ ಖರೀದಿಸಲಾಗಿದ್ದು ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ.
ಸಿರಿಂಜ್ ಖರೀದಿ: ಸಿರಿಂಜ್, ಸಿರಿಂಜ್ ಪಂಪ್ ಮತ್ತು ವೈದ್ಯಕೀಯ ಉಪಕರಣಗಳನ್ನು ಮದ್ರಾಸ್ ಸರ್ಜಿಕಲ್ಸ್ ಹಾಗೂ ಇತರ ಕಂಪನಿಗಳ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಖರೀದಿಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹಾನಿಯಾಗಿರುವ ಬಗ್ಗೆ ದಾಖಲೆಗಳ ಸಮೇತ ದೂರುಗಳು ಸಮಿತಿಗೆ ಬಂದಿವೆ.
ಈ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಜವಾಬ್ದಾರಿಯುತ ಸಮಿತಿಯಾಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸ್ಥಳ ಪರಿಶೀಲನೆ, ದಾಖಲೆಗಳ ಪರಿಶೀಲನೆ ಕೈಗೊಳ್ಳಲು ನಿರ್ಣಯಿಸಿತ್ತು. ತನಿಖೆ ನಡೆಸಲು ಸ್ಪೀಕರ್ ವಿಶ್ವೇಶರ್ ಹೆಗಡೆ ಕಾಗೇರಿ ಅವರು ಅನುಮತಿ ನಿರಾಕರಿಸಿರುವುದು ಕಾನೂನು ಬಾಹೀರ ಎಂದು ಸಮಿತಿ ಆರೋಪಿಸಿದೆ. ಅದಕ್ಕಾಗಿ ಹಕ್ಕುಚ್ಯುತಿ ದೂರು ಕೊಡಲು ಮುಂದಾಗಿದೆ.

ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ
ವಿಧಾನಸಭೆ ಕಲಾಪ ಸಾಮಾನ್ಯವಾಗಿ ವರ್ಷದಲ್ಲಿ 60-70 ದಿನಗಳ ಕಾಲ ನಡೆಯುತ್ತದೆ. ಅದನ್ನು ಹೊರತು ಪಡಿಸಿದರೂ ಇಡೀ ವಿಧಾನಸಭೆ ವಿಚಾರದಲ್ಲಿ ಸ್ಪೀಕರ್ ಪರಮಾಧಿಕಾರಿ ಹೊಂದಿರುತ್ತಾರೆ. ವಿಧಾನಸಭೆ ಅಧಿವೇಶನ ನಡೆಯದಿದ್ದಾಗಲೂ ಸ್ಪೀಕರ್ ಪರಮಾಧಿಕಾರ ಹೊಂದಿರುತ್ತಾರೆ.
ಹೀಗಾಗಿ ಅವರನ್ನು ಪ್ರಶ್ನೆ ಮಾಡುವುದು ಉದಾಹರಣೆಗೆ ರಾಷ್ಟ್ರಪತಿಗಳನ್ನು ಪ್ರಶ್ನೆ ಮಾಡಿದಂತೆ. ಹಕ್ಕು ಬಾಧ್ಯತಾ ಸಮಿತಿಗೆ ವಿಧಾನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿ ದೂರು ಸಲ್ಲಿಸಿದರೂ ಅದು ನಿಲ್ಲುವುದು ಕಷ್ಟ. ವಿಧಾನಸಭೆ ಸ್ಪೀಕರ್ ಹುದ್ದೆ ಸಾಂವಿಧಾನಾತ್ಮಕ ಹುದ್ದೆ. ಆದರೆ ಹಿರಿಯ ಸಚಿವ ಎಚ್.ಕೆ. ಪಾಟೀಲ್ ಅವರು ಹಿರಿಯ ಸಂಸದೀಯ ಪಟು. ಅವರಿಗೆ ಸಂಸದೀಯ ನಡುವಳಿಕೆಗಳ ಸಂಪೂರ್ಣ ಮಾಹಿತಿಯಿದೆ. ಹೀಗಾಗಿ ಕೊರೊನಾ ವೈರಸ್ ಸಂದರ್ಭದಲ್ಲಿ ಸಾಂವಿಧಾನಿಕ ಭಿಕ್ಕಟ್ಟು ಏಳುವ ಸಾಧ್ಯತೆಗಳಿವೆ ಎಂದು ವಿಧಾನಸಭೆಯ ನಿವೃತ್ತ ಕಾರ್ಯದರ್ಶಿಯೊಬ್ಬರು 'ಒನ್ಇಂಡಿಯಾ'ಕ್ಕೆ ಮಾಹಿತಿ ಕೊಟ್ಟಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications