ಅಂದು ಮುಖ್ಯಮಂತ್ರಿ ಸ್ಥಾನ ಕೈತಪ್ಪಿದ್ದು ಹೇಗೆ? ಬೇಸರ ಹಂಚಿಕೊಂಡ ಖರ್ಗೆ
ಮಲ್ಲಿಕಾರ್ಜುನ್ ಖರ್ಗೆ ಅವರು ರಾಜ್ಯ ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡವರು. ಅವರ ಪಕ್ಷ ಸಂಘಟನೆಯಿಂದಾಗಿ ಇಂದು ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನವೂ ಒಲಿದಿದೆ. ಕರ್ನಾಟಕ ಮಾತ್ರವಲ್ಲದೆ ಈ ಇಡೀ ದೇಶದಲ್ಲಿ ಕಾಂಗ್ರೆಸ್ನ ಚುಕ್ಕಾಣಿ ಹಿಡಿದಿದ್ದಾರೆ. ಆದರೆ ಈ ಹಿಂದೆ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶವಿದ್ದರೂ ಕೊನೆಯ ಕ್ಷಣದಲ್ಲಿ ಕೈತಪ್ಪಿತ್ತು. ಇದು ದಶಕಗಳ ಹಿಂದೆ ನಡೆದ ಬೆಳವಣಿಗೆಯಾದರೂ ಅದನ್ನು ನೆನೆದು ಮಲ್ಲಿಕಾರ್ಜುನ್ ಖರ್ಗೆ ಅವರು ಬೇಸರದ ಮಾತುಗಳನ್ನು ಹೊರಹಾಕಿದ್ದಾರೆ. ಅಂದು ಮುಖ್ಯಮಂತ್ರಿ ಕುರ್ಚಿ ಕೈತಪ್ಪಿದ್ದು ಹೇಗೆ? ಎಂದು ಕಾರ್ಯಕ್ರಮವೊಂದರಲ್ಲಿ ನೆನೆದಿದ್ದಾರೆ.
ಈ ಹಿಂದೆ ರಾಜ್ಯದ ಸಿಎಂ ಆಗುವ ಅವಕಾಶ ಇತ್ತು. ಆದರೆ 1999ರಲ್ಲಿ ಸಿಎಂ ಆಗುವ ಅವಕಾಶ ಕೈತಪ್ಪಿತು. ನಾನು ವಿಧಾನಸಭಾದ ವಿರೋಧ ಪಕ್ಷದ ನಾಯಕನಾಗಿ ಹೋರಾಟ ಮಾಡಿದ್ದೆ. ಆದರೆ ನಾಲ್ಕು ತಿಂಗಳ ಹಿಂದಷ್ಟೇ ಪಕ್ಷ ಸೇರಿದ್ದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆದರು ಎಂದು ಬಿಎಲ್ಡಿ ಸಂಸ್ಥೆಯ ಸಂಸ್ಥಾಪಕ ಸ್ಮರಣೆ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ನೆನೆದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಸುಮಾರು 1999ರಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳ ಹುದ್ದೆಗೆ ಭಾರೀ ಸ್ಪರ್ಧಿಯಾಗಿದ್ದರು. ಆದರೆ, ಆ ವೇಳೆ ಮುಖ್ಯಮಂತ್ರಿಯಾಗಿ ಎಸ್.ಎಂ.ಕೃಷ್ಣ ಅವರನ್ನು ನೇಮಕ ಮಾಡಲಾಗಿತ್ತು. ಹೀಗಾಗಿ ಖರ್ಗೆ ಅವರು ಪಕ್ಷದ ನಿಷ್ಠಾವಂತ ನಾಯಕನಾಗಿ ಉಳಿದಿದ್ದಾರೆ.

ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ತುಂಬಾ ಪ್ರಯತ್ನಿಸಿದೆ. ಆದರೆ ಸಿಎಂ ಆಗಿದ್ದು ಎಸ್.ಎಂ.ಕೃಷ್ಣ. ನಾನು ಸಲ್ಲಿಸಿದ ಎಲ್ಲ ಸೇವೆ ನೀರಲ್ಲಿ ಹೋಗಿತ್ತು. ಆಗ ಸ್ವಾಮೀಜಿಗಳೇ ನನ್ನ ಸೇವೆ ನೀರಲ್ಲಿ ಹೋಯ್ತು ಎಂದು ಮತ್ತೊಮ್ಮೆ ಹೇಳಿದ್ದರು. ನಾನು ಬ್ಲಾಕ್ ಅಧ್ಯಕ್ಷನಿಂದ ಶುರುವಾಗಿ ಈಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ. ನಾನು ಅಧಿಕಾರದ ಬೆನ್ನು ಹತ್ತಿ ನಾನು ಎಂದಿಗೂ ಹೋಗಲಿಲ್ಲ. ಎಲ್ಲವೂ ಅದಾಗಿಯೇ ನನ್ನ ಬಳಿಗೆ ಬಂದಿವೆ. ಪ್ರಯತ್ನದ ಫಲದಿಂದ ಅದೆಲ್ಲ ಸಿಕ್ಕಿದೆ ಎಂದಿದ್ದಾರೆ.
1999ರಿಂದ 2004ರವರೆಗೆ ಎಸ್ಎಂ ಕೃಷ್ಣ ಅವರ ಕ್ಯಾಬಿನೆಟ್ನಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು ಕಡೆಗೂ ಮುಖ್ಯಮಂತ್ರಿಯಾಗಿ ಸ್ಥಾನ ಪಡೆಯದಿದ್ದರೂ ಕರ್ನಾಟಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಸಚಿವ ಸ್ಥಾನಗಳನ್ನು ಮತ್ತು ನಾಯಕತ್ವ ಸಿಕ್ಕಿದೆ. ಖರ್ಗೆ ಅವರ ರಾಜಕೀಯ ಪ್ರಯಾಣವು ಪಕ್ಷದ ಹಿರಿಯ ನಾಯಕತ್ವದೊಂದಿಗೆ ದೀರ್ಘಕಾಲದ ಸಹಕಾರ ಮತ್ತು ನಿಷ್ಠೆಯನ್ನು ತೋರಿಸುತ್ತದೆ. ಈ ಮೂಲಕ ಅವರು ಸಿಎಂ ಸ್ಥಾನ ಕೈತಪ್ಪಿದ ಬಗ್ಗೆ ಅವರು ಅಸಮಾಧಾನ ಹೊರಹಾಕಿದ್ದಾರೆ.
ಘಟನೆಯೊಂದರಲ್ಲಿ ನಮ್ಮ ಕುಟುಂಬವನ್ನ ಕಳೆದುಕೊಂಡೆ. ತಾಯಿ, ತಂಗಿ, ದೊಡ್ಡಪ್ಪ ಜೀವ ಬಿಟ್ಟರು. ನಾನು, ನಮ್ಮ ತಂದೆ ಮಾತ್ರ ಮನೆಯಲ್ಲಿ ಇದ್ದೆವು. ಸುಖ ದುಃಖದ ಕಲ್ಪನೆ ಇಲ್ಲದೆ ನಾನು ಬಾಲ್ಯ ಕಳೆದೆ. ಅಮ್ಮ, ಅಕ್ಕ, ತಂಗಿ, ತಮ್ಮ ಯಾರೂ ಇಲ್ಲದೆ ಅಪ್ಪನ ಆಸರೆಯಲ್ಲಿ ಬೆಳೆದೆ. ಬಳಿಕ ರಾಜಕೀಯದಲ್ಲಿ ಪ್ರವೇಶಿಸಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆನೆದಿದ್ದಾರೆ.












Click it and Unblock the Notifications