ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ನಾಯಕರಿಗೆಲ್ಲಾ ಸೋಲು!
ಬೆಂಗಳೂರು, ಮೇ 23 : 2019ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.
ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಚುನಾವಣಾ ಫಲಿತಾಂಶ ಹಿನ್ನಡೆ ಉಂಟು ಮಾಡಿದೆ. ಬಾಗಲಕೋಟೆ ಮತ್ತು ತವರು ಜಿಲ್ಲೆ ಮೈಸೂರಿನಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಸೋಲು ಅನುಭವಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತೇವೆ ಎಂದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗ ಹಲವು ಜಿಲ್ಲೆಗಳ ನಾಯಕರ ಮನವೊಲಿಸಿ ಸಿದ್ದರಾಮಯ್ಯ ಅವರು ಮೈತ್ರಿಗೆ ಒಪ್ಪಿಸಿದ್ದರು. ಚುನಾವಣೆಯಲ್ಲಿ ಪ್ರಚಾರವನ್ನು ನಡೆಸಿದ್ದರು.
ಕರ್ನಾಟಕದಲ್ಲಿ ಕಾಂಗ್ರೆಸ್ 21 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿದರೆ ಉಳಿದ ಕ್ಷೇತ್ರಗಳಲ್ಲಿ ಯಾರೂ ಸಹ ಜಯಗಳಿಸಿಲ್ಲ. ಇದರಿಂದ ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಉಂಟಾಗಿದೆ. ಮತ್ತೊಂದು ಕಡೆ ಸಿದ್ದರಾಮಯ್ಯ ಆಪ್ತರು ಸೋಲು ಕಂಡಿದ್ದಾರೆ.

ಮೈಸೂರು-ಕೊಡಗು ಕ್ಷೇತ್ರ
ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಸಿ.ಎಚ್.ವಿಜಯಶಂಕರ್ ಸೋಲು ಅನುಭವಿಸಿದ್ದಾರೆ. ಸಿದ್ದರಾಮಯ್ಯ ಅವರೇ ಆಪ್ತನಿಗೆ ಟಿಕೆಟ್ ಕೊಡಿಸಿದ್ದರು. ಪ್ರಚಾರವನ್ನು ಮಾಡಿದ್ದರು. ಆದರೆ, ಪ್ರತಾಪ್ ಸಿಂಹ ವಿರುದ್ಧ ವಿಜಯ ಶಂಕರ್ ಸೋತಿದ್ದಾರೆ.

ವೀಣಾ ಕಾಶಪ್ಪನವರ್ ಸೋಲು
ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಅವರು ಬಾಗಲಕೋಟೆ ಕ್ಷೇತ್ರದಲ್ಲಿ ತಮ್ಮ ಆಪ್ತರಾದ ವೀಣಾ ಕಾಶಪ್ಪನವರ್ಗೆ ಟಿಕೆಟ್ ಕೊಡಿಸಿದ್ದರು. ಚುನಾವಣಾ ಪ್ರಚಾರನ್ನು ಮಾಡಿದ್ದರು. ಆದರೆ, ಪಿ.ಸಿ.ಗದ್ದಿಗೌಡರ್ ವಿರುದ್ಧ ವೀಣಾ ಕಾಶಪ್ಪನವರ್ ಸೋಲು ಕಂಡಿದ್ದಾರೆ.

ವಿ.ಎಸ್.ಉಗ್ರಪ್ಪ ಸೋಲು
2018ರ ಉಪ ಚುನಾವಣೆಯಲ್ಲಿ ಬಳ್ಳಾರಿಯಲ್ಲಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಅವರ ಆಪ್ತರಾದ ವಿ.ಎಸ್.ಉಗ್ರಪ್ಪ ಅವರು ಈ ಬಾರಿ ಸೋಲು ಕಂಡಿದ್ದಾರೆ. ಉಪ ಚುನಾವಣೆಯಲ್ಲಿ 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಿದ್ದರು.

ಕೊಪ್ಪಳದಲ್ಲಿ ಸೋಲು
ಕೊಪ್ಫಳ ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಆಪ್ತರಾದ ರಾಜಶೇಖರ್ ಹಿಟ್ನಾಳ್ ಸೋಲು ಅನುಭವಿಸಿದ್ದಾರೆ. ರಾಜಶೇಖರ್ ಹಿಟ್ನಾಳ್ ಅವರು 548386 ಮತಗಳನ್ನು ಪಡೆದು ಬಿಜೆಪಿಯ ಕರಡಿ ಸಂಗಣ್ಣ ವಿರುದ್ಧ 38397 ಮತಗಳ ಅಂತರದಿಂದ ಸೋತಿದ್ದಾರೆ.












Click it and Unblock the Notifications