ಮಹದಾಯಿ ವಿವಾದ ಬಗೆಹರಿಸಲು ಗೋವಾಕ್ಕೆ ಭೇಟಿ : ಬಿಎಸ್ವೈ
ಮಹಾದಾಯಿ ವಿವಾದ ಬಗೆಹರಿಸಲು ಗೋವಾಕ್ಕೆ ಭೇಟಿ ನೀಡುತ್ತೇನೆಗೋವಾ ಸಿಎಂ ಜೊತೆ ಮಾತುಕತೆ ನಡೆಸುವುದಾಗಿ ಯಡಿಯೂರಪ್ಪ ಹೇಳಿಕೆ
ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಮಹದಾಯಿ ವಿವಾದ ಬಗೆಹರಿಸುವತ್ತ ಗಮನ ಹರಿಸಿದೆ. 'ಸಮಸ್ಯೆ ಬಗೆಹರಿಸಲು ಗೋವಾಕ್ಕೆ ಭೇಟಿ ನೀಡುತ್ತೇನೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, 'ಮಹದಾಯಿ ವಿವಾದ ಬಗೆಹರಿಸಲು ರೈತರು, ಶಾಸಕರು, ಸಂಸದರ ನಿಯೋಗದ ಜೊತೆ ಗೋವಾ ಸಿಎಂ ಭೇಟಿ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಕಳಸಾ ಬಂಡೂರಿ ಯೋಜನೆ ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದೆ. ಸಂಧಾನ ಮಾತುಕತೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈನಲ್ಲಿ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರಿಗೆ ಪತ್ರ ಬರೆದಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈಗಾಗಲೇ ಸಂಧಾನ ಸಭೆಗೆ ಒಪ್ಪಿದ್ದು, ಗೋವಾ ಸಿಎಂ ಜೊತೆ ಚರ್ಚಿಸಿ ದಿನಾಂಕ ನಿಗದಿ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಸಲಹೆ ನೀಡಿದ್ದರು. ಆದ್ದರಿಂದ, ಸಿದ್ದರಾಮಯ್ಯ ಪತ್ರ ಬರೆದಿದ್ದರು.
ಈಗ ಬಿ.ಎಸ್.ಯಡಿಯೂರಪ್ಪ ಅವರು ರೈತರ ನಿಯೋಗದ ಜೊತೆ ಗೋವಾಕ್ಕೆ ತೆರಳಿ ಸಿಎಂ ಮನೋಹರ್ ಪರಿಕ್ಕರ್ ಅವರ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಸಂಸದರ ಜೊತೆ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ಸಂಸದರು ಮಹದಾಯಿ ವಿವಾದ ಬಗೆಹರಿಸುವ ಕುರಿತು ಗಮನ ಸೆಳೆದಿದ್ದರು. ವಿವಾದ ಬಗೆಹರಿಸಲು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲು ಮೋದಿ ಸೂಚಿಸಿದ್ದರು ಎಂದು ತಿಳಿದುಬಂದಿದೆ.












Click it and Unblock the Notifications