ನೀರಿನ ಚಿಂತೆ ಬಿಟ್ಟುಬಿಡಿ, ನಾ ತಂದೆ ತರುವೆ : ಯಡಿಯೂರಪ್ಪ ಘೋಷಣೆ
ಹುಬ್ಬಳ್ಳಿ, ಡಿಸೆಂಬರ್ 21 : 'ಕುಡಿಯುವ ನೀರನ್ನು ತರುವ ಭಾರ ನನ್ನ ಮೇಲಿದೆ. ಇದು ನನ್ನ ಜವಾಬ್ದಾರಿ. ಇಂದಿನಿಂದ ನೀರಿನ ಚಿಂತೆ ಬಿಟ್ಟುಬಿಡಿ. ನೀರನ್ನು ನಾ ತಂದೆ ತರುವೆ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದರು.
ವರ್ಷಗಳಿಂದ ನಡೆಯುತ್ತಿರುವ ಕಳಸಾ-ಬಂಡೂರಿ ಯೋಜನೆ ಜಾರಿ ಹೋರಾಟಕ್ಕೆ ಗುರುವಾರ ಪ್ರಮುಖ ತಿರುವು ಸಿಕ್ಕಿದೆ. ಕರ್ನಾಟಕಕ್ಕೆ ಕುಡಿಯುವ ನೀರು ಒದಗಿಸಲು ಯಾವುದೇ ವಿರೋಧವಿಲ್ಲ ಎಂದು ಗೋವಾ ಸ್ಪಷ್ಟಪಡಿಸಿದೆ.

ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಗುರುವಾರ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಬೃಹತ್ ಸಮಾವೇಶ ನಡೆಯಿತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಮಾಡಿದರು.
ಸಮಾವೇಶದಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಮಹದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಬರೆದ ಪತ್ರವನ್ನು ಓದಿದರು.
'ನಾನು ಮತ್ತು ಜಗದೀಶ್ ಶೆಟ್ಟರ್ ಪ್ರಯತ್ನ ಮಾಡಿ ನೀರು ತಂದೆ ತರುತ್ತವೆ. ಇಂದಿನಿಂದ ನೀರಿನ ಚಿಂತೆ ಬಿಟ್ಟು ಬಿಡಿ. ನೀರನ್ನು ನಾ ತಂದೆ ತರುವೆ. ಬೇರೆಯವರ ಮಾತಿಗೆ ಕಿವಿ ಗೊಡಬೇಡಿ'ಎಂದು ಜನರಿಗೆ ಕರೆ ನೀಡಿದರು.
'ಮಹದಾಯಿ ವಿವಾದ ಬಗೆಹರಿಸಲು ಅಮಿತ್ ಶಾ ಮತ್ತು ಗೋವಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ್ದೇವೆ. ಸ್ಪಷ್ಟವಾದ ನಿರ್ಧಾರ ತೆಗೆದುಕೊಂಡಿದ್ದೇವೆ. ಮಹದಾಯಿ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ. ಸೋನಿಯಾ ಗಾಂಧಿಯವರು ರಾಜ್ಯಕ್ಕೆ ಒಂದು ಹನಿ ನೀರು ಕೊಡಲಿಲ್ಲ' ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
'ಯೋಜನೆ ಜಾರಿಗೆ 100 ಕೋಟಿ ರೂಪಾಯಿ ಬಿಡುಗಡೆ ಮಾಡಿ ಕಾಮಗಾರಿ ಪ್ರಾರಂಭಿಸಿದ್ದೆವು. ಶಂಕು ಸ್ಥಾಪನೆಗೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದಿರಲಿಲ್ಲ' ಎಂದು ಯಡಿಯೂರಪ್ಪ ಆರೋಪಿಸಿದರು.
ಭಾಷಣದ ಬಳಿಕ ಯಡಿಯೂರಪ್ಪ ಅವರು ಗೋವಾ ಮುಖ್ಯಮಂತ್ರಿ ಮಹೋಹರ್ ಪರಿಕ್ಕರ್ ಬರೆದ ಪತ್ರವನ್ನು ಓದಿದರು.













Click it and Unblock the Notifications