ನಿಖಿಲ್‌ ಗಾಗಿ ರಾಹುಲ್, ಬೆಂಗಳೂರು ಅಭ್ಯರ್ಥಿಗಳಿಗಾಗಿ ಮೋದಿ ಪ್ರಚಾರ

ಬೆಂಗಳೂರು, ಏಪ್ರಿಲ್ 13: ಕರ್ನಾಟಕದಲ್ಲಿ ಇಂದು ಒಂದೇ ದಿನ ರಾಹುಲ್ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಅವರು ಕೋಲಾರ, ಚಿತ್ರದುರ್ಗ, ಕೆ.ಆರ್.ನಗರ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಪರವಾಗಿ ಮತ ಯಾಚನೆ ಮಾಡುತ್ತಿದ್ದರೆ, ಪ್ರಧಾನಿ ಅವರು ಮಂಗಳೂರು ಮತ್ತು ಬೆಂಗಳೂರು ನಗರಗಳಲ್ಲಿ ಅಬ್ಬರಿಸಲಿದ್ದಾರೆ.

ಒಂದೇ ದಿನ ಇಬ್ಬರು ರಾಷ್ಟ್ರೀಯ ಮುಖಂಡರು ಪರಸ್ಪರ ಒಂದೇ ರಾಜ್ಯದಲ್ಲಿ ಒಬ್ಬರ ಮೇಲೊಬ್ಬರು ಟೀಕಾ ಪ್ರಹಾರ ನಡೆಸುತ್ತಿರುವುದು ಅಪರೂಪವೇ. ಒಂದೇ ದಿನ ಎರಡು ರಾಷ್ಟ್ರೀಯ ನಾಯಕರ ಮಾತಿನವ ವರಸೆ, ಭರವಸೆಗಳನ್ನು ಆಲಿಸುವ ಪುಣ್ಯ (?!) ಕನ್ನಡಿಗರದ್ದು.

LIVE: Rahul Gandhi and Narendra Modi were campaigning in Karnataka

ಈಗಾಗಲೇ ರಾಹುಲ್ ಗಾಂಧಿ ಅವರು ಕೋಲಾರದಲ್ಲಿ ತಮ್ಮ ಮೊದಲ ಸಮಾವೇಶವನ್ನು ಮುಗಿಸಿ ಚಿತ್ರದುರ್ಗದತ್ತ ಎರಡನೇ ಸಮಾವೇಶಕ್ಕೆ ತೆರಳಿದ್ದಾರೆ. ನರೇಂದ್ರ ಮೋದಿ ಅವರು ತಮಿಳುನಾಡಿನಲ್ಲಿ ಎರಡು ಸಮಾವೇಶ ಮುಗಿಸಿ ಮಂಗಳೂರಿನತ್ತ ಮರಳಿ ಬರುತ್ತಿದ್ದಾರೆ.

ಇಬ್ಬರೂ ನಾಯಕರು ರಾಜ್ಯದ ಜನರಿಗೆ ನೀಡಿದ ಭರವಸೆಗಳು, ಪರಸ್ಪರರ ಮೇಲೆ ಎರಚಿಕೊಂಡ ಮಾತಿನ ಕೆಸರು ಎಲ್ಲವೂ ಇಲ್ಲಿ ಓದಲು ಸಿಗಲಿದೆ.

ಕೋಲಾರದಲ್ಲಿ ಸಮಾವೇಶ ಮುಗಿಸಿದ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಪರಿವರ್ತನಾ ಸಮಾವೇಶಕ್ಕೆ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.

Apr 13, 2019, 8:25 pm IST

ಕಾಂಗ್ರೆಸ್‌ನ ಕುಟುಂಬ ರಾಜಕಾರಣದ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಮೋದಿ, ನಾವು ಸೈನಿಕರಿಗೆ ವಿಶೇಷ ಶಕ್ತಿ ನೀಡಿದೆವು, ಬುಲೆಟ್ ಪ್ರೂಫ್ ಜಾಕೆಟ್ ನೀಡಿದೆವು, ಉಗ್ರರನ್ನು ನಿಯಂತ್ರಿಸಿದೆವು ಎಂದು ಸಾಧನೆಗಳನ್ನು ಜನರ ಮುಂದಿಟ್ಟರು.
Apr 13, 2019, 8:01 pm IST

ಬೆಂಗಳೂರಿನಲ್ಲಿ ದಿವಂಗತ ಅನಂತ್‌ಕುಮಾರ್ ಮತ್ತು ಮಾಜಿ ಶಾಸಕ ವಿಜಯ್‌ಕುಮಾರ್ ಅವರನ್ನು ಮೋದಿ ನೆನಪಿಸಿಕೊಂಡರು. ಬೆಂಗಳೂರಿಗರೂ ಸಧಾ ಅಗಣಿತ ಪ್ರೀತಿಯನ್ನು ನೀಡಿದ್ದಾರೆ ಎಂದು ಮೋದಿ ಹೇಳಿದರು.
Apr 13, 2019, 7:55 pm IST

ಬೆಂಗಳೂರು ಅರಮನೆ ಮೈದಾನದಲ್ಲಿ ನರೇಂದ್ರ ಮೋದಿ ಅವರ ಭಾಷಣ ಪ್ರಾರಂಭಿಸಿದರು. ಎಸ್.ಎಂ.ಕೃಷ್ಣ, ಯಡಿಯೂರಪ್ಪ ಹಾಗೂ ಬೆಂಗಳೂರಿನ ಮೂರು ಬಿಜೆಪಿ ಅಭ್ಯರ್ಥಿಗಳು ವೇದಿಕೆಯ ಮೇಲೆ ಇದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
Apr 13, 2019, 7:52 pm IST

ರಾಹುಲ್ ಗಾಂಧಿ ಅವರು ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್.ನಗರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಗೌಡ, ಮೈಸೂರಿನ ವಿಜಯ್ ಶಂಕರ್ ಮತ್ತು ಚಾಮರಾಜನಗರದ ಧೃವನಾರಾಯಣ್ ಅವರ ಪರ ಪ್ರಚಾರ ಮಾಡಿದರು. ದೇವೇಗೌಡ, ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಅವರುಗಳು ಅವರಿಗೆ ಸಾಥ್ ನೀಡಿದರು.
Apr 13, 2019, 5:34 pm IST

ಮೀನುಗಾರರಿಗೆಂದು ನಾವು ವಿಶೇಷ ಯೋಜನೆ ಮಾಡಿದ್ದೇವೆ, ಮೇ 23ಕ್ಕೆ ಫಲಿತಾಂಶ ಬರುತ್ತದೆ, ಆಗ ಮತ್ತೆ ನಮ್ಮ ಸರ್ಕಾರ ಬರುತ್ತದೆ, ಆಗ ನಮ್ಮ ಸರ್ಕಾರ ಮೀನುಗಾರರಿಗೆಂದು ವಿಶೇಷ ಸಚಿವಾಲಯ ತೆರೆಯುವ ನಿರ್ಧಾರ ಮಾಡಿದ್ದೇವೆ, ಕಿಸಾನ್ ಕ್ರೆಡಿಟ್ ಕಾರ್ಡ್‌ನಿಂದಲೂ ಅವರಿಗೆ ಸಹಕಾರ ದೊರೆಯಲಿದೆ, ಮೀನುಗಾರರಿಗೆ ನಾವಿಕ್ ಡಿವೈಸ್ ನೀಡಲಾಗುವುದು, ಮತ್ಸ್ಯ ಸಂಪದಾ ಯೋಜನೆ ಸಹ ಮಾಡಲಾಗುವುದು ಎಂದು ಮೋದಿ ಭರವಸೆ ನೀಡಿದರು.
Apr 13, 2019, 5:34 pm IST

ಇಲ್ಲಿನ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಣ್ಣ ತಪ್ಪಿನಿಂದಾಗಿ ಎಷ್ಟು ದೊಡ್ಡ ಪ್ರಮಾದವಾಗಿದೆ, ಬಿಜೆಪಿಗೆ ಪೂರ್ಣ ಬಹುಮತ ಸಿಗುವಲ್ಲಿ ಸ್ವಲ್ಪ ಕೊರತೆ ಆಯಿತು, ಈಗ ಇಡೀಯ ಕರ್ನಾಟಕ ತೊಂದರೆ ಅನುಭವಿಸುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಮಾಡಿದ ತಪ್ಪು ಲೋಕಸಭೆ ಚುನಾವಣೆಯಲ್ಲಿ ಮಾಡಬೇಡಿ, ಚೌಕೀದಾರ್‌ಗೆ ಮತ ಹಾಕಿ ಎಂದು ಹೇಳಿದರು.
Apr 13, 2019, 5:33 pm IST

ಕನ್ನಡದಲ್ಲಿ ಮಾತನಾಡಿ ಭಾಷಣ ಮುಗಿಸಿದ ಮೋದಿ ಅವರು, ಎಲ್ಲ ತಾಯಂದಿರೂ, ಶ್ರಮಿಕ ವರ್ಗ, ವಿದ್ಯಾರ್ಥಿ ಎಲ್ಲರೂ ಚೌಕೀದಾರ್ ಆಗಿ ಎಂದರು. ಮೋದಿ ಅವರು ಮಂಗಳೂರಿನಿಂದ ಈಗ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಲಿದ್ದು, ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಬೃಹತ್ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
Apr 13, 2019, 5:33 pm IST

ಗಾಂಧಿ ಕುಟುಂಬದ ಎಲ್ಲರ ಸ್ಮಾರಕ ಇದೆ, ಆದರೆ ಡಾ.ರಾಧಕೃಷ್ಣ ಅವರ ಒಂದಾದರೂ ಸ್ಮಾರಕ ಇದೆಯಾ, ಮೊದಲ ಪ್ರಧಾನಿಗೆ ಸಿಕ್ಕ ಗೌರವ ಮೊದಲ ರಾಷ್ಟ್ರಪತಿಗೆ ಏಕಿಲ್ಲ? ಗಾಂಧಿ ಕುಟುಂಬದ ಸ್ವಾರ್ಥ ಇದರಲ್ಲಿ ಗೊತ್ತಾಗುತ್ತದೆ ಎಂದು ಮೋದಿ ಹೇಳಿದರು.
Apr 13, 2019, 5:33 pm IST

ಸರ್ಜಿಕಲ್ ಸ್ಟ್ರೈಕ್ ಮಾಡಿದಾಗ ಇವರಿಗೆ ಸಾಕ್ಷ್ಯಿ ಬೇಕಾಗುತ್ತದೆ, ದೇಶದ ಜನರಿಗೆ ಸಾಕ್ಷ್ಯ ಬೇಕಾಗಿಲ್ಲ, ಅವರಿಗೆ ನಮ್ಮ ಸೈನಿಕರ ವೀರತ್ವದ ಮೇಲೆ ವಿಶ್ವಾಸವಿದೆ, ಭಾರತವು ಉಗ್ರಗಾಮಿಗಳಿಗೆ ಮನೆಗೆ ನುಗ್ಗಿ ಹೊಡೆದುರುಳಿಸುತ್ತದೆ. ಆದರೆ ಈ ಮಹಾಘಟಬಂದನದ ಜನ ಸೈನ್ಯದ ಪರಾಕ್ರಮದ ಮೇಲೂ ಪ್ರಶ್ನೆ ಮಾಡುತ್ತಾರೆ, ಸೇನಾದ ಮಹಾಮುಖ್ಯಸ್ಥರನ್ನೂ ಸಹ ಗಲ್ಲಿಯ ಗೂಂಡಾ ಎನ್ನುತ್ತಾರೆ ಎಂದು ಮೋದಿ ಹೇಳಿದರು.
Apr 13, 2019, 5:33 pm IST

ಕಾಂಗ್ರೆಸ್ ಆಡಳೀತಾವಧಿಯಲ್ಲಿ ಬ್ಯಾಂಕ್‌ ಸೆಕ್ಟರ್‌ ಅನ್ನು ಐಸಿಯುನಲ್ಲಿಟ್ಟು ಹೋಗಿದ್ದರು. 60 ವರ್ಷದಲ್ಲಿ ಬ್ಯಾಂಕುಗಳು ಎಷ್ಟು ಸಾಲ ನೀಡಿದ್ದವೋ ಯುಪಿಎಯ ಹತ್ತು ವರ್ಷದಲ್ಲಿ ಅದರ ದ್ವಿಗುಣ ಸಾಲ ನೀಡಿದರು, ಅವರಿಗೆ ಎಷ್ಟು ಕಮಿಷನ್ ದೊರೆತಿರಬಹದು, ಆದರೆ ಈ ಚೌಕೀದಾರ್ ಅವರ ಆಟಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ ಎಂದು ಮೋದಿ ಹೇಳಿದರು.
Apr 13, 2019, 5:33 pm IST

ಸಾಲ ಪಡೆದು ಕೆಲವರು ಓಡಾಡುತ್ತಿದ್ದಾರೆ, ಎಲ್ಲಾದರೂ ಓಡಿ ಹೋಗಲಿ, ಜಗತ್ತಿನ ಎಲ್ಲಿಯಾದರೂ ಅವರು ಅಡಗಿ ಕೂತಿರಲಿ ಈ ಚೌಕೀದಾರ್ ಅವರನ್ನು ಹುಡುಕಿ ಭಾರತಕ್ಕೆ ಕರೆತರುತ್ತೇನೆ. ಈಗಾಗಲೇ ಕ್ರಿಶ್ಚಿಯನ್ ಮಿಷೆಲ್, ತಲ್ವಾರ್ ಅನ್ನು ಕರೆತಂದಿದ್ದೇವೆ, ಇನ್ನುಳಿದವರನ್ನೂ ಕರೆತರುತ್ತೇವೆ ಎಂದು ಮೋದಿ ಹೇಳಿದರು.
Apr 13, 2019, 5:33 pm IST

ನಮ್ಮ ಸರ್ಕಾರ ಸಾವಿರಾರು ಕೋಟಿ ರೈತರ ಖಾತೆಗೆ ಹಣ ಹಾಕುತ್ತಿದೆ. ಆದರೆ ಇಲ್ಲಿನ ಸರ್ಕಾರ ರೈತರ ಜೊತೆಯೇ ಆಟವಾಡುತ್ತಿವೆ. ನಮಗೆ ಇಲ್ಲಿನ ರೈತರ ಮಾಹಿತಿ ನೀಡುತ್ತಿಲ್ಲ, ಇದರಲ್ಲೂ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮೋದಿ ಆರೋಪ ಮಾಡಿದರು. ಈ ಸರ್ಕಾರ ರೈತರ ವಿರೋಧಿ ಸರ್ಕಾರ ಎಂದು ಮೋದಿ ಹೇಳಿದರು.
Apr 13, 2019, 5:03 pm IST

ಮಂಗಳೂರಿನಯಲ್ಲಿ ಬಿಜೆಪಿ ಆಯೋಜಿಸಿರುವ ವಿಜಯ ಸಂಕಲ್ಪ ಸಮಾವೇಶಕ್ಕೆ ನರೇಂದ್ರ ಮೋದಿ ಅವರು ಆಗಮಿಸಿದ್ದಾರೆ. ಮೋದಿ ಅವರು ತಮಿಳುನಾಡಿನಲ್ಲಿ ಎರಡು ಸಮಾವೇಶಗಳನ್ನು ಮುಗಿಸಿ ಇಲ್ಲಿಗೆ ಆಗಮಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಮೋದಿ ಅವರು ಜನರನ್ನುದ್ದೇಶಿಸಿ ಮಾತಾಡಲಿದ್ದಾರೆ.
Apr 13, 2019, 5:03 pm IST

ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ನೆರೆದಿದ್ದ ಜನಸ್ತೋಮವನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದರು. ಇಡೀಯ ವಿಶ್ವದಲ್ಲಿ ಭಾರತದ ಪ್ರಭಾವ ಹೆಚ್ಚುತ್ತಿದೆ ಎಂದರು. ಅಮೆರಿಕ, ರಷ್ಯಾ ಇನ್ನೂ ಹಲವು ದೇಶಗಳಲ್ಲಿ ಭಾರತದ ಗೌರವ ಹೆಚ್ಚಿದೆ. ನೀವು 2014ರಲ್ಲಿ ನನಗೆ ಹಾಕಿದ ಮತದಿಂದಲೇ ಇದೆಲ್ಲಾ ಸಾಧ್ಯವಾಯಿತು ಎಂದರು.
Apr 13, 2019, 5:02 pm IST

ಈ ಬಾರಿಯ ಚುನಾವಣೆ ಯಾರು ಸಂಸದರಾದರೂ, ಯಾರು ಮಂತ್ರಿ ಆದರೂ, ಯಾರು ಪ್ರಧಾನಿ ಆದರು ಎಂದು ಲೆಕ್ಕ ಹಾಕುವ ಚುನಾವಣೆ ಅಲ್ಲ, 21 ನೇ ಶತಮಾನದ ಭಾರತ ನವಭಾರತ ಹೇಗೆ ಆಗುತ್ತದೆ ಎಂಬುದನ್ನು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದು ಮೋದಿ ಹೇಳಿದರು. ಹಾಗಾಗಿ ದೇಶಕ್ಕಾಗಿ ಮಾತ್ರವೇ ಮತ ಹಾಕಿ ಇನ್ನಾವುದನ್ನೂ ನೋಡಬೇಡಿ ಎಂದು ಮೋದಿ ಕರೆ ನೀಡಿದರು.
Apr 13, 2019, 5:02 pm IST

ಜೆಡಿಎಸ್-ಕಾಂಗ್ರೆಸ್‌ ಪರಿವಾರವಾದವೊಂದನ್ನೇ ಗಣನೆಗೆ ತೆಗೆದುಕೊಳ್ಳುತ್ತವೆ, ಆದರೆ ಬಿಜೆಪಿಗೆ ಭಾರತವಾದ ಮಾತ್ರವೇ ಗೊತ್ತಿದೆ. ತಮ್ಮ ಪರಿವಾರದ ಎಲ್ಲರಿಗೂ ಟಿಕೆಟ್ ನೀಡಬೇಕೆಂಬುದು ಆ ಪಕ್ಷಗಳ ಗುರಿ ಆದರೆ, ದೇಶದ ಕಟ್ಟ ಕಡೆಯ ವ್ಯಕ್ತಿಗೂ ಅಭಿವೃದ್ಧಿ ತಲುಪಬೇಕು ಎಂಬುದು ನಮ್ಮ ಗುರಿ ಎಂದು ಮೋದಿ ಹೇಳಿದರು.
Apr 13, 2019, 4:38 pm IST

ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ, ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಡಿಕೆ ಶಿವಕುಮಾರ್ ಹಲವು ನಾಯಕರು ವೇದಿಕೆಯಲ್ಲಿದ್ದರು, ಎಲ್ಲರೂ ಪರಸ್ಪರ ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶಿಸಿದರು. ಈ ಸಂದರ್ಭ ಮಾಜಿ ಸಚಿವ ತಿಪ್ಪೆಸ್ವಾಮಿ ಪುತ್ರ ಜೆಡಿಎಸ್ ಸೇರ್ಪಡೆಗೊಂಡರು.
Apr 13, 2019, 4:38 pm IST

ಮಹಿಳೆಯರಿಗೆ ವಿಧಾನಸಭೆ, ಲೋಕಸಭೆ, ರಾಜ್ಯಸಭೆಯಲ್ಲಿ ಮಹಿಳೆಯರಿಗೆ ೩೩% ಮೀಸಲಾತಿ ನೀಡುತ್ತೇವೆ, ಅಷ್ಟೆ ಅಲ್ಲದೆ ನೌಕರಿಯಲ್ಲೂ ಸಹ ಮಹಿಳೆಯರಿಗೆ ೩೩% ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ಅಷ್ಟೆ ಅಲ್ಲದೆ 'ನ್ಯಾಯ್' ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಹಾಕುತ್ತೇವೆ ಎಂದರು.
Apr 13, 2019, 4:38 pm IST

ಉದ್ಯೋಗದ ಬಗೆಗೂ ಕೂಡ ಹಲವು ಭರವಸೆಗಳನ್ನು ನೀಡಿದ ರಾಹುಲ್, ಅಧಿಕಾರಕ್ಕೆ ಬಂದ ಕೂಡಲೆ ಖಾಲಿ ಇರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಗಳನ್ನು ಭರ್ತಿ ಮಾಡುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು. ಯುವ ಉದ್ಯಮಿಗಳಿಗೆ ಸಾಲ ಸೌಲಭ್ಯ ನೀಡುವುದಾಗಿ ಹೇಳಿದರು.
Apr 13, 2019, 4:38 pm IST

ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರಧಾನಿ ತಮಾಷೆ ಮಾಡಿದ್ದರು, ಆದರೆ ನಾವು ಅಧಿಕಾರಕ್ಕೆ ಬಂದರೆ ಉದ್ಯೋಗ ಖಾತ್ರಿ ದಿನಗಳನ್ನು ನೂರರಿಂದ ನೂರೈವತ್ತು ದಿನಗಳಿಗೆ ವಿಸ್ತರಿಸುತ್ತೇವೆ ಎಂದು ರಾಹುಲ್ ಭರವಸೆ ನೀಡಿದರು.
Apr 13, 2019, 4:38 pm IST

ಈ ಚುನಾವಣೆ ಸಿದ್ಧಾಂತಗಳ ನಡುವಿನ ಚುನಾವಣೆ. ಒಂದು ಕಡೆ ವಿಭಜನೆ, ವೈರತ್ವ, ದ್ವೇಷ ಇದ್ದರೆ ಇನ್ನೊಂದು ಕಡೆ ಪ್ರೀತಿ, ಭ್ರಾತೃತ್ವ, ಅಭಿವೃದ್ಧಿ ಇದೆ. ಒಂದು ಕಡೆ ಐದು ವರ್ಷದ ಅನ್ಯಾಯವಿದ್ದರೆ, ಮತ್ತೊಂದು ಕಡೆ ನ್ಯಾಯ ಇದೆ. ಈ ಚುನಾವಣೆ ಅನಿಲ್ ಅಂಬಾನಿ ಮತ್ತು ಸಾಮಾನ್ಯರ ನಡುವೆ ಆಗುತ್ತಿದೆ. ಕಳ್ಳರು ಮತ್ತು ಪ್ರಾಮಾಣಿಕರ ನಡುವೆ ಆಗುತ್ತಿದೆ. ಒಂದು ಕಡೆ ಸುಳ್ಳು ಮತ್ತೊಂದು ಕಡೆ ಸತ್ಯವಿದೆ, ದೇಶದಲ್ಲಿ ಸತ್ಯವೇ ಗೆಲ್ಲುತ್ತಾ ಬಂದಿರುವ ಇತಿಹಾಸವಿದೆ, ಈ ಲೋಕಸಭೆ ಚುನಾವಣೆಯಲ್ಲಿ ಸತ್ಯವೇ ಗೆಲ್ಲಲಿದೆ ಎಂದು ರಾಹುಲ್ ಮಾತು ಮುಗಿಸಿದರು.
Apr 13, 2019, 4:23 pm IST

ನಾವು ಕೇಂದ್ರದಲ್ಲಿ ಸರ್ಕಾರ ರಚಿಸಿದ ಕೂಡಲೇ ನಾವು ರೈತರಿಗಾಗಿಯೇ ಪ್ರತ್ಯೇಕ ಬಜೆಟ್ ಅನ್ನು ಮಾಡುತ್ತೇವೆ. ಕನಿಷ್ಟ ಬೆಂಬಲ ಬೆಲೆ ಹೆಚ್ಚು ಮಾಡುವುದು, ನೀರಾವರಿ ಯೋಜನೆಗಳನ್ನು ಕೊಡುತ್ತೇವೆ, ಬೆಳೆ ವಿಮೆ ಎಷ್ಟಿದೆ, ಪರಿಹಾರ ಎಷ್ಟು ಕೊಡುತ್ತೇವೆ ಇನ್ನೂ ಹಲವು ವಿಷಯಗಳನ್ನು ಬಜೆಟ್ ನಲ್ಲಿ ಅಡಕವಾಗಿರುತ್ತದೆ ಎಂದು ರಾಹುಲ್ ಹೇಳಿದರು.
Apr 13, 2019, 4:23 pm IST

ಸಾಲ ಕಟ್ಟದ ರೈತರನ್ನು ಜೈಲಿಗೆ ಹಾಕುವುದಾದರೆ, ಮೊದಲು ಲಲಿತ್ ಮೋದಿ, ನೀರವ್ ಮೋದಿ, ಮೆಹೂಲ್ ಚೋಕ್ಸಿಯನ್ನು ಜೈಲಿಗೆ ಹಾಕಿ. ಸಾಲಕಟ್ಟದ ರೈತನನ್ನು ಜೈಲಿಗೆ ಹಾಕದಂತೆ ಕಾನೂನನ್ನು ನಾವು ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
Apr 13, 2019, 4:23 pm IST

ನಾವು ತರಲುಜ ಯೋಜಿಸಿರುವ ಬಡವರ ಖಾತೆಗೆ ಹಣ ಹಾಕುವ 'ನ್ಯಾಯ್' ಯೋಜನೆ ಬಡತನದ ಮೇಲೆ ಕಾಂಗ್ರೆಸ್ ಮಾಡುವ ಸರ್ಜಿಕಲ್ ಸ್ಟ್ರೈಕ್ ಎಂದು ರಾಹುಲ್ ಬಣ್ಣಿಸಿದರು. ನ್ಯಾಯ್ ಮೂಲಕ ಹಾಕುವ ಹಣ ಕುಟುಂಬದ ಮಹಿಳೆಯರಿಗೆ ಹಾಕಲಾಗುತ್ತದೆ ಎಂದರು.
Apr 13, 2019, 4:20 pm IST

ಕೋಲಾರದಲ್ಲಿ ಸಮಾವೇಶ ಮುಗಿಸಿದ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಪರಿವರ್ತನಾ ಸಮಾವೇಶಕ್ಕೆ ತೆರಳಿದ್ದು, ಕೆಲವೇ ಕ್ಷಣಗಳಲ್ಲಿ ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಅವರು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
Apr 13, 2019, 4:20 pm IST

ಮೋದಿ ಅವರು ಹೇಳಿದ ಸುಳ್ಳು ದೇಶಕ್ಕೆ ಗೊತ್ತಾಗಿ ಬಿಟ್ಟಿದೆ, ಆದರೂ ಸಹ ಅವರು ಸುಳ್ಳು ಹೇಳುವುದು ಬಿಟ್ಟಿಲ್ಲ, ನಿಮಗೆಲ್ಲಾ 15 ಲಕ್ಷ ಬಂತಾ, ನಿಮಗೆ ಎರಡು ಕೋಟಿ ಉದ್ಯೋಗ ಸಿಕ್ಕಿತಾ? ಎಂದು ರಾಹುಲ್ ಪ್ರಶ್ನೆ ಮಾಡಿದರು.
Apr 13, 2019, 4:20 pm IST

ನಾನು ದೇಶದ ಚೌಕೀದಾರ್ ಅಲ್ಲ, ನಾನು ಸುಳ್ಳುವುದಿಲ್ಲ, ದೇಶಕ್ಕೆ ಏನು ಬೇಕಿದಿಯೋ ಅದೇ ವಿಷಯವನ್ನೇ ನಾನು ಮಾತನಾಡುತ್ತೇನೆ, ನಾನು ನನ್ನ ಮನದ ಮಾತನಾಡುವುದಿಲ್ಲ, ನಿಮ್ಮ ಮನದ ಮಾತು ಕೇಳಲು ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು.
Apr 13, 2019, 4:20 pm IST

ಮೋದಿ ಅವರು ಅಂಬಾನಿ, ಲಲಿತ್ ಮೋದಿ, ನೀರವ್ ಮೋದಿ, ಮೆಹೂಲ್ ಚೊಕ್ಸಿ ಅವರನ್ನು ತಬ್ಬಿಕೊಳ್ಳುತ್ತಾರೆ ಆದರೆ ಅವರೆಂದೂ ಸಹ ಬಡವರನ್ನು, ರೈತರನ್ನು ತಬ್ಬಿಕೊಳ್ಳುವುದಿಲ್ಲ ಎಂದು ರಾಹುಲ್ ಆರೋಪ ಮಾಡಿದರು.
Apr 13, 2019, 4:20 pm IST

ಮೋದಿ ಅವರು ಕೇವಲ 15 ಜನ ಶ್ರೀಮಂತರ ಚೌಕೀದಾರ್ ಅವರಷ್ಟೆ, ಮೋದಿ ಅವರು ಅವರ ಗೆಳೆಯರನ್ನು ಕಾಯುತ್ತಾರೆ, ಆದರೆ ನಾನು ನಿಮ್ಮ ಸೇವಕ, ನಾನು ಬಡವರ ವ್ಯಕ್ತಿ, ಮೋದಿ ಶ್ರೀಮಂತರಿಗೆ ಲಕ್ಷಾಂತರ ಕೋಟಿ ಹಣ ನೀಡುತ್ತಾರೆ, ನಾವು ಬಡವರಿಗೆ ಆ ಹಣವನ್ನು ನೀಡುತ್ತೇವೆ ಎಂದು ರಾಹುಲ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+