ಕರ್ನಾಟಕದ ಅರ್ಜಿ ತಿರಸ್ಕರಿಸಿದ ಮಹಾದಾಯಿ ನ್ಯಾಯ ಮಂಡಳಿ
ಕರ್ನಾಟಕ, ಜುಲೈ 27 : 7.56 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಕೋರಿದ್ದ ಕರ್ನಾಟಕದ ಅರ್ಜಿಯನ್ನು ಮಹಾದಾಯಿ ನ್ಯಾಯಮಂಡಳಿ ತಿರಸ್ಕರಿಸಿದೆ. ನೀರು ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.
ಸೋಮವಾರ ನ್ಯಾಯಾಧೀಶರಾದ ಜೆ.ಎಂ.ಪಾಂಚಾಲ್ ಅವರ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಬುಧವಾರ ತೀರ್ಪು ಪ್ರಕಟವಾಗಿದ್ದು, ಅರ್ಜಿಯನ್ನು ತಿರಸ್ಕರಿಸಲಾಗಿದೆ.[ಏನಿದು ಕಳಸಾ-ಬಂಡೂರಿ ಯೋಜನೆ]
7.56 ಟಿಎಂಸಿ ನೀರನ್ನು ಮಲಪ್ರಭೆಗೆ ತಿರುಗಿಸಿಕೊಂಡು ಹುಬ್ಬಳ್ಳಿ-ಧಾರವಾಡ, ಗದಗ ಮುಂತಾದ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಕಳಸಾ-ಬಂಡೂರಿ ಯೋಜನೆಗೆ ಗೋವಾ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಆದ್ದರಿಂದ, ಸರ್ಕಾರ ನ್ಯಾಯಾಧೀಕರಣದ ಮೊರೆ ಹೋಗಿತ್ತು.[ನ್ಯಾಯಾಧೀಕರಣದತ್ತ ಹರಿದ ಮಹದಾಯಿ ವಿವಾದ]
ಮಧ್ಯಂತರ ಅರ್ಜಿಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ 136 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇವುಗಳಲ್ಲಿ 20 ತಾಲೂಕುಗಳು ಮಲಪ್ರಭಾ ಕಣಿವೆಯ ಭಾಗದಲ್ಲಿವೆ. ಮಹದಾಯಿ ಕಣಿವೆಯಲ್ಲಿ ಒಟ್ಟು 108 ಟಿಎಂಸಿ ನೀರಿನ ಲಭ್ಯತೆ ಇದೆ. ಗೋವಾ ರಾಜ್ಯ ಸದ್ಯ 9.395 ಟಿಎಂಸಿ ಬಳಕೆ ಮಾಡುತ್ತಿದೆ.
ಕುಡಿಯುವ ನೀರು ಪೂರೈಕೆ ಮಾಡಲು 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಬೇಕು ಎಂದು ಮನವಿ ಮಾಡಿತ್ತು. ಅರ್ಜಿಯ ವಾದ ಮಂಡನೆ ಸಮಯದಲ್ಲಿ ರಾಜ್ಯದಲ್ಲಿನ ಬರ ಪರಿಸ್ಥಿತಿ ಬಗ್ಗೆ ನ್ಯಾಯಮಂಡಳಿಗೆ ವಿವರಣೆ ನೀಡಲಾಗಿತ್ತು.
ಸರ್ವಪಕ್ಷ ಸಭೆ ಕರೆಯುತ್ತೇವೆ : ನ್ಯಾಯಮಂಡಳಿ ಆದೇಶದ ಬಗ್ಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದು, 'ಕುಡಿಯುವ ನೀರು ಪೂರೈಕೆ ಮಾಡಲು 7 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು ಅನುಮತಿ ಕೋರಲಾಗಿತ್ತು. ಸರ್ಕಾರದ ಪರವಾಗಿ ಹಿರಿಯ ವಕೀಲ ಪಾಲಿ ನಾರಿಮನ್ ವಾದ ಮಂಡಿಸಿದ್ದರು. ಸರ್ವಪಕ್ಷಗಳ ಸಭೆ ಕರೆದು ಮುಂದಿನ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ' ಎಂದು ಹೇಳಿದರು.