ಲೋಕಾಯುಕ್ತರಿಂದ ರೇಣುಕಾಚಾರ್ಯರಿಗೆ 'ಹೊನ್ನಾಳಿ ಹೊಡೆತ'
ದಾವಣಗೆರೆ, ಮೇ 28 : ಅಕ್ರಮ ಆಸ್ತಿಗಳಿಕೆ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಎಂ.ಪಿ.ರೇಣುಕಾಚಾರ್ಯ ಅವರ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ಗುರುವಾರ ಬೆಳಗ್ಗೆ ದಾವಣಗೆರೆ ಲೋಕಾಯುಕ್ತ ಎಸ್.ಪಿ.ಶ್ರೀಧರ್ ನೇತೃತ್ವದಲ್ಲಿ ಅಧಿಕಾರಿಗಳು ರೇಣುಕಾಚಾರ್ಯ ಅವರ ಹೊನ್ನಾಳಿಯ ನಿವಾಸದ ಮೇಲೆ ದಾಳಿ ನಡೆಸಿದರು. ಇತ್ತ ಶಿವಮೊಗ್ಗ, ಬೆಂಗಳೂರಿನಲ್ಲಿರುವ ರೇಣುಕಾಚಾರ್ಯ ಅವರ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆಯೂ ದಾಳಿ ನಡೆಸಿದೆ. [ಅಕ್ರಮ ಆಸ್ತಿ : ರೇಣುಕಾಚಾರ್ಯ ವಿರುದ್ಧ ತನಿಖೆ]

ಎಂ.ಪಿ.ರೇಣುಕಾಚಾರ್ಯ ಅವರ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮೇ 4 ರಂದು ಆದೇಶ ನೀಡಿತ್ತು. ಭ್ರಷ್ಟಾಚಾರ ವಿರೋಧಿ ವೇದಿಕೆ ಅಧ್ಯಕ್ಷ ಗುರುಪಾದಯ್ಯ ಅವರು ದಾವಣಗೆರೆ ಲೋಕಾಯುಕ್ತ ನ್ಯಾಯಾಲಯಕ್ಕೆ ರೇಣುಕಾಚಾರ್ಯ ಅವರ ವಿರುದ್ಧ ದೂರು ನೀಡಿದ್ದರು. [ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ]
ದೂರನ್ನು ಪರಿಗಣಿಸಿದ ಕೋರ್ಟ್ ರೇಣುಕಾಚಾರ್ಯ ಅವರ ವಿರುದ್ಧ ತನಿಖೆ ನಡೆಸಿ ಜೂನ್ 26ಕ್ಕೆ ವರದಿ ನೀಡುವಂತೆ ಪೊಲೀಸರಿಗೆ ಆದೇಶ ನೀಡಿದೆ. ಲೋಕಾಯುಕ್ತ ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದು ರೇಣುಕಾಚಾರ್ಯ ಅವರು ಈಗಾಗಲೇ ಘೋಷಿಸಿದ್ದಾರೆ. ಈ ತನಿಖೆಯ ಭಾಗವಾಗಿಯೇ ಇಂದು ಅವರ ನಿವಾಸಗಳ ಮೇಲೆ ದಾಳಿ ಮಾಡಲಾಗಿದೆ.
ಆರೋಪವೇನು ? : ರೇಣುಕಾಚಾರ್ಯ ಅವರು ಸಚಿವರಾಗಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿದ್ದಾರೆ. ಸಂಬಂಧಿಕರ ಹೆಸರಿನಲ್ಲಿಯೂ ಹೊನ್ನಾಳಿ, ದಾವಣಗೆರೆ, ಶಿವಮೊಗ್ಗದಲ್ಲಿ ಬೇನಾಮಿ ಆಸ್ತಿ ಖರೀದಿ ಮಾಡಿದ್ದಾರೆ ಎಂಬುದು ಆರೋಪ.
ರೇಣುಕಾಚಾರ್ಯ ಅವರು ಚುನಾವಣಾ ಆಯೋಗಕ್ಕೂ ಸುಳ್ಳು ಮಾಹಿತಿ ನೀಡಿದ್ದಾರೆ. 2004ರ ವಿಧಾನಸಭೆ ಚುನಾವಣೆ ವೇಳೆ 26 ಲಕ್ಷ, 2008ರ ಚುನಾವಣೆಯಲ್ಲಿ 73 ಲಕ್ಷ ಹಾಗೂ 2013ರ ಚುನಾವಣೆಯಲ್ಲಿ 4 ಕೋಟಿ ಆಸ್ತಿಯನ್ನು ಅವರು ಘೋಷಿಸಿದ್ದಾರೆ. ತಮಗೆ ಆದಾಯದ ಮೂಲ ಇಲ್ಲವೆಂದು ಹೇಳುವ ಅವರು ಇಷ್ಟೊಂದು ಆಸ್ತಿ ಖರೀದಿ ಮಾಡಿದ್ದು ಹೇಗೆ? ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.












Click it and Unblock the Notifications