ಲೋಕಸಭಾ ಚುನಾವಣೆ: ಕರ್ನಾಟಕ ಬಿಜೆಪಿ ನಾಯಕರ ಕೈ ಸೇರಿದ ಆಂತರಿಕ ವರದಿ; ಕಮಲ ಕಲಿಗಳಿಗೆ ಫುಲ್ ಟೆನ್ಷನ್
ಬೆಂಗಳೂರು, ಮೇ 27: ಲೋಕಸಭಾ ಚುನಾವಣೆ ರಾಜ್ಯದಲ್ಲಿ ಎರಡು ಹಂತದಲ್ಲಿ ನಡೆದಿದ್ದು, ಚುನಾವಣಾ ಫಲಿತಾಂಶಕ್ಕಾಗಿ ರಾಜಕೀಯ ನಾಯಕರು ಕಾಯುತ್ತಿದ್ದಾರೆ. ಇತ್ತ ಕಾಂಗ್ರೆಸ್ ಗೆ ಪಂಚ ಗ್ಯಾರಂಟಿಗಳಿಂದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದು, ಅದೇ ಗ್ಯಾರಂಟಿಗಳು ಲೋಕಸಭಾ ಚುನಾವಣೆಯಲ್ಲೂ ಕೈ ಹಿಡಿಯಲಿವೆ ಎಂಬ ವಿಶ್ವಾಸದಲ್ಲಿದ್ದು, ಕಮಲ-ದಳ ನಾಯಕರಿಗೆ ಬಿಗ್ ಶಾಕ್ ಎದುರಾಗಿದೆ.

ಹೌದು, ಮೂರು ಪಕ್ಷಗಳಲ್ಲೂ ಸೋಲು - ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಇದರ ನಡುವೆ ಆಂತರಿಕ ವರದಿಯೊಂದು ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು, ಕಮಲ ಪಾಳಯದಲ್ಲಿ ಸ್ವಲ್ಪ ಟೆನ್ಷನ್ ಶುರುವಾದಂತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡಿದ್ದ ಬಿಜೆಪಿಯೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದರೂ ಟಾರ್ಗೆಟ್ ಹಾಕಿಕೊಂಡಿತ್ತು. ಆದರೆ, ಆಂತರಿಕ ವರದಿ ಬಿಜೆಪಿ ನಾಯಕರ ಕೈ ಸೇರಿದ್ದು, ಆಂತರಿಕ ವರದಿಯಿಂದ ಕಮಲ ಕಲಿಗಳಿಗೆ ಟೆನ್ಷನ್ ಶುರುವಾಗಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ ಬಿಜೆಪಿ ಬರೋಬ್ಬರಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಫೈಕಿ 28 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದ ಬಿಜೆಪಿಯೂ ಈ ಬಾರಿ ಹಲವು ಸ್ಥಾನಗಳನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಆಡಳಿತರೂಢ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬಿಜೆಪಿಯೂ ಜೆಡಿಎಸ್ ಜೊತೆಗೆ ಮೈತ್ರಿಯಾಗಿತ್ತು. ಎಲೆಕ್ಷನ್ನಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸಕ್ಸಸ್ ಆಗಿದ್ದರೂ ಕೂಡ ಉತ್ತರ ಕರ್ನಾಟಕದಲ್ಲಿ ಬಿಜೆಪಿ ಎಡವುವ ಸಾಧ್ಯತೆ ಇದೆ ಎಂದು ಇಂಟರ್ನಲ್ ರಿಪೋರ್ಟ್ ಹೇಳಿದೆ ಎನ್ನಲಾಗುತ್ತಿದೆ. ಹೀಗಾಗಿ ಕಮಲ ಪಾಳಯದಲ್ಲಿ ಒಂದಿಷ್ಟು ಟೆನ್ಶನ್ ಕಾಣುತ್ತಿದೆ.
28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಕನಸು ಇಟ್ಟುಕೊಂಡಿದ್ದ ಕಮಲ-ದಳ ನಾಯಕರಿಗೆ ಆಂತರಿಕ ವರದಿ ಬಿಗ್ ಶಾಕ್ ಕೊಟ್ಟಿದೆ. ಆದರೆ, ಆಂತರಿಕ ವರದಿಯನ್ನು ನೋಡಿದ ಮೇಲೆ ರಾಜ್ಯದ ಎಲ್ಲ ಕ್ಷೇತ್ರಗಳನ್ನು ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಾಗಿದೆ. ಬಿಜೆಪಿಯ ಬೂತ್, ಜಿಲ್ಲಾ, ತಾಲೂಕು ಹಾಗೂ ಮುಖಂಡರ, ಕಾರ್ಯಕರ್ತರ ಅಭಿಪ್ರಾಯಗಳನ್ನು ಒಳಗೊಂಡಿರುವ ಆಂತರಿಕ ವರದಿಯೂ ಬಿಜೆಪಿ ನಾಯಕರಿಗೆ ಆಘಾತಕಾರಿ ಸುದ್ದಿಯಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಡೆದ ಸ್ಥಾನಗಳನ್ನ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಡೌಟ್ ಎಂದು ಆಂತರಿಕ ವರದಿ ಹೇಳಿಕೆ. ಬಿಜೆಪಿ ನಾಯಕರು ಆಡಳಿತಾರೂಢ ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಆದರೆ, ಅಂದುಕೊಂಡ ಗುರಿ ಮುಟ್ಟುವುದು ಇರಲಿ, ಕಳೆದ ಬಾರಿ ಪಡೆದ ಸ್ಥಾನಗಳನ್ನು ಪಡೆಯುವುದು ಡೌಟ್ ಎಂದು ಹೇಳಲಾಗಿದೆ. ಆಂತರಿಕ ವರದಿ ಪ್ರಕಾರ 17 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದು, ಐದು ಕ್ಷೇತ್ರಗಳಲ್ಲಿ 50 - 50 ಚಾನ್ಸ್ ಇದ್ದು, ಅಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ ಇದೆ ಎನ್ನಲಾಗಿದೆ. 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಕಷ್ಟ ಎಂದು ಆಂತರಿಕ ವರದಿ ತಿಳಿಸಿದೆ.
ಬಿಜೆಪಿಯ ಹಳೇ ಮೈಸೂರು ಪ್ರಾಂತ್ಯದ ಮೈಸೂರು, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಬಹುದು ಎಂದು ಇಂಟರ್ನಲ್ ರಿಪೋರ್ಟ್ ತಿಳಿಸಿದೆ. ಇನ್ನೂ ಬೆಂಗಳೂರಿನ ನಾಲ್ಕು ಕ್ಷೇತ್ರಗಳು ಅಂದ್ರೇ ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ನಾಯಕರು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.
ಮಲೆನಾಡು ಹಾಗೂ ಕರಾವಳಿ ಭಾಗದ ಉಡುಪಿ - ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ , ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸದಲ್ಲಿ ಕೇಸರಿ ನಾಯಕರು ಇದ್ದಾರೆ. ಇತ್ತ, ಹುಬ್ಬಳ್ಳಿ - ಧಾರವಾಡ, ಬಾಗಲಕೋಟೆ, ಹಾವೇರಿ, ವಿಜಯಪುರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ಕಮಲ ಪಾಳಯದ ಆಂತರಿಕ ವರದಿ ಹೇಳಿದೆ.
ಬೆಳಗಾವಿ, ದಾವಣಗೆರೆ, ಹಾಸನ, ಕಲಲಬುರಗಿ ಹಾಗೂ ಬಳ್ಳಾರಿಯಲ್ಲಿ ಬಿಜೆಪಿಗೆ 50 - 50 ಚಾನ್ಸ್ ಇದೆ ಎಂದು ಕಮಲದ ಆಂತರಿಕ ವರದಿ ಹೇಳಿದೆ. ಚಾಮರಾಜನಗರ, ಚಿಕ್ಕೋಡಿ, ಬೀದರ್, ರಾಯಚೂರು, ಕೊಪ್ಪಳ, ಚಿತ್ರದುರ್ಗ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಸೋಲುವ ಆತಂಕ ಇದೆ ಎಂದು ಇಂಟರ್ನಲ್ ರಿಪೋರ್ಟ್ ಹೇಳಿದೆ. ಜೆಡಿಎಸ್ ಸ್ಪರ್ಧಿಸಿದ ಮೂರು ಕ್ಷೇತ್ರಗಳಲ್ಲಿ ಎರಡನ್ನು ಗೆಲ್ಲಬಹುದು ಎಂದು ಹೇಳಲಾಗಿದೆ.












Click it and Unblock the Notifications