ಮಹದಾಯಿ ವಿವಾದ : ಮತ್ತೆ ಅರ್ಜಿ ಸಲ್ಲಿಸಲು ರಾಜ್ಯಕ್ಕೆ ಅನುಮತಿ
ನವದೆಹಲಿ, ಜನವರಿ 02 : ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕಾವೇರಿ ನ್ಯಾಯಾಧೀಕರಣಕ್ಕೆ ಹೊಸ ಅರ್ಜಿ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯ ಸೋಮವಾರ ಅನುಮತಿ ನೀಡಿರುವುದು ಕರ್ನಾಟಕಕ್ಕೆ ಮರಳುಗಾಡಿನಲ್ಲಿ ನೀರು ಕುಡಿದಂತಾಗಿದೆ.
ಕರ್ನಾಟಕ ಈ ಮೊದಲು ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನ್ಯಾಯಾಧೀಕರಣ ತಿರಸ್ಕರಿಸಿದ್ದರಿಂದ, ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್ ಮುಂದೆ ವಿಶೇಷ ಅರ್ಜಿಯನ್ನು ಸಲ್ಲಿಸಿತ್ತು. ಇದನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಕರಣಕ್ಕೆ ಮತ್ತೆ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ.[ಏನಿದು ಕಳಸಾ-ಬಂಡೂರಿ ಯೋಜನೆ?]
ಉತ್ತರ ಕರ್ನಾಟಕದ ಕಳಸಾ ಬಂಡೂರಿ ಕುಡಿಯುವ ನೀರಿನ ಯೋಜನೆಗಾಗಿ 7 ಟಿಎಂಸಿ ನೀರನ್ನು ಮಹದಾಯಿಯಿಂದ ಬಿಡುಗಡೆ ಮಾಡಬೇಕೆಂದು ಕರ್ನಾಟಕ 2016ರ ಆಗಸ್ಟ್ ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಕಾವೇರಿ ನ್ಯಾಯಾಧೀಕರಣ ತಿರಸ್ಕರಿಸಿತ್ತು.
ಕರ್ನಾಟಕದ ಪರವಾಗಿ ಫಾಲಿ ನಾರಿಮನ್ ಅವರು ಮಂಡಿಸಿದ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಈ ವಿವಾದ ಕುರಿತಂತೆ ನಿಖರವಾದ ಅಂಕಿಸಂಖ್ಯೆಗಳೊಂದಿಗೆ ಹೊಸ ಅರ್ಜಿಯನ್ನು ಕಾವೇರಿ ನ್ಯಾಯಾಧೀಕರಣಕ್ಕೆ ಸಲ್ಲಿಸತಕ್ಕದ್ದು ಎಂದು ಕರ್ನಾಟಕಕ್ಕೆ ತಾಕೀತು ಮಾಡಿದೆ.[ಕಳಸಾ ಬಂಡೂರಿ ಯೋಜನೆ, ವಿವಾದ ಮತ್ತು ನಾವು]
ನ್ಯಾಯಾಧೀಕರಣ ಕರ್ನಾಟಕದ ಅರ್ಜಿ ತಿರಸ್ಕರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆದಿತ್ತು. ಸಂಬಂಧಿತ ಮುಖ್ಯಮಂತ್ರಿಗಳ ಸಭೆ ಕರೆದು ಈ ವಿವಾದ ಬಗೆಹರಿಸಬೇಕೆಂದು ಕೇಂದ್ರ ಸರಕಾರವನ್ನು ರಾಜ್ಯದ ನಾಯಕರು ಮನವಿ ಮಾಡಿಕೊಂಡಿದ್ದರು.
ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿರುವ ಕರ್ನಾಟಕದ ಸರ್ವಪಕ್ಷ ಸಭೆ, ಉತ್ತರ ಕರ್ನಾಟಕದ ಜನರ ನೆರವಿಗೆ ಬರಬೇಕೆಂದು ಮನವಿ ಮಾಡಿಕೊಂಡಿತ್ತು.
ಬೆಳಗಾವಿ ಜಿಲ್ಲೆಯಲ್ಲಿಯೇ ಉಗಮವಾಗುವ ಮಹದಾಯಿ ನದಿಯ ನೀರಿಗಾಗಿ ಉತ್ತರ ಕರ್ನಾಟಕದ ಜನರು ಕಳೆದ 100ಕ್ಕೂ ಹೆಚ್ಚು ದಿನಗಳಿಂದ ಉಗ್ರ ಹೋರಾಟ ಮಾಡುತ್ತಲೇ ಇದ್ದಾರೆ. ಕರ್ನಾಟಕಕ್ಕಿಂತ ಗೋವಾ ರಾಜ್ಯದಲ್ಲಿ ಹೆಚ್ಚಾಗಿ ಹರಿಯುವ ಮಹದಾಯಿ ನದಿ ನೀರು ಉತ್ತರ ಕರ್ನಾಟಕದ ಜನತೆಗೆ ಮರೀಚಿಕೆಯಂತಾಗಿದೆ.