ಕೇಳಿದ್ದಷ್ಟು ಸಿಕ್ಕಿಲ್ಲ, ಸಂಪೂರ್ಣ ನ್ಯಾಯ ದಕ್ಕಿಲ್ಲ, ಹೋರಾಟ ನಿಲ್ಲಲ್ಲ
ಬೆಂಗಳುರು, ಆಗಸ್ಟ್ 14 : ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿಯು ಇಂದು ನೀಡಿರುವ ತೀರ್ಪಿನ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಗ್ರೀನ್ ಬ್ರಿಗೇಡ್ ನ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಪ್ರತಿಕ್ರಿಯೆ ನೀಡಿದ್ದು, 'ಕೇಳಿದ್ದಷ್ಟು ಸಿಕ್ಕಿಲ್ಲ, ಸಂಪೂರ್ಣ ನ್ಯಾಯ ದಕ್ಕಿಲ್ಲ' ಎಂದಿದ್ದಾರೆ.
ಸಮುದ್ರಕ್ಕೆ ವ್ಯರ್ಥವಾಗಿ ಸೇರುತ್ತಿರುವ 100 ಟಿಎಂಸಿಗೂ ಅಧಿಕ ನದಿ ನೀರಲ್ಲಿ 7.56 ಟಿಎಂಸಿ ಪಾಲು ಕೇಳಿದ ಕರ್ನಾಟಕಕ್ಕೆ ಮತ್ತೆ ಮತ್ತೆ ಮುಖಭಂಗವಾಗುತ್ತಿದೆ. ಜುಲೈ 27ರಂದು ಮಹಾದಾಯಿ ನ್ಯಾಯಾಧೀಕರಣ ಮಧ್ಯಂತರ ತೀರ್ಪು ಕೂಡಾ ಆಘಾತ ತಂದಿದೆ. ಕಾನೂನು ಹೋರಾಟ, ರೈತರ ಪ್ರತಿಭಟನೆ, ಸಾರ್ವಜನಿಕರ ಅಸಹನೆ ಮುಂದುವರೆದಿದೆ.
ಮಹದಾಯಿ ನೀರಾವರಿ ಯೋಜನೆಯ ವ್ಯಾಪ್ತಿಯು ನಾಲ್ಕು ಜಿಲ್ಲೆಗಳ 13 ತಾಲ್ಲೂಕುಗಳು ಒಳಪಟ್ಟಿರುತ್ತದೆ. 13 ತಾಲ್ಲೂಕುಗಳಿಗೆ ಸೇರಿದ ಸಾವಿರಾರು ಹಳ್ಳಿಗಳು, ನಗರ ಪ್ರದೇಶಗಳು ಸೇರಿರುತ್ತವೆ.

ಮಹದಾಯಿಯಿಂದ ಕರ್ನಾಟಕ ಸರ್ಕಾರ 36.55 ಟಿಎಂಸಿ ನೀರು ಕೇಳಿದ್ದು, ಇದರಲ್ಲಿ ಕುಡಿಯಲು 7.5 ಟಿಎಂಸಿ ನೀರನ್ನು ಕೇಳಿತ್ತು. ಆದರೆ ಮಹದಾಯಿ ನ್ಯಾಯಾಧಿಕರಣವೂ ಇಂದು ತೀರ್ಪು ನೀಡಿದ್ದು, ತೀರ್ಪಿನಲ್ಲಿ 13.5 ಟಿಎಂಸಿ ನೀರು ಕರ್ನಾಟಕಕ್ಕೆ ನೀಡಿರುತ್ತದೆ ಮತ್ತು ಇದರಲ್ಲಿ 5.5 ಟಿಎಂಸಿ ನೀರು ಕುಡಿಯಲು ನೀಡಿರುವುದು ಮತ್ತು ಮಹದಾಯಿ ಕಣಿವೆಯಿಂದ ಮಲಪ್ರಭಾ ಕಣಿವೆಗೆ ನೀರು ತಿರುಗಿಸಲು ಅನುಮತಿ ನೀಡಿರುವುದು ಸಮಾಧಾನಕರವಾಗಿದೆ.

ಆದರೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಸರ್ಕಾರ ಕೂಡಲೆ ಉತ್ತಮವಾದ ನ್ಯಾಯವಾದಿಗಳ ತಂಡವನ್ನು ರಚಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಬೇಕು. ಆದೇಶದಲ್ಲಿ ಇರುವ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ.












Click it and Unblock the Notifications