ಲಕ್ಷ್ಮೇಶ್ವರದಲ್ಲಿ ಲಾಕಪ್ ಡೆತ್ ಪ್ರಕರಣ: ಸಿಐಡಿ ತನಿಖೆ ಚುರುಕು
ಗದಗ, ಫೆಬ್ರವರಿ 7: ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದನೆಂದು ಲಕ್ಷ್ಮೇಶ್ವರದಲ್ಲಿ ಪೊಲೀಸರು ಬಂಧಿಸಿದ್ದ, ಲಾರಿ ಚಾಲಕ ಸತ್ತಿದ್ದಾನೆಂಬ ಪ್ರಕರಣದ ತನಿಖೆಯನ್ನು ಸಿಐಡಿ ಪೊಲೀಸರು ಚುರುಕುಗೊಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಎಸ್ಪಿ ದಿವ್ಯಾಸಾರಾ ಥಾಮಸ್ ನೇತೃತ್ವದ 10 ಜನರ ತಂಡ ಸೋಮವಾರ ಗದಗಿನ ಲಕ್ಷ್ಮೇಶ್ವರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ. ಕಳೆದ ಭಾನುವಾರ ಲಾರಿ ಚಾಲಕ ಶಿವಪ್ಪ ದುಂಡಪ್ಪ ಭದ್ರಾಪುರ ಅವರು ಪೊಲೀಸರ ವಶದಲ್ಲಿದ್ದಾಗಲೇ ಮೃತಪಟ್ಟಿದ್ದಾರೆಂದು ದೂರಿ, ಇಲ್ಲಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ ದಾಂದಲೆ ನಡೆಸಿದ್ದರು. ಪೊಲೀಸರ ತನಿಖೆ ಬೇಡವೆಂದ ಕಾರಣಕ್ಕೆ ಸರಕಾರ ಸಿಐಡಿ ತನಿಖೆ ವಹಿಸಿತ್ತು.[ಲಕ್ಷ್ಮೇಶ್ವರ ಲಾಕಪ್ ಡೆತ್ ಪ್ರಕರಣ: ಪಿಎಸ್ ಐ ಅಮಾನತು]
ಘಟನೆಯನ್ನು ಕಣ್ಣಾರೆ ನೋಡಿದ್ದಾರೆ ಎನ್ನಲಾದ ಜನರಿಂದ ಸಿಐಡಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಈಗಲೂ ನಗರದಲ್ಲಿ ಪೊಲೀಸರ ಬಂದೋಬಸ್ತ್ ಹಾಗೆ ಇದೆ. ತನಿಖಾ ತಂಡದಲ್ಲಿ ಅಧಿಕಾರಿ ಡಿವೈ ಎಸ್ ಪಿ ಶ್ರಿಧರ, ಸಹಾಯಕ ತನಿಖಾಧಿಕಾರಿ ಎಂ.ಬಿ. ಗೊರವನಕೊಳ್ಳ ಇದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 28 ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಾಗಿದೆ ಎಂದು ಗದಗ ಎಸ್ಪಿಕೆ.ಸಂತೋಷ ಬಾಬು ತಿಳಿಸಿದರು.
ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸುವುದಾಗಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸ್ಥಳಕ್ಕೆ ಬೇಟಿ ನೀಡಿದ ವೇಳೆ ತಿಳಿಸಿದ್ದಾರೆ.
ಘಟನೆಗೆ ಮರಳು ಮಾಫಿಯಾ ದಂಧೆ ಕೊರರೊಂದಿಗೆ ಅಕ್ರಮ ಸಾರಾಯಿ ದಂಧೆಯವರು ಸಾಥ್ ನೀಡಿದ್ದಾರೆ ಎನ್ನಲಾಗಿದ್ದು ಅವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.