ರಾಜ್ಯದ ಯಾವ್ಯಾವ ಸಚಿವ- ಶಾಸಕರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಸು ತನಿಖೆಯಲ್ಲಿವೆ !
ಬೆಂಗಳೂರು, ಜನವರಿ 19: ಕಳೆದ ನಾಲ್ಕು ವರ್ಷದಲ್ಲಿ ಯಾವ ಶಾಸಕ, ಸಚಿವರ ವಿರುದ್ಧವೂ ಒಂದು ಭ್ರಷ್ಟಾಚಾರ ಆರೋಪ ಕೇಳಿ ಬಂದಿಲ್ಲ ! ಹಾಗಂತ ಅಚ್ಚರಿ ಪಡಬೇಕಿಲ್ಲ. ಮುಖ್ಯಮಂತ್ರಿ ಸೇರಿದಂತೆ ಸಚಿವ- ಶಾಸಕರ ವಿರುದ್ಧ ಹನ್ನೊಂದಕ್ಕೂ ಹೆಚ್ಚು ಭ್ರಷ್ಟಾಚಾರ ಆರೋಪ ಪ್ರಕರಣಗಳು ದಾಖಲಾಗಿವೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದೇ ಸುಮಾರು ಪ್ರಕರಣಗಳ ಎಸಿಬಿ ತನಿಖೆಗೆ ಅಡ್ಡಿ ಎದುರಾಗಿದೆ.
ಇನ್ನೂ ಕೆಲವು ಪ್ರಕರಣಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಗಳಿವೆ. ಹೀಗಾಗಿ ಕೇಸು ದಾಖಲಾದರೂ ತನಿಖೆ ಇಲ್ಲದೇ ಹನ್ನೊಂದು ಭ್ರಷ್ಟಾಚಾರ ಪ್ರಕರಣ ಕಡತಗಳು ಎಸಿಬಿಯಲ್ಲಿ ಸೊರಗುತ್ತಿವೆ. ಪೂರ್ವಾನಮತಿ ವಿಚಾರಕ್ಕೆ ಬಂದರೆ, ಸಚಿವರ ಹಾಗೂ ಶಾಸಕರ ಮೇಲಿನ ಭ್ರಷ್ಟಾಚಾರ ಆರೋಪ ಕುರಿತು ಎಸಿಬಿ ದಾಖಲಿಸಿರುವ ಪ್ರಕರಣಗಳ ತನಿಖೆಗೆ ಸರ್ಕಾರವೇ ಅಡ್ಡಿಯುಂಟು ಮಾಡಿದ ಅನುಮಾನ ವ್ಯಕ್ತವಾಗಿದೆ !
ಮುಕ್ತ ತನಿಖೆಗೆ ಅವಕಾಶವಿಲ್ಲ:
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ರಚನೆಯಾಗುವ ಮೊದಲು ಲೋಕಾಯುಕ್ತ ಸಂಸ್ಥೆಗೆ ಅಧೀನಕ್ಕೆ ಒಳಪಟ್ಟಿದ್ದ ಭ್ರಷ್ಟಾಚಾರ ನಿಗ್ರಹ ದಳವಿತ್ತು. ಶಾಸಕರು ಸೇರಿದಂತೆ ಸ್ವತಂತ್ರ್ಯವಾಗಿ ಭ್ರಷ್ಡಾಚಾರ ಪ್ರಕರಣಗಳನ್ನು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಲೋಕಾಯುಕ್ತರು ಇದ್ದ ಕಾರಣ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲು ಅವಕಾಶವಿತ್ತು. ಹೀಗಾಗಿ ಹಾಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಜೈಲಿಗೆ ಹೋದರು, ಸಚಿವರು, ಶಾಸಕರು ಜೈಲಿಗೆ ಹೋಗಿದ್ದರು. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಾಯಕರೆಲ್ಲರೂ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ನಲುಗಿದ್ದರು. ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾರ ಪ್ರಕರಣ ಹೊರ ಬಂದಿದ್ದೇ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ಸಂಸ್ಥೆಯಿಂದ ಭ್ರಷ್ಟಾಚಾರ ನಿಗ್ರಹ ದಳ ಬೇರ್ಪಡಿಸಿ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡಿದರು. ಎಲ್ಲಾ ಪಕ್ಷಗಳಿಂದಲೂ ಇದಕ್ಕೆ ಪರೋಕ್ಷ ಸಹಕಾರವಿತ್ತು, ಹೀಗಾಗಿ ಯಾರೂ ಚಕಾರ ಎತ್ತಿರಲಿಲ್ಲ. ಹೀಗಾಗಿ ಸಿದ್ಧರಾಮಯ್ ಸರ್ಕಾರ ಲೋಕಾಯುಕ್ತ ಸಂಸ್ಥೆಗೆ ಕೊನೆ ಮೊಳೆ ಹೊಡೆದರು.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ತಿದ್ದುಪಡಿ:
ಇದಾಗಿ ಎರಡು ವರ್ಷದ ನಂತರ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದು ಸಾರ್ವಜನಿಕ ಸೇವಕ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪ ಕುರಿತು ದೂರು ಬಂದರೆ ( ಲಂಚ ಸ್ವೀಕಾರ, ಅಕ್ರಮ ಆಸ್ತಿ ಹೊರತು ಪಡಿಸಿ) ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕೆಂಬ ನಿಯಮ ಸೇರಿಸಲಾಯಿತು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ( ತಿದ್ದುಪಡಿ) ಸೆಕ್ಷನ್ 17 (a) ಪ್ರಕಾರ ಯಾವುದೇ ಸರ್ಕಾರಿ ಸೇವಕ ( ಶಾಸಕರು- ಸಚಿವರು ಸೇರಿದಂತೆ) ವಿರುದ್ಧ ದೂರಿನ ಸಂಬಂಧ ಎಸಿಬಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯಬೇಕು.ಇದು ಸುಮಾರು ಪ್ರಕರಣಗಳ ತನಿಖೆಗೆ ಎಸಿಬಿ ಅಧಿಕಾರಿಗಳಿಗೆ ಅಡ್ಡಿಯುಂಟು ಮಾಡಿದೆ. ಇದೇ ನಿಯಮ ಇಟ್ಟುಕೊಂಡು ಶಾಸಕರ ಹಾಗೂ ಸಚಿವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಗದೇ ತನಿಖೆಯೇ ವರ್ಷಗಳಿಂದ ಸ್ಥಗಿತಗೊಂಡಿದೆ. ಇನ್ನು ಎಸಿಬಿ ಕೂಡ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಸಂಸ್ಥೆಯಾಗಿರುವುದರಿಂದ ಮೇಲಿನ ಆದೇಶಗಳನ್ನು ಪಾಲಿಸಬೇಕು. ಎಸಿಬಿಯ ಸ್ವತಂತ್ರ್ಯ ತನಿಖೆಗೆ ಸರ್ಕಾರದಿಂ ದಲೇ ಅಡ್ಡಿಯಾಗುತ್ತಿದೆ ಎಂಬ ಆನುಮಾನ ವ್ಯಕ್ತವಾಗಿದೆ.
ಪೂರ್ವಾನಮತಿ ಸಮಸ್ಯೆ:
ಭ್ರಷ್ಟರ ವಿರುದ್ಧ ಸಮರ ಸಾರಲೆಂದು ರಚನೆಯಾದ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ ರಚನೆಯಾಗಿ ನಾಲ್ಕು ವರ್ಷಗಳಾದರೂ ಒಬ್ಬ ಶಾಸಕ, ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕುರಿತು ತನಿಖೆ ನಡೆಸಲು ಸಾಧ್ಯವಾಗಿಲ್ಲ ! ಹಾಗಂತ ಎಸಿಬಿಯಲ್ಲಿರುವ ಅಧಿಕಾರಿಗಳು ಶಾಸಕರ, ಸಚಿವರ ವಿರುದ್ಧ ಕೇಸು ದಾಖಲಿಸಿಲ್ಲ ಅಂತಲ್ಲ ! ಎಸಿಬಿ ಅಧಿಕಾರಿಗಳು ಶಾಸಕರ ಮತ್ತು ಸಚಿವರ ವಿರುದ್ಧ ಹನ್ನೊಂದು ಪ್ರಕರಣ ದಾಖಲಾಗಿವೆ. ಭ್ರಷ್ಟಾಚಾರ ಆರೋಪ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಸಿಗದೇ ಸುಮಾರು ಪ್ರಕರಣಗಳ ತನಿಖೆ ಸ್ಥಗಿತಗೊಂಡಿದೆ. ಬೆರಳೆಣಿಕೆ ಪ್ರಕರಣಗಳು ಮಾತ್ರ ನ್ಯಾಯಾಲಯದ ತಡೆಯಾಜ್ಞೆಗೆ ಒಳಪಟ್ಟಿವೆ. ಉಳಿದ ಭ್ರಷ್ಟಾಚಾರ ಪ್ರಕರಣಗಳು ಸಾರ್ವಜನಿಕರು ದಾಖಲಿಸಿರುವ ಖಾಸಗಿ ದೂರಿನ ಸ್ವರೂಪವಾಗಿದ್ದು, ಇವುಗಳ ತನಿಖೆಗೆ ಸರ್ಕಾರದ ಪೂರ್ವಾನುಮತಿ ಅಗತ್ಯ. ಬಹುತೇಕ ಪ್ರಕರಣಗಳಲ್ಲಿ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಸಿಗದ ಕಾರಣ ಎಸಿಬಿ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
Recommended Video
ಸಿಎಂ ವಿರುದ್ಧ ತನಿಖೆ :
ಮುಖ್ಯಮಂತ್ರ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ 2017 ರಲ್ಲಿ ಎರಡು ಭ್ರಷ್ಟಾಚಾರ ಪ್ರಕರಣ ದಾಖಲಾಗಿವೆ. ಯಲಹಂಕ ಹೋಬಳಿ ಆವಲಹಳ್ಳಿ ಗ್ರಾಮದ ಸರ್ವೆ ನಂ 106 ರಲ್ಲಿನ 3.6 ಎಕರೆ ಡಿ ನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಇದೇ ವರ್ಷದಲ್ಲಿ ಯಶವಂತಪುರ ಹೋಬಳಿ ಸೋಮಶೆಟ್ಟಿ ಹಳ್ಳಿ ಗ್ರಾಮದ ಸರ್ವೆ ನಂ 22/2 ರಲ್ಲಿ 8 ಗುಂಟೆ ಹಾಗೂ 24/1 ರಲ್ಲಿ 1ಎಕರೆ 8 ಗುಂಟೆ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿದ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿವೆ. ಈ ಎರಡೂ ಪ್ರಕರಣಗಳಲ್ಲಿ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸದ್ಯ ಮುಖ್ಯಮಂತ್ರಿಗಳಾಗಿ ಯಡಿಯೂರಪ್ಪ ಅವರು ಆಡಳಿತ ನಡೆಸುತ್ತಿರುವ ಕಾರಣ ತಡೆಯಾಜ್ಞೆ ಯಾವಾಗ ತೆರವಾಗುತ್ತೋ ? ತೆರವುಗೊಳಿಸಿ ತನಿಖೆಗೆ ಚಾಲನೆ ಮಾಡುವರು ಯಾರು ಎಂಬ ಅನುಮಾನ ಹುಟ್ಟುಹಾಕಿದೆ. ಯಾಕೆಂದರೆ ಎಸಿಬಿಗೆ ಯಾರನ್ನೇ ವರ್ಗಾವಣೆ ಮಾಡಿದರೂ ಸರ್ಕಾರವೇ ಮಾಡಬೇಕು. ಎಸಿಬಿ ಸರ್ಕಾರದ ಅಧೀನಕ್ಕೆ ಒಳಪಟ್ಟಿರುವ ಕಾರಣ ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕಾಗುತ್ತದೆ.
ಯಾವ್ಯಾವ ಮಂತ್ರಿ ಶಾಸಕರ ವಿರುದ್ಧ ಕೇಸು :
ಶಾಸಕರ ವಿವರ ಸಂಕ್ಷಿಪ್ತ ವಿವರ | ಪ್ರಕರಣ ವಿವರ | ಪ್ರಸ್ತುತ ಸ್ಥಿತಿ |
ವಿ. ಸೋಮಣ್ಣ, ವಸತಿ ಸಚಿವರು ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಹೋಗಿಲ್ಲ | 11/2016 ಭ್ರಷ್ಟಾಚಾರ ಆರೋಪ | ಎಫ್ಐರ್ ಹೈಕೋರ್ಟ್ ನಿಂದ ರದ್ದು |
ಸಿ.ಟಿ. ರವಿ, ಶಾಸಕರು, ಚಿಕ್ಕಮಗಳೂರು ಹೈಕೋರ್ಟ್ ತಡೆಯಾಜ್ಞೆ ತೆರವಿಗೆ ಕ್ರಮವಿಲ್ಲ | 19/2016 ಭ್ರಷ್ಟಾಚಾರ ಆರೋಪ | ಹೈಕೋರ್ಟ್ ನಿಂದ ತಡೆಯಾಜ್ಞೆ |
ಎಚ್. ನಾಗೇಶ್ , ಶಾಸಕರು, ಮುಳಬಾಗಿಲು | 18/2017, ಭ್ರಷ್ಟಾಚಾರ ಆರೋಪ | ತನಿಖೆ ಹಂತದಲ್ಲಿದೆ |
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳು ಮಧ್ಯಂತರ ತಡೆ ತೆರವು ಪ್ರಯತ್ನವೇ ಇಲ್ಲ | 34/2017 - ಡಿ ನೋಟಿಫಿಕೇಷನ್ | ಹೈಕೋರ್ಟ್ ನಿಂದ ಮಧ್ಯಂತರ ತಡೆ |
ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿಗಳುಮಧ್ಯಂತರ ತಡೆಯಾಜ್ಞೆ ತೆರವು ಆಗಿಲ್ಲ | 36/2017 ಡಿ ನೋಟಿಫಿಕೇಷನ್ | ಹೈಕೋರ್ಟ್ ನಿಂದ ಮಧ್ಯಂತರ ತಡೆ |
ಆರ್. ಅಶೋಕ್, ಕಂದಾಯ ಸಚಿವರು, | 05/2018ಭ್ರಷ್ಟಾಚಾರ ಆರೋಪ | ಎಸಿಬಿ ತನಿಖೆಗೆ ಸುಪ್ರೀಂ ತಡೆ |
ಚೌಡರೆಡ್ಡಿ, ಮಾಜಿ ಶಾಸಕರು ಚಿಂತಾಮಣಿ | 04/201 ಭ್ರಷ್ಟಾಚಾರ ಆರೋಪ | ಎಸಿಬಿ ತನಿಖಾ ಹಂತದಲ್ಲಿದೆ. |
ಗೋಪಾಲ ಪೂಜಾರಿ, ಮಾಜಿ ಶಾಸಕರು ಬೈಂದೂರು, ಎಸಿಬಿ ತನಿಖೆ ಸ್ಥಗಿತ | 02/2016 ಭ್ರಷ್ಟಾಚಾರ ಆರೋಪ | ಸಕ್ಷಮ ಪ್ರಾಧಿಕಾರದಿಂದ ಅನುಮತಿ ಸಿಕ್ಕಿಲ್ಲ |
ಗೋಪಾಲ ಪೂಜಾರಿ, ಮಾಜಿ ಶಾಸಕರು, ಬೈಂದೂರು, ಎಸಿಬಿ ಪೊಲೀಸರಿಂದ ತನಿಖೆ | 02/2017 ಭ್ರಷ್ಟಾಚಾರ ಆರೋಪ | ತನಿಖಾ ಹಂತದಲ್ಲಿದೆ ಉಡುಪಿ |
ಅಭಯ್ ಕುಮಾರ್ ಭರಮಗೌಡ ಪಾಟೀಲ್, ಶಾಸಕರು,ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಬಾಕಿ | 12/2017 ಭ್ರಷ್ಟಾಚಾರ ಅರೋಪ | ಶಾಸಕರಿಂದ 123 ಹೇಳಿಕೆ ಬಾಕಿ |
ವೀರಣ್ಣ ಚರಂತಿ ಮಠ, ಶಾಸಕರು , ಬಾಗಲಕೋಟ, ನ್ಯಾಯಾಲಯಕ್ಕೆ ಬಿ ವರದಿ ಸಲ್ಲಿಕೆ | 01/2016 ಭ್ರಷ್ಟಾಚಾರ ಅರೋಪ | ಬಿ ವರದಿ ಸಲ್ಲಿಕೆ |
ದೂರುಗಳೇ ಇಲ್ಲ:
ಲೋಕಾಯುಕ್ತ ಸಂಸ್ಥೆ ಉತ್ತುಂಗ ಸ್ಥಿತಿಯಲ್ಲಿದ್ದಾಗ ಶಾಸಕರ ಹಾಗೂ ಸಚಿವರ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಪಿಸಿಆರ್ ಪರ್ವ ಆರಂಭವಾಗಿತ್ತು. ಸಾರ್ವಜನಿಕರೇ ಸಚಿವ ಹಾಗೂ ಶಾಸಕರ ಅಕ್ರಮ ದಾಖಲೆಗಳನ್ನು ಸಂಗ್ರಹಿಸಿ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರುಗಳು ಸಲ್ಲಿಸುತ್ತಿದ್ದರು. ಹೀಗಾಗಿ ಮಾಜಿ ಸಚಿವರಾದ ಡಿ.ಕೆ. ಶಿವಕುಮಾರ್, ಸಚಿವರಾದ ಆರ್. ಅಶೋಕ್, ವಿ. ಸೋಮಣ್ಣ, ಯಲಹಂಕ ಶಾಸಕ, ಎಸ್. ಆರ್. ವಿಶ್ವನಾಥ್, ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು, ಮಾಜಿ ಶಾಸಕ ಸಂಪಂಗಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಜನಾರ್ಧನರೆಡ್ಡಿ, ಆನಂದ್ ಸಿಂಗ್, ಹೀಗೆ ಸರಣಿ ನಾಯಕರ ನಿದ್ದೆ ಭ್ರಷ್ಟಾಚಾರ ಆರೋಪ ಕುರಿತು ದೂರುಗಳು ದಾಖಲಾಗಿದ್ದವು. ಭ್ರಷ್ಟಾಚಾರ ನಿಗ್ರಹ ದಳ ಲೋಕಾಯುಕ್ತರ ಅಧೀನದಲ್ಲಿದ್ದ ಕಾರಣದಿಂದ ಮುಕ್ತ ತನಿಖೆ ನಡೆಯುತ್ತಿತ್ತು. ಇದೀಗ ಎಸಿಬಿಯೇ ಸರ್ಕಾರದ ಅಧೀನದಲ್ಲಿದೆ. ಇನ್ನೂ ಕಳೆದ ಎರಡು ವರ್ಷದಿಂದ ಜನ ಪ್ರತಿನಿಧಿಗಳ ವಿರುದ್ಧ ದೂರುಗಳೇ ದಾಖಲಾಗಿಲ್ಲ.
ಯಡಿಯೂರಪ್ಪ ಅಜೆಂಡಾ ಮರೆತರೇ ? :
ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಅವಧಿ ಮುಗಿದ ಬಳಿಕ ಚುನಾವಣೆ ಎದುರಾಗಿತ್ತು. ಈ ವೇಳೆ ನಮ್ಮ ಸರ್ಕಾರ ಬಂದರೆ ಲೋಕಾಯುಕ್ತ ಸಂಸ್ಥೆಗೆ ಶಕ್ತಿ ತುಂಬಲಾಗುವುದು. ಕಾಂಗ್ರೆಸ್ ಸರ್ಕಾರ ರಚಿಸಿರುವ ಎಸಿಬಿಯನ್ನು ಮೊದಲಿನಂತೆ ಲೋಕಾಯುಕ್ತ ಸಂಸ್ಥೆಯ ಅಧೀನದಲ್ಲಿ ತರಲಾಗುವುದು ಎಂದು ಯಡಿಯೂರಪ್ಪ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದರು. ಕಾಂಗ್ರೆಸ್ - ಜೆಎಡಿಎಸ್ ನೇತೃತ್ದದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಪತನಗೊಂಡಿತ್ತು. ಯಡಿಯೂರಪ್ಪ ಅವರು ಸಿಎಂ ಆದರೂ, ಇದೀಗ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಬಿಡುಗಡೆ ಮಾಡಿದ್ದ ಪ್ರಣಾಳಿಕೆ ಕುರಿತು ಈವರೆಗೂ ತುಟಿ ಬಿಚ್ಚಿಲ್ಲ. ಪ್ರತಿ ಪಕ್ಷಗಳು ಕೂಡ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರಣ ಇಷ್ಟೇ ಯಾವ ಜನ ಪ್ರತಿನಿಧಿಗಳು ಬಿಲಿಷ್ಠ ಭ್ರಷ್ಟಾಚಾರ ನಿಗ್ರಹ ದಳ ಅಗತ್ಯವಿಲ್ಲ ಎಂಬ ಮನೋ ಭಾವನೆ ಇರಬಹುದಲ್ಲವೇ ?