ಮಹದಾಯಿ ವಿವಾದ : ಗೋವಾ ಸಿಎಂ ಬರೆದ ಪತ್ರದಲ್ಲೇನಿದೆ?
ಹುಬ್ಬಳ್ಳಿ, ಡಿಸೆಂಬರ್ 21 : ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ ಅಂತ್ಯಗೊಳ್ಳಲಿದೆಯೇ?. ವಿವಾದದ ಕುರಿತು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ.
ಗುರುವಾರ ಮಹೋಹರ್ ಪರಿಕ್ಕರ್ ಯಡಿಯೂರಪ್ಪ ಅವರಿಗೆ ಫ್ಯಾಕ್ಸ್ ಮೂಲಕ ಪತ್ರವನ್ನು ಕಳಿಸಿದ್ದಾರೆ. ವಿವಾದದ ಕುರಿತು ಗೋವಾ ಸರ್ಕಾರದ ನಿಲುವನ್ನು ಪತ್ರದಲ್ಲಿ ತಿಳಿಸಲಾಗಿದೆ. ಪತ್ರದಲ್ಲಿ ಏನಿದೆ? ಎಂಬುದರ ವಿವರ ಇಲ್ಲಿದೆ...
* ಕುಡಿಯುವ ನೀರು ಮೊದಲ ಆದ್ಯತೆ ಎಂಬುದನ್ನು ಗೋವಾ ಸರ್ಕಾರ ಅರ್ಥ ಮಾಡಿಕೊಳ್ಳುತ್ತದೆ. ಕುಡಿಯುವ ನೀರು ಪೂರೈಕೆ ವಿಚಾರದಲ್ಲಿ ನಿಮ್ಮ ಕಾಳಜಿಯನ್ನು ನಾನು ಸ್ವಾಗತಿಸುತ್ತೇನೆ. ಜನರ ಹಿತದೃಷ್ಟಿಯಿಂದ ವಿವಾದವನ್ನು ಬಗೆಹರಿಸಲು ನಾವು ಸಹಕಾರ ನೀಡುತ್ತೇವೆ.
ಮಹದಾಯಿ ಹೋರಾಟಕ್ಕೆ ಎರಡು ವರ್ಷ: ತೊಟ್ಟು ನೀರಿಲ್ಲ, ಕಣ್ಣಿರೇ ಎಲ್ಲ
* ನದಿ ನೀರಿನ ಹಂಚಿಕೆ ವಿವಾದ ಮಹದಾಯಿ ನದಿ ನ್ಯಾಯಾಧೀಕರಣದ ಮುಂದಿದೆ ಎಂಬುದು ನಿಮಗೂ ತಿಳಿದಿದೆ. ನ್ಯಾಯಾಧೀಕರಣದ ಮುಂದೆ ಗೋವಾ ಕುಡಿಯುವ ನೀರಿನ ಹಂಚಿಕೆಗೆ ಯಾವುದೇ ವಿರೋಧವನ್ನು ವ್ಯಕ್ತಪಡಿಸುವುದಿಲ್ಲ.
* ನ್ಯಾಯಾಧೀಕರಣದ ಸಲಹೆಯಂತೆ ವಿವಾದವನ್ನು ಚರ್ಚೆ ಮೂಲಕ ಬಗೆಹರಿಸಿಕೊಳ್ಳಲು ಸರ್ಕಾರ ಸಿದ್ಧವಿದೆ. ಕುಡಿಯುವ ನೀರನ್ನು ಮಾನವೀಯತೆಯ ದೃಷ್ಟಿಯಿಂದ ನೀಡಲು ನಾವು ಅಗತ್ಯ ಸಹಕಾರವನ್ನು ನೀಡುತ್ತೇವೆ.