ಬಂಗಾಳಕೊಲ್ಲಿಯಲ್ಲಿ 'ವಾಯುಭಾರ' ಕುಸಿತ: ಕರ್ನಾಟಕದ ಯಾವ ಜಿಲ್ಲೆಗಳಿಗೆ ಭಾರಿ ಮಳೆ? IMD ವರದಿ
ಬೆಂಗಳೂರು, ಸೆಪ್ಟಂಬರ್ 05: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಬರಗಾಲ ಛಾಯೆ ಆವರಿಸಿದ ಬೆನ್ನಲ್ಲೆ ಹವಾಮಾನದಲ್ಲಿ ದಿಢೀರ್ ಉಂಟಾಗಿರುವ ವೈಪರಿತ್ಯಗಳ ಪ್ರಭಾವದಿಂದ ಮುಂದಿನ ಕೆಲವು ದಿನಗಳು ರಾಜ್ಯದಲ್ಲಿ ಉತ್ತಮ ಮಳೆ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ವಿಜ್ಞಾನಿ ಡಾ.ಪ್ರಸಾದ್ ಅವರು ತಿಳಿಸಿದ್ದಾರೆ.
ಮಂಗಳವಾರ ಬಂಗಾಳಕೊಲ್ಲಿ ಸಮುದ್ರದ ವಾಯವ್ಯ ಮತ್ತು ಪಶ್ಚಿಮ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಈ ಕುರಿತು ಭಾರತೀಯ ಹವಾಮಾನ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಈ ವಾಯುಭಾರ ಕುಸಿತವು ಕರ್ನಾಟಕದ ಮೇಲೆ ಭಾರಿ ಮಳೆ ಸುರಿಸಲಿದೆ. ವಾಯುಭಾರ ಕುಸಿತದ ಸ್ಥಳದಲ್ಲಿ ಸಮುದ್ರ ಮೇಲ್ಮೈನಲ್ಲಿ 7.6 ಕೀಲೋ ಮಿಟರ್ ಎತ್ತರದಲ್ಲಿ ಸುಳಿಗಾಳಿಯೊಂದು ಸೃಷ್ಟಿಯಾಗಿದೆ. ಇದು ದಕ್ಷಿಣಕ್ಕೆ ಓರೆಯಾಗಿದ್ದು, ಅದೇ ಮಾರ್ಗವಾಗಿ ದಟ್ಟಗಾಳಿ ಬೀಸುವ ಸಾಧ್ಯೆತೆಗಳು ಇದೆ.
ಈ ವೈಪರಿತ್ಯದಿಂದ ಒಂದೆಡೆ ಗಾಳಿಯ ಒತ್ತಡ ಹೆಚ್ಚಾಗಿ ಮಳೆ ಸುರಿಸುವ ಮೋಡಗಳು ಒಂದೆಡೆ ಜಮಾಯಿಸಿ ಭಾರಿ ಮಳೆ ಸುರಿಸುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇಂತಹ ವಾತಾವರಣ ಪ್ರಭಾವದಿಂದಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಮಳೆ ಮತ್ತು ತಂಪು ವಾತಾವರಣ ನಿರ್ಮಾಣವಾಗಿದೆ. ಈ ವಾಯುಭಾರತ ಕುಸಿತದಿಂದ ಕರ್ನಾಟಕದ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಪ್ರಯಾಣ ಇರಲಿದೆ, ಕರಾವಳಿ ಜಿಲ್ಲೆಗಳಿಗೂ ಭಾರಿ ಮಳೆ ಆಗಲಿದೆ ಎಂದು ಡಾ.ಪ್ರಸಾದ್ ವಿವರಿಸಿದರು.

ಉತ್ತರ ಒಳನಾಡಿನ ಮೇಲೆ ವೈಪರಿತ್ಯದ ಪ್ರಭಾವ ಹೆಚ್ಚು
ವಾಯುಭಾರ ಕುಸಿತ ಪ್ರಭಾವ ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳ ಮೇಲೆ ಹೆಚ್ಚಿರುತ್ತದೆ. ಈ ಕಾರಣದಿಂದ ಸೆಪ್ಟಂಬರ್ 6 ಮತ್ತು 7ರಂದು ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಬರಲಿದ್ದು, ಅವುಗಳಿಗೆ ಹಳದಿ ಎಚ್ಚರಿಕೆ ಘೋಷಿಸಲಾಗಿದೆ.
ಇದೇ ಭಾಗದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ. ನಂತರ ಎರಡು ದಿನ ತುಂತುರು ಮಳೆ ಆಗಲಿದೆ. ಇದರೊಂದಿಗೆ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟಂಬರ್ 9 ಮತ್ತು 10 ರಂದು ವ್ಯಾಪಕ ಮಳೆ ಬರಲಿದ್ದು, ಈ ಎರಡು ದಿನ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ದಕ್ಷಿಣದ ಜಿಲ್ಲೆಗಳಿಗೆ ಮಳೆ ಕಡಿಮೆ
ಇನ್ನೂ ದಕ್ಷಿಣ ಒಳನಾಡಿನ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ತುಮಕೂರು, ಶಿವಮೊಗ್ಗ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಸೇರಿದಂತೆ ವಿವಿಧಡೆ ಮಳೆ ಅಷ್ಟಾಗಿ ಬರುವ ಮುನ್ಸೂಚನೆ ಸದ್ಯಕ್ಕೆ ಇಲ್ಲ.
ಈ ಮೇಲಿನ ಎಲ್ಲ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ಹಗುರ ಮಳೆ ಕೆಲವು ಕಡೆಗಳಲ್ಲಿ ಮಾತ್ರ ಜೋರು ಮಳೆ ಆಗುವ ಲಕ್ಷಣಗಳು ಇವೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಾಯುಭಾರ ಕುಸಿತ ಪರಿಣಾಮ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ತಾಪಮಾನ ಕಡಿಮೆಯಾಗಿ ಚಳಿ-ಮಳೆ ವಾತಾವರಣ ಹೆಚ್ಚಿರಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications