ಮಂಗಳೂರು ದಕ್ಷಿಣ ಕ್ಷೇತ್ರ : ಕಾಂಗ್ರೆಸ್ v/s ಬಿಜೆಪಿ ನೇರ ಹಣಾಹಣಿ!
ಮಂಗಳೂರು, ಜನವರಿ 16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಕುತೂಹಲ ಕೆರೆಳಿಸಿರುವ ಕ್ಷೇತ್ರ ಮಂಗಳೂರು ದಕ್ಷಿಣ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರಾನೇರ ಸ್ಪರ್ಧೆ.
ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಜೆ.ಆರ್.ಲೋಬೋ. ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರು ಕ್ಷೇತ್ರದ ಟಿಕೆಟ್ಗೆ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು ಅವರಾದರೂ ಜೆ.ಆರ್.ಲೋಬೋಗೆ ಟಿಕೆಟ್ ನಿರಾಕರಿಸಲು ಕಾರಣಗಳು ಇಲ್ಲ.
ಬಿಜೆಪಿ ಕ್ಷೇತ್ರದಿಂದ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂಬುದು ಸದ್ಯದ ಸುದ್ದಿ. ಉದ್ಯಮಿಗಳಾದ ವೇದವ್ಯಾಸ ಕಾಮತ್, ಬದ್ರಿನಾಥ್ ಕಾಮತ್ ಹೆಸರು ಕೇಳಿಬರುತ್ತಿದೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರದಿಂದ ಎನ್.ಯೋಗೀಶ್ ಭಟ್ ಸ್ಪರ್ಧಿಸಿದ್ದರು.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಸ್ಪರ್ಧೆಗೆ ಪರಿಗಣಿಸುವುದು ಕಷ್ಟ. ಕಳೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಎಸ್.ಪಿ.ಚಂಗಪ್ಪ ಕೇವಲ 1672 ಮತಗಳನ್ನು ಪಡೆದಿದ್ದರು. ಆದ್ದರಿಂದ, ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನೇರ ಹಣಾಹಣಿ ನೀರಿಕ್ಷೆ ಇದೆ...
12 ಸಾವಿರ ಮತಗಳ ಜಯ
ಕಳೆದ ಬಾರಿ ಚುನಾವಣೆಗೆ 4 ತಿಂಗಳು ಇರುವಾಗ ಮಾಜಿ ಕೆಎಎಸ್ ಅಧಿಕಾರಿ ಜೆ.ಆರ್.ಲೋಬೋ ಅವರಿಗೆ ಟಿಕೆಟ್ ನೀಡಲಾಗಿತ್ತು. ಪಕ್ಷದ ನಿರ್ಧಾರಕ್ಕೆ ಸ್ಥಳೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಲೋಬೋ ಎಲ್ಲರ ಹುಬ್ಬೇರಿಸುವಂತೆ 12,275 ಮತಗಳ ಅಂತರದಿಂದ ಗೆದ್ದಿದ್ದರು.
ಐವಾನ್ ಡಿಸೋಜಾ ಆಕಾಂಕ್ಷಿ
ವಿಧಾನಪರಿಷತ್ ಸದಸ್ಯ ಮತ್ತು ಸಿದ್ದರಾಮಯ್ಯ ಆಪ್ತ ಐವಾನ್ ಡಿಸೋಜಾ ಅವರು ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಅವರಿಗೆ ಟಿಕೆಟ್ ಸಿಗಲಿದೆಯೇ ಕಾದು ನೋಡಬೇಕು.
ಬಿಜೆಪಿಯಿಂದ ಯಾರು ಅಭ್ಯರ್ಥಿ
ಕಳೆದ ಬಾರಿ ಕ್ಷೇತ್ರದಿಂದ ಎನ್.ಯೋಗೀಶ್ ಭಟ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು, 55,554 ಮತಗಳನ್ನು ಪಡೆದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ಗೆ ಹಲವರ ಹೆಸರು ಕೇಳಿ ಬರುತ್ತಿದೆ.
ಬಿಜೆಪಿ ಟಿಕೆಟ್ಗೆ ಪೈಪೋಟಿ
ಈ ಬಾರಿ ಕ್ಷೇತ್ರದ ಟಿಕೆಟ್ಗೆ ವೇದವ್ಯಾಸ ಕಾಮತ್ ಮತ್ತು ಬದ್ರಿನಾಥ್ ಕಾಮತ್ ಅವರ ಹೆಸರು ಕೇಳಿಬರುತ್ತಿದೆ. ನಿವೃತ್ತ ಯೋಧ ಬ್ರಿಜೇಶ್ ಚೌಟಾ ಅವರ ಹೆಸರು ಸಹ ಇದೆ.