ಮಂಡ್ಯ : ಆಪ್ತ ಗೆಳತಿಯನ್ನು ಕೊಂದಿದ್ದ ಅನುಷಾ ಆತ್ಮಹತ್ಯೆಗೆ ಶರಣು
ಮಂಡ್ಯ, ಡಿಸೆಂಬರ್ 03 : ಗೆಳತಿ ಮದುವೆಯಾಗಿದ್ದನ್ನು ಆಕ್ಷೇಪಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ ಜೈಲು ಸೇರಿದ್ದ ಅನುಷಾ, ಬಿಡುಗಡೆ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಂಗಳವಾರ ರಾತ್ರಿ ಅನುಷಾ ಶವ ಪತ್ತೆಯಾಗಿದೆ.
ಮಂಡ್ಯದ ಚಾಮುಂಡೇಶ್ವರಿನಗರ ನಿವಾಸಿ ಅನುಷಾ (21) ಮೃತಪಟ್ಟವಳು. ಅನುಷಾ 2015ರ ಮಾರ್ಚ್ 31ರಂದು ತನ್ನ ಗೆಳತಿ ಹಾಲಹಳ್ಳಿಯ ದಿವ್ಯಶ್ರೀಯನ್ನು ಕೊಲೆ ಮಾಡಿದ್ದಳು. ಗೆಳತಿಯನ್ನು ಕೊಂದ ಪಶ್ಚಾತಾಪದಿಂದಾಗಿ ಅನುಷಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. [ಮಂಡ್ಯ : ನವವಿವಾಹಿತೆಯನ್ನು ಕೊಂದ ಆಪ್ತ ಗೆಳತಿ]

ದಿವ್ಯಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಷಾಳನ್ನು ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಅನುಷಾ ಪಶ್ಚಾತಾಪದಿಂದ ಪರಿತಪಿಸುತ್ತಿದ್ದಳು. ಬದುಕೇ ಬೇಡ ಎಂಬ ತೀರ್ಮಾನಕ್ಕೆ ಬಂದ ಆಕೆ ಮಂಗಳವಾರ ರಾತ್ರಿ ಯಲಿಯೂರು ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ರೈಲ್ವೆ ಹಳಿಯ ಬಳಿ ಶವ ಸಿಕ್ಕಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು, ಶವವನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಶವ ಅನುಷಾಳದ್ದು ಎಂದು ಗೊತ್ತಾಗಿದೆ. ಬಳಿಕ ಮಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಶವ ಪರೀಕ್ಷೆಯ ನಂತರ ವಾರಸುದಾರರಿಗೆ ನೀಡಲಾಗಿದೆ.
ಸ್ನೇಹಿತೆಯನ್ನೇ ಕೊಲೆ ಮಾಡಿದ್ದಳು : ಮಂಡ್ಯದ ನಿವಾಸಿಗಳಾದ ದಿವ್ಯಶ್ರೀ ಮತ್ತು ಅನುಷಾ ಸ್ನೇಹಿತೆಯರು. ದಿವ್ಯಶ್ರೀ ಮದುವೆಯಾಗಿದ್ದನ್ನು ಆಕ್ಷೇಪಿಸಿ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅನುಷಾ ಕೊಲೆ ಮಾಡಿದ್ದಳು.

ದಿವ್ಯಶ್ರೀಗೆ ಬೆಂಗಳೂರಿನ ನಿವಾಸಿಯೊಬ್ಬರ ಜೊತೆ ವಿವಾಹ ನಿಶ್ಚಿತವಾಗಿತ್ತು. ಇದು ಅನುಷಾಳಿಗೆ ಇರಿಸು ಮುರಿಸು ತಂದಿತ್ತು. ಮದುವೆ ಆಗದಂತೆ ತಡೆಯುವ ಯತ್ನವನ್ನು ಅನುಷಾ ಮಾಡಿದ್ದಳಾದರೂ ಅದು ವಿಫಲವಾಗಿತ್ತು. ಇದರಿಂದ ಮಾನಸಿಕವಾಗಿ ವಿಚಲಿತಳಾಗಿದ್ದ ಅನುಷಾ ದಿವ್ಯಶ್ರೀ ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದ್ದಳು.












Click it and Unblock the Notifications