ಸಿದ್ದು,ಡಿಕೆಶಿ ಪ್ರತ್ಯೇಕ ಚುನಾವಣಾ ಯಾತ್ರೆಗೆ ಮಲ್ಲಿಕಾರ್ಜುನ್ ಖರ್ಗೆ ಬ್ರೇಕ್
ಬೆಂಗಳೂರು,ಡಿಸೆಂಬರ್ 13 : 2023 ರ ವಿಧಾನಸಭಾ ಚುನಾವಣೆಗೆ ಹಿನ್ನೆಲೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆಗೆ ಸಜ್ಜಾಗಿದ್ರು, ಆದರೆ ಈ ಪ್ರತ್ಯೇಕ ಯಾತ್ರೆ ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಬ್ರೇಕ್ ಹಾಕಿ, ಜಂಟಿಯಾಗಿ ಯಾತ್ರೆ ಮಾಡುವಂತೆ ಸೂಚನೆ ನೀಡಿದ್ದಾರೆ.
ದೆಹಲಿಯಲ್ಲಿ ಸೋಮವಾರ ನಡೆದ ರಾಜ್ಯ ಕಾಂಗ್ರೆಸ್ಸಿಗರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ರಾಜ್ಯ ನಾಯಕರೊಂದಿಗೆ ಚುನಾವಣೆ ಸಿದ್ಧತೆ, ಬಸ್ ಯಾತ್ರೆ ಹಾಗೂ ಚುನಾವಣಾ ಅಭ್ಯರ್ಥಿಗಳ ಆಯ್ಕೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ಕಾಂಗ್ರೆಸ್ ಹೈಕಮಾಂಡ್ ಈ ಸೂಚನೆಗಳನ್ನು ನೀಡಿದೆ ಎನ್ನಲಾಗಿದೆ.
ರಾಜ್ಯದ ಎಲ್ಲಾ ಪ್ರಮುಖ ನಾಯಕರೂ ಯಾತ್ರೆಯಲ್ಲಿರಬೇಕು. ಯಾತ್ರೆಯಲ್ಲಿಯೂ ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಹಾಗೂ ಬಣ ರಾಜಕೀಯದಂತಹ ಚಟುವಟಿಕೆಗಳಿಗೆ ಆಸ್ಪದ ನೀಡಬಾರದು ಎಂದು ಸ್ಪಷ್ಟಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯ, ಶಿವಕುಮಾರ್ ಸೇರಿದಂತೆ ಪಕ್ಷದ ಎಲ್ಲನಾಯಕರು ಒಟ್ಟಿಗೆ ಪ್ರವಾಸ ಕೈಗೊಳ್ಳಲಿದ್ದು ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಲಿದ್ದಾರೆ. 50 ರಿಂದ 75 ದಿನಗಳ ಕಾಲ ಈ ಯಾತ್ರೆ ನಡೆಯಲಿದೆ. ಈ ಮೂಲಕ ಯಾವುದೇ ಗೊಂದಲವಿಲ್ಲದೆ ಒಗ್ಗಟ್ಟಿನ ಸಂದೇಶದೊಂದಿಗೆ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದು ಕಾಂಗ್ರೆಸ್ ಹೈಕಮಾಂಡ್ ಸೂಚನೆಯನ್ನ ನೀಡಲಾಗಿದೆ.
ಇನ್ನೂ ಚಳಿಗಾಲದ ಬೆಳಗಾವಿ ಅಧಿವೇಶನಕ್ಕೆ ತೆರೆ ಬೀಳುತ್ತಿದ್ದಂತೆ ಚುನಾವಣೆ ಸಿದ್ಧತೆ ಸಂಬಂಧಿತವಾದ ಕಾಂಗ್ರೆಸ್ ಚಟುವಟಿಕೆ ಬಿರುಸುಗೊಳ್ಳಲಿದೆ.ಇದೇ ವೇಳೆ ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸಮಾವೇಶ ನಡೆಸಬೇಕು. ಈ ವೇಳೆ ದೊಡ್ಡ ಮಟ್ಟದ ರ್ಯಾಲಿ ನಡೆಸಿ ಕೃಷ್ಣಾ ನೀರು ಸದ್ಬಳಕೆ ಮಾಡಿಕೊಳ್ಳದ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಬೇಕು. ಜತೆಗೆ ಮಹದಾಯಿ ಯೋಜನೆ ಅನುಷ್ಠಾನದಲ್ಲಿ ವೈಫಲ್ಯ ತೋರಿರುವ ರಾಜ್ಯ ಸರ್ಕಾರದ ವಿರುದ್ಧ ಜ.2ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ತೀರ್ಮಾನಿಸಿರುವಂತೆ ಜ.8 ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಪರಿಶಿಷ್ಟಜಾತಿ ಹಾಗೂ ಪಂಗಡದ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದೂ ನಿರ್ದೇಶನ ನೀಡಲಾಗಿದೆ ಎಂದಲು ತಿಳಿದು ಬಂದಿದೆ.
ಪ್ರತ್ಯೇಕ ಪ್ರವಾಸಕ್ಕೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ರೆಡಿಯಾಗಿದ್ದರು.
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಹಲವು ಯಾತ್ರೆಗಳನ್ನ ಕೈಗೊಂಮಡಿತ್ತು,ಹೀಗಾಗಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಪ್ರತ್ಯೇಕ ಬಸ್ ಯಾತ್ರೆ ಹೊರಡಲು ತಯಾರಾಗಿದ್ದರು. ಅಲ್ಲದೇ ಮುಂದಿನ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಇಬ್ಬರು ನಾಯಕ ಮಧ್ಯೆ ತಾಳಮೇಳ ಸರಿ ಇಲ್ಲ ಎನ್ನು ಮಾತುಗಳು ಕಾಂಗ್ರೆಸ್ ಮೂಲಗಳಿಂದಲೇ ತಿಳಿದುಬಂದಿದ್ದು, ಈ ಹಿಂದೆಯೇ ಒಟ್ಟಿಗೇ ಪ್ರವಾಸ ಮಾಡುವಂತೆ ಹೈಕಮಾಂಡ್ ಸೂಚಿಸಿದ್ದರೂ ಗೊಂದಲ ಬಗೆಹರಿದಿರಲಿಲ್ಲ. ಜನವರಿ ಮೊದಲ ವಾರದಿಂದ ಉತ್ತರ ಕರ್ನಾಟಕದಿಂದ ಪ್ರವಾಸ ಹೊರಡಲು ಸಿದ್ದರಾಮಯ್ಯ ತಯಾರಿ ಮಾಡಿಕೊಂಡಿದ್ದರು. ಇದಕ್ಕಾಗಿ ಸುಸಜ್ಜಿತ ಬಸ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತ್ತೊಂದೆಡೆ ಶಿವಕುಮಾರ್ ಕೂಡ ಯಾತ್ರೆಗಾಗಿ ಸಿದ್ಧತೆಯಲ್ಲಿದ್ದರು. ಈ ರೀತಿ ಪ್ರತ್ಯೇಕ ಯಾತ್ರೆಯಿಂದ ಒಡಕಿನ ಸಂದೇಶ ಹೋಗಲಿದೆ ಎಂಬ ಅಂಶವನ್ನು ಪಕ್ಷದ ಇತರ ಮುಖಂಡರೇ ಹೈಕಮಾಂಡ್ ಗಮನಕ್ಕೆ ತಂದಿದ್ದರು. ಹೀಗಾಗಿ ಸೋಮವಾರ ನಡೆದ ದಿಲ್ಲಿ ಸಭೆಯಲ್ಲಿಈ ಗೊಂದಲಕ್ಕೆ ತೆರೆ ಎಳೆಯಲಾಗಿದೆ.