ಸಿಎಂ ಸಿದ್ದರಾಮಯ್ಯ ಪ್ರಚಾರ ಇಲ್ಲಿ ಫಲ ಕೊಡಲಿಲ್ಲ
ಹಾವೇರಿ, ಮೇ 20 : ರಾಜ್ಯದಲ್ಲಿ ಬೀಸುತ್ತಿದ್ದ ನರೇಂದ್ರ ಮೋದಿ ಅವರ ಅಲೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೂ ವ್ಯಾಪಿಸಿದ್ದು, ಹಾಲಿ ಸಂಸದ ಶಿವಕುಮಾರ್ ಉದಾಸಿ ಎರಡನೇ ಬಾರಿಗೆ ಜಯಗಳಿಸುವ ಮೂಲಕ ಸಂಸತ್ ಪ್ರವೇಶ ಮಾಡಿದ್ದಾರೆ. 87,571 ಮತಗಳ ಅಂತದಿಂದ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಉದಾಸಿ ಜಯಗಳಿಸಿದ್ದಾರೆ.
ಈ ಬಾರಿ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇತ್ತು. ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಆಯ್ಕೆ ಮಾಡಲು ವಿಳಂಬ ಮಾಡಿದ ಕಾಂಗ್ರೆಸ್ ಕೊನೆಗೆ 2009ರಲ್ಲಿ ಸೋಲು ಅನುಭವಿಸಿದ್ದ ಸಲೀಂ ಅಹ್ಮದ್ ಅವರನ್ನು ಕಣಕ್ಕಿಳಿಸಿತ್ತು. ಆದರೆ, ಅವರು 4,79,219 ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಗಳಿಸಿದರು.

ಲೋಕಸಭೆ ಚುನಾವಣೆಗೆ ಮೊದಲು ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಿದ್ದು ಹಾವೇರಿ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳನ್ನು ಬದಲಾಯಿಸಿತು. ಯಡಿಯೂರಪ್ಪ ಕಟ್ಟಾ ಬೆಂಬಲಿಗರಾದ ಮಾಜಿ ಸಚಿವ ಸಿ.ಎಂ.ಉದಾಸಿ ಮತ್ತು ಶಿವಕುಮಾರ್ ಉದಾಸಿಗೆ ಜನರು ಬೆಂಬಲ ನೀಡಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿ ಪ್ರಚಾರ ನಡೆಸುವ ಮೂಲಕ ಉದಾಸಿ ಗೆಲುವಿಗೆ ಸಹಕಾರ ನೀಡಿದರು.
ಹಾವೇರಿ ಕ್ಷೇತ್ರದಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಕಾಂಗ್ರೆಸ್ ಲೆಕ್ಕಾಚಾರ ಲೋಕಸಭೆ ಚುನಾವಣೆಯಲ್ಲಿ ಕೈಕೊಟ್ಟಿತ್ತು. 2009ರ ಚುನಾವಣೆಯ ಸೋಲಿನ ಅನುಕಂಪ ಸಹ ಸಲೀಂ ಅಹ್ಮದ್ ಅವರ ಕೈಹಿಡಿಯಲಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಹಿರಿಯ ನಾಯಕ ಎಸ್.ಎಂ.ಕೃಷ್ಣ ಪ್ರಚಾರವೂ ಫಲ ನೀಡಲಿಲ್ಲ.
ಜೆಡಿಎಸ್ ಸಹ ಹಾವೇರಿ ಕ್ಷೇತ್ರದಲ್ಲಿ ಯಾವುದೇ ಸಾಧನೆ ಮಾಡುವಲ್ಲಿ ವಿಫಲವಾಯಿತು. ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಿದ್ದ ರವಿ ಮೆಣಸಿನಕಾಯಿ ಠೇವಣಿ ಕಳೆದಕೊಂಡು ನಾಲ್ಕನೇ ಸ್ಥಾನಕ್ಕೆ ಕುಸಿದರು. ಹಾವೇರಿ ಅಕ್ಕಪಕ್ಕದ ಕ್ಷೇತ್ರಗಳಾದ ಶಿವಮೊಗ್ಗ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಬಳ್ಳಾರಿಯ ಫಲಿತಾಂಶ ಇಲ್ಲಿಯೂ ಬಂದಿದ್ದು ಬಿಜೆಪಿಗೆ ಗೆಲುವು ಸಿಕ್ಕಿದೆ.
| ಹಾವೇರಿ | ಪಡೆದ ಸ್ಥಾನ | ಪಕ್ಷ | ಪಡೆದ ಮತಗಳು |
| ಶಿವಕುಮಾರ್ ಉದಾಸಿ | 1 | ಬಿಜೆಪಿ | 5,66,790 |
| ಸಲೀಂ ಅಹ್ಮದ್ | 2 | ಕಾಂಗ್ರೆಸ್ | 4,79,219 |
| ಸಿದ್ದಪ್ಪ ಕಾಳಪ್ಪ ಪೂಜಾರ್ | 3 | ಪಕ್ಷೇತರ | 15,656 |
| ರವಿ ಮೆಣಸಿನಕಾಯಿ | 4 | ಜೆಡಿಎಸ್ | 9,814 |












Click it and Unblock the Notifications