ಲೋಕಸಭಾ ಚುನಾವಣೆ ಗೆಲುವಿನ ಬಗ್ಗೆ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ
Recommended Video
ಬೆಂಗಳೂರು, ಮೇ 23: ಲೋಕಸಭೆ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ, ರಾಜ್ಯದಲ್ಲಿ ಬಿಜೆಪಿಯು ಐತಿಹಾಸಿಕ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲಿಟ್ಟಿದೆ. ಈ ಸಂತಸವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಈ ಅದ್ಭುತವಾದ ಫಲಿತಾಂಶಕ್ಕೆ ರಾಜ್ಯದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದ ಯಡಿಯೂರಪ್ಪ, ರಾಷ್ಟ್ರ ರಾಜಕಾರಣದ ಭಾರಿ ನಾಯಕರೇ ಈ ಚುನಾವಣೆಯಲ್ಲಿ ಸೋತಿರುವುದು ರಾಜ್ಯದ ಜನರ ಮನದ ಇಂಗಿತವನ್ನು ಬಹಿರಂಗಗೊಳಿಸಿದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡ, ಲೋಕಸಭೆ ವಿಪಕ್ಷ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಏಳು ಬಾರಿ ಸಂಸದ ಕೆ.ಎಚ್.ಮುನಿಯಪ್ಪ ಅವರುಗಳಂತಹಾ ಭಾರಿ ರಾಜಕೀಯ ಕುಳಗಳೇ ಈ ಬಾರಿ ಸೋಲು ಅನುಭವಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಏಕವಚನದಲ್ಲಿ ಸಂಭೋದಿಸಿ, ಬಿಜೆಪಿಯನ್ನು ರಾಜ್ಯದಲ್ಲಿ ಒಂದಂಕಿಗೆ ತರುತ್ತೇನೆ ಎಂದು ಅಹಂಕಾರದಿಂದ ನುಡಿದಿದ್ದ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಈಗಲಾದರೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ ಆಗ್ರಹಿಸಿದರು.
ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯು 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯದ ಜನ 55% ಕ್ಕೂ ಹೆಚ್ಚು ಮತಗಳನ್ನು ನಮಗೆ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ ಅವರಿಗೆ ಧನ್ಯವಾದ ಎಂದು ಯಡಿಯೂರಪ್ಪ ಹೇಳಿದರು.
ಉ.ಕರ್ನಾಟಕ, ಕರಾವಳಿ, ಮಲೆನಾಡಿಗೆ ಅಭಿನಂದನೆ
ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಜನರಿಗೆ ವಿಶೇಷ ಧನ್ಯವಾದ ಅರ್ಪಿಸಿದ ಯಡಿಯೂರಪ್ಪ, ನಮ್ಮ ಎಲ್ಲಾ ಅಭ್ಯರ್ಥಿಗಳನ್ನು ಈ ಭಾಗದ ಜನ ಜಯಶೀಲರನ್ನಾಗಿ ಮಾಡಿದ್ದಾರೆ ಎಂದು ಅವರು ಹೇಳಿದರು.
ಮೈತ್ರಿ ಸರ್ಕಾರಕ್ಕೆ ಜನರ ಪಾಠ
ವರ್ಗಾವಣೆ ದಂಧೆ ನಡೆಸಿ, ಭ್ರಷ್ಟಾಚಾರವನ್ನೇ ಆಡಳಿತ ಎಂದುಕೊಂಡಿದ್ದ, ರೈತರ ಸಾಲ ಮನ್ನಾ ಮಾಡುತ್ತೇವೆಂದು ಸುಳ್ಳು ಹೇಳಿದ್ದ ರಾಜ್ಯದ ಮೈತ್ರಿ ಸರ್ಕಾರಕ್ಕೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಚಿಂಚೋಳಿಯಲ್ಲಿ ಗೆದ್ದಿದ್ದೇವೆ
ಉಪಚುನಾವಣೆ ಬಗ್ಗೆ ಮಾತನಾಡಿದ ಯಡಿಯೂರಪ್ಪ ಅವರು, ಚಿಂಚೋಳಿಯಲ್ಲಿ ಬಿಜೆಪಿ ಸುಲಭವಾಗಿ ಗೆದ್ದಿದ್ದೇವೆ, ಆದರೆ ಕುಂದಗೋಳದಲ್ಲಿ ಕಡಿಮೆ ಅಂತರದಿಂದ ಸೋತಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರ ಉರುಳಿಸುವ ಬಗ್ಗೆ ಹೇಳಿದ್ದೇನು?
ಸರ್ಕಾರ ಉರುಳಿಸುವ ಪ್ರಯತ್ನಗಳನ್ನೇನಾದರೂ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ಅದಕ್ಕೆ ಈ ಹಂತದಲ್ಲಿ ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಹೇಳಿದರು.