ಹಾಸನ ಬದಲಿಗೆ ಮಂಡ್ಯದಿಂದ ಪ್ರಜ್ವಲ್ ರೇವಣ್ಣ ಕಣಕ್ಕೆ?
Recommended Video
ಬೆಂಗಳೂರು, ಆಗಸ್ಟ್ 01: ಮಾಜಿ ಪ್ರಧಾನಿ ಎಚ್. ಡಿ ದೇವೆಗೌಡರ ಮೊಮ್ಮಗ ಮತ್ತು ಎಚ್.ಡಿ ರೇವಣ್ಣ ಅವರ ಮಗ ಪ್ರಜ್ವಲ್ ರೇವಣ್ಣ ಅವರು ಮುಂದಿನ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅನೇಕ ಊಹಾಪೋಹಗಳು ಎದ್ದಿದ್ದು ನೆನಪಿರಬಹುದು. ಆದರೆ, ಪ್ರಜ್ವಲ್ ಸ್ಪರ್ಧಿಸಿರಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸುವ ಬಗ್ಗೆ ಸುದ್ದಿ ಬಂದಿದೆ
ಪ್ರಜ್ವಲ್ ಅವರು ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮೊದಲಿಗೆ ಸುದ್ದಿ ಹಬ್ಬಿತ್ತು. ಈ ಬಗ್ಗೆ ಪ್ರಜ್ವಲ್ ಕೂಡಾ ಒಲವು ತೋರಿದ್ದರು. ಆದರೆ, ಹುಣಸೂರಿನಲ್ಲಿ ಸ್ಪರ್ಧೆ ಸಾಧ್ಯವಾಗದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿದ್ದಾರೆ ಎಂಬ ಸುದ್ದಿ ಬಂತು.
2019ರ ಲೋಕಸಭಾ ಚುನಾವಣೆ: ದೇವೇಗೌಡ್ರ ಕುಟುಂಬದ ಮಹತ್ವದ ನಿರ್ಧಾರ?
ಜತೆಗೆ ಬೇಲೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೂಡಾ ಕಾರ್ಯಕರ್ತರಿಂದ ಮನವಿ ಬಂದಿತ್ತು. ಆದರೆ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರಜ್ವಲ್ ಅವರು ಅಸೆಂಬ್ಲಿ ಬದಲಿಗೆ ಲೋಕಸಭೆಗೆ ಸ್ಪರ್ಧಿಸುವುದು ಸೂಕ್ತ ಎಂದು ನಿರ್ಧರಿಸಿಬಿಟ್ಟಿದ್ದರು.
ಹಾಸನ ಕ್ಷೇತ್ರದ ಹಾಲೀ ಸಂಸದರು ಆಗಿರುವ ದೇವೇಗೌಡ್ರು, 2019ರ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧಿಸುತ್ತಾರೆಂದು ಘೋಷಿಸಿದ್ದರು. ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಹಾಸನ ಕ್ಷೇತ್ರದಲ್ಲಿ ನನ್ನ ಉತ್ತರಾಧಿಕಾರಿಯಾಗಿ ಪ್ರಜ್ವಲ್ ಸ್ಪರ್ಧಿಸುತ್ತಾನೆಂದು ಗೌಡ್ರು ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ
ಹಾಸನದಿಂದ ಮತ್ತೆ ದೇವೇಗೌಡರು ಕಣಕ್ಕೆ
'ಪ್ರಜ್ವಲ್ ನನ್ನ ರಾಜಕೀಯ ಉತ್ತರಾಧಿಕಾರಿ', ನಾನು ಮುಂದಿನ ಚುನಾವಣೆ ಸ್ಪರ್ಧಿಸುವುದಿಲ್ಲ ಎನ್ನುತ್ತಿದ್ದ ದೇವೇಗೌಡರು ಈಗ ಬದಲಾದ ರಾಜಕೀಯ ಚಿತ್ರಣದಿಂದಾಗಿ ಮತ್ತೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಮೊಮ್ಮಗ ಪ್ರಜ್ವಲ್ ಬದಲಿಗೆ ತಾವೇ ಹಾಸನದಿಂದ ಸ್ಪರ್ಧೆಗಿಳಿಯಲಿದ್ದಾರೆ.
ಮಂಡ್ಯದಿಂದ ಪ್ರಜ್ವಲ್ ರೇವಣ್ಣ
ಮೇಲುಕೊಟೆಯಿಂದ ಶಾಸಕರಾಗಿ ಸಿ.ಎಸ್. ಪುಟ್ಟರಾಜು ಅವರು ಆಯ್ಕೆಯಾಗಿದ್ದಾರೆ. ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಿ ಅಥವಾ ಮುಂದಿನ ವರ್ಷ ನಡೆಯುವ ಸಾರ್ವತ್ರಿಕ ಚುನಾವಣೆ ಇರಲಿ ಪ್ರಜ್ವಲ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಂಡ್ಯದ ಜೆಡಿಎಸ್ ಮುಖಂಡರು ಬೇಡಿಕೆ ಇಟ್ಟಿದ್ದಾರೆ.
ಮೈತ್ರಿ ಸರ್ಕಾರದ ಲಾಭ ಪಡೆಯುವ ಯೋಚನೆ
ಸಂಸತ್ತಿನಲ್ಲಿ ಕೇವಲ ಒಂದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರದ ಲಾಭ ಪಡೆದು, ಹತ್ತು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದೆ. ಮುಖ್ಯವಾಗಿ, ಹಳೆ ಮೈಸೂರು ವಿಭಾಗದಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದ್ದನ್ನು ಮುಂದಿಟ್ಟುಕೊಂಡು ಹೀಗೊಂದು ಬೇಡಿಕೆ ಮುಂದಿಡಲಾಗಿದೆ. ಮೈಸೂರು ಭಾಗದಿಂದ ಮಂಡ್ಯ ಅಥವಾ ಮೈಸೂರಿನಲ್ಲಿ ಪ್ರಜ್ವಲ್ ಸ್ಪರ್ಧಿಸಲು ಜೆಡಿಎಸ್ ವರಿಷ್ಠ ದೇವೇಗೌಡರು ಸೂಚಿಸುವ ಸಾಧ್ಯತೆ ಹೆಚ್ಚಿದೆ.
ಮೈತ್ರಿ ಲಾಭ ಎರಡು ಪಕ್ಷಕ್ಕೂ ಆಗಲಿದೆ
ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಅಸೆಂಬ್ಲಿ ಸ್ಥಾನಗಳ ಪೈಕಿ ಜೆಡಿಎಸ್ 3, ಬಿಜೆಪಿ 4 ಮತ್ತು ಕಾಂಗ್ರೆಸ್ 1ಸ್ಥಾನದಲ್ಲಿ ಗೆದ್ದಿದೆ. ಖುದ್ದು ಸಿದ್ದರಾಮಯಯ್ಯನವರೇ ಇಲ್ಲಿಂದ ಸೋತಿರುವುದು ಮತ್ತು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಗೆದ್ದಿರುವುದರಿಂದ, ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ನವರು ಕೇಳಿದರೆ, ಕಾಂಗ್ರೆಸ್ ಗೆ ಇಲ್ಲ ಎನ್ನಲು ಕಾರಣಗಳಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮೈತ್ರಿ ಲಾಭ ಎರಡು ಪಕ್ಷಕ್ಕೂ ಆಗಲಿದೆ.