ಗೌರಿ ಹತ್ಯೆ: ಮಹರಾಷ್ಟ್ರದಲ್ಲಿ ಒಬ್ಬ ಆರೋಪಿ ಸೆರೆ, ಸುಳಿವು ನೀಡಿದ ಡೈರಿ
ಮುಂಬೈ, ಸೆಪ್ಟೆಂಬರ್ 12: ಮಹರಾಷ್ಟ್ರದ ಪೊಲೀಸ್ ತನಿಖಾ ತಂಡ ಎಟಿಎಸ್ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು ಆತನಿಗೂ ಗೌರಿ ಲಂಕೇಶ್ ಹತ್ಯೆಗೂ ನಿಖಟ ನಂಟಿದೆ ಎಂದು ಆರೋಪಿಸಲಾಗಿದೆ.
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಅಮೋಲ್ ಕಾಳೆಯ ಡೈರಿಯಲ್ಲಿ ನಮೂದಾಗಿದ್ದ 'ಮೆಕ್ಯಾನಿಕ್' ಪದವನ್ನು ಆಧಾರವಾಗಿಟ್ಟುಕೊಂಡು ಮೆಕಾನಿಕಲ್ ಎಂಜಿನಿಯರ್ ವಾಸುದೇವ ಸೂರ್ಯವಂಶಿ ಎಂಬಾತನನ್ನು ಮಹಾರಾಷ್ಟ್ರ ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ಗೋವಿಂದ ಪಾನ್ಸರೆ ಮತ್ತು ದಾಬೋಲ್ಕರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಪೊಲೀಸರು ಗೌರಿ ಹತ್ಯೆ ಪ್ರಕರಣದಲ್ಲಿ ಕರ್ನಾಟಕದ ಎಸ್ಐಟಿಯಿಂದ ಬಂಧಿತರಾದ ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಆಗ ಸಿಕ್ಕಿದ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ವಾಸುದೇವ ಸೂರ್ಯವಂಶಿಯನ್ನು ಬಂಧಿಸಲಾಗಿದೆ.

ಮೆಕ್ಯಾನಿಕ್ ಪದವೇ ಸುಳಿವು
ಅಮೋಲ್ ಕಾಳೆಯ ಡೈರಿಯಲ್ಲಿದ್ದ 'ಮೆಕ್ಯಾನಿಕ್' ಪದವನ್ನು ಎಸ್ಐಟಿಯು ಮೊದಲಿಗೆ ತಪ್ಪಾಗಿ ಗ್ರಹಿಸಿತ್ತು. ಹತ್ಯೆಗೆ ಬೈಕ್ ನೀಡುವವ, ಹತ್ಯೆಗೆ ಬಳಸಿದ ಬೈಕ್ನ ಸ್ವರೂಪ ಬದಲಿಸುವವನಿಗೆ ಈ ಕೋಡ್ ವರ್ಡ್ ನೀಡಲಾಗಿದೆ ಎಂದು ಗ್ರಹಿಸಲಾಗಿತ್ತು. ಆದರೆ ಮಹಾರಾಷ್ಟ್ರ ಪೊಲೀಸರು ಇದರ ಅರ್ಥವನ್ನು ಸರಿಯಾಗಿ ಗ್ರಹಿಸಿ ಮೆಕ್ಯಾನಿಕಲ್ ಎಂಜಿನಿಯರ್ ಒಬ್ಬನನ್ನು ಬಂಧಿಸಿದ್ದಾರೆ.

ಶಸ್ತ್ರಾಸ್ತ್ರ ಚಲಾವಣೆ ತರಬೇತಿ ಪಡೆದಿದ್ದ
ಬಂಧಿತ ವಾಸುದೇವ ಸೂರ್ಯವಂಶಿ ಮೂರು ವರ್ಷದ ಹಿಂದೆ ಶಸ್ತ್ರಾಸ್ತ್ರ ತರಬೇರಿ ಶಿಬಿರಗಳಲ್ಲಿ ಪಾಲ್ಗೊಂಡು ಶಸ್ತ್ರಾಸ್ತ್ರ ಚಲಾವಣೆ ತರಬೇತಿ ಪಡೆದುಕೊಂಡಿದ್ದ. ಹಾಗಾಗಿ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಎಂಎಂ ಕಲಬುರ್ಗಿ, ಹತ್ಯೆಯಲ್ಲಿ ಈತನದ್ದು ಪ್ರಮುಖ ಪಾತ್ರ ಇರಬಹುದು ಎಂದು ಮಹಾರಾಷ್ಟ್ರ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈತನಿಗೂ ಗೌರಿ ಹತ್ಯೆಗೂ ನಂಟು ಶಂಕೆ
ಅಮೋಲ್ ಕಾಳೆ ಡೈರಿಯಲ್ಲಿ ಈತನ ಹೆಸರು ಪತ್ತೆ ಆಗಿರುವುದು ಈತನಿಗೂ ಗೌರಿ ಲಂಕೇಶ್ ಹತ್ಯೆಗೂ ಸಂಪರ್ಕ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಅಮೋಲ್ ಕಾಳೆ ಡೈರಿಯಲ್ಲಿ ಗೌರಿ ಹತ್ಯೆಗೆ ಸಂಬಂಧಿಸಿದವರ ಹೆಸರುಗಳು ಪತ್ತೆ ಆಗಿದ್ದವು. ಈತನ ಹೆಸರೂ ಇದೇ ಡೈರಿಯಲ್ಲಿ ಇರುವ ಕಾರಣ ಈತನೂ ಗೌರಿ ಹತ್ಯೆ ಸಂಚಿನಲ್ಲಿ ಭಾಗಿಯಾಗಿರಬಹುದು ಎನ್ನಲಾಗಿದೆ.

ಕೋಡ್ವರ್ಡ್ನಲ್ಲಿ ಹೆಸರುಗಳು
ಅಮೋಲ್ ಕಾಳೆ ತನ್ನ ಡೈರಿಯಲ್ಲಿ ಎಲ್ಲರ ಹೆಸರನ್ನು ಕೋಡ್ ವರ್ಡ್ ಮಾದರಿಯಲ್ಲಿ ಬರೆದುಕೊಳ್ಳುತ್ತಿದ್ದ. ಗೌರಿ ಹಂತಕ ಪರಶುರಾಮ್ ವಾಘ್ಮೋರೆ ಹೆಸರು 'ಬಿಲ್ಡರ್' ಎಂತಲೂ, ರಾಜೇಶ್ ಬಂಗೇರ ಹೆಸರು 'ಸರ್' ಎಂತಲೂ, ಎಚ್ಎಸ್.ಸುರೇಶ್ ಹೆಸರನ್ನು ಡಾಕ್ಟರ್ ಎಂತಲೂ ಹೀಗೆ ಕೋಡ್ವರ್ಡ್ನಲ್ಲಿ ಬರೆದಿಟ್ಟುಕೊಂಡಿದ್ದ.












Click it and Unblock the Notifications