ಲಕ್ಷ್ಮೀ ಹೆಬ್ಬಾಳ್ಕರ್ ಪರ ಪಂಚಮಸಾಲಿ ವಚನಾನಂದ ಶ್ರೀ ಬ್ಯಾಟಿಂಗ್: ಶೆಟ್ಟರ್ಗೆ ಸಂಕಷ್ಟ!
ಲಿಂಗಾಯತ ಮತಗಳು ಕರ್ನಾಟಕದ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಕಾರಣಕ್ಕೆ ಲಿಂಗಾಯತ ಮತಗಳ ಓಲೈಕೆಗೆ ಪ್ರತಿಯೊಂದು ರಾಜಕೀಯ ಪಕ್ಷವೂ ಪ್ರಯತ್ನವನ್ನ ಮಾಡುತ್ತವೆ. ಹೀಗಿದ್ದಾಗಲೇ ಕರ್ನಾಟಕದಲ್ಲಿ ಈಗ ಲೋಕಸಭೆ ಚುನಾವಣೆ ಕಾವು ಏರಿದ್ದು, ಲಿಂಗಾಯತ ಪಂಚಮಸಾಲಿ ಮಠದ ಸ್ವಾಮೀಜಿ ಮಹತ್ವದ ಹೇಳಿಕೆ ನೀಡಿದ್ದಾರೆ.
ಹೌದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜವದರಲ್ಲ ಎಂಬ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೇಳಿಕೆ, ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಮೂಡಿಸಿದ್ದು, ಚರ್ಚೆಗೂ ಕಾರಣವಾಗಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಚರ್ಚಿತ ವಿಚಾರ ಆಗುತ್ತಿದೆ. ಆದರೆ, ಈ ಬೆಳವಣಿಗೆ ನಡುವೆ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಪರವಾಗಿ ಬ್ಯಾಟ್ ಬೀಸಿದ್ದಾರೆ. ಈ ಮೂಲಕ ಬೆಳಗಾವಿ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಆಗಿದೆ.

ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ....
ಅಷ್ಟಕ್ಕೂ ಇಂದು ಹರಿಹರದ ಪೀಠದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ವಚನಾನಂದ ಶ್ರೀಗಳು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜವದರೆ. ಸಂಪೂರ್ಣ ಆಶೀರ್ವಾದ ಅವರಿಗೆ ಇದೆ ಅಂತ ಹೇಳುವ ಮೂಲಕ ಮುರುಗೇಶ್ ನಿರಾಣಿ ಆರೋಪವನ್ನು ತಳ್ಳಿ ಹಾಕಿದ್ದಾರೆ. ಮುರುಗೇಶ್ ನಿರಾಣಿ ಅವರು ಪಕ್ಷ ಒಂದರ ವಕ್ತಾರರು, ಮುಖಂಡರು ಮತ್ತು ಮಾಜಿ ಸಚಿವರು. ಹೀಗಾಗಿ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪಂಚಮಸಾಲಿ ಸಮಾಜದವರಲ್ಲ ಅಂತಾ ಹೇಳಿಕೆ ನೀಡಿರಬಹುದು. ಆದ್ರೆ ನಾನು ಒತ್ತಿ ಹೇಳುತ್ತೇನೆ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜದ ನಾಯಕರೇ ಆಗಿದ್ದಾರೆ. ಇದ್ರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ ವಚನಾನಂದ ಶ್ರೀಗಳು.
ಪಂಚಮಸಾಲಿ ಸಮಾಜದ ಅಭಿವೃದ್ಧಿ & ಏಳಿಗೆಯೆ ಮಠದ ಏಕೈಕ ಕಾಳಜಿ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಡೆದು ಬಂದ ಹಾದಿ, ಪಟ್ಟಿರುವ ಕಷ್ಟ ಅಷ್ಟಿಷ್ಟಲ್ಲ. ಬೆಳಗಾವಿ ಭಾಗದಲ್ಲಿ, ಪ್ರಭಾವಿ ನಾಯಕಿಯಾಗಿ ಬೆಳೆದಿದ್ದು. ಎತ್ತರಕ್ಕೆ ಬೆಳೆದ ಲಕ್ಷ್ಮೀ ಹೆಬ್ಬಾಳ್ಕರ್ ಪಂಚಮಸಾಲಿ ಸಮಾಜದಿಂದ ಬಂದವರೇ ಆಗಿದ್ದಾರೆ. ಅವರು ನಮ್ಮವರೇ ಆಗಿದ್ದು ನಮ್ಮ ಪೂರ್ಣ ಆಶೀರ್ವಾದ ಇದೆ ಎಂದು ಹೇಳುವ ಮೂಲಕ ಗೊಂದಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ವಚನಾನಂದ ಶ್ರೀ.

ಬೆಳಗಾವಿ ಲೋಕಸಭೆಯಲ್ಲಿ ಭರ್ಜರಿ ಫೈಟ್!
ಮತ್ತೊಂದು ಕಡೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರ ಇದೀಗ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ. ಇನ್ನೊಂದು ಕಡೆ ಅವರ ವಿರುದ್ಧ ಬಿಜೆಪಿ ಪಕ್ಷದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಖಾಡ ಪ್ರವೇಶ ಮಾಡಿದ್ದಾರೆ. ಈ ಮೂಲಕ 2024 ಲೋಕಸಭೆ ಚುನಾವಣೆ ಭಾರಿ ಕುತೂಹಲ ಕೆರಳಿಸಿದೆ. ಒಂದು ಕಡೆ, ಜಗದೀಶ್ ಶೆಟ್ಟರ್ ಲಿಂಗಾಯತರೇ ಆಗಿದ್ದರೂ ಅವರು ಬೆಳಗಾವಿ ಅವರಲ್ಲ ಎಂಬ ಕೂಗು ಕೇಳಿಬರುತ್ತಿದೆ. ಹೀಗಿದ್ದಾಗಲೇ ಇತ್ತ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪುತ್ರನ ಗೆಲುವಿಗೆ ಎಲ್ಲಾ ರೀತಿಯ ತಂತ್ರ ಹೂಡುತ್ತಿದೆ ಕಾಂಗ್ರೆಸ್. ಹೀಗಾಗಿ ಚುನಾವಣೆ ಅಖಾಡ ರಂಗೇರಿದ್ದು, ಜಗದೀಶ್ ಶೆಟ್ಟರ್ ಅವರ ಹಾದಿ ಸುಗಮವಾಗಿ ಇಲ್ಲ ಎಂಬ ಮಾತು ಹರಿದಾಡುತ್ತಿದೆ.












Click it and Unblock the Notifications