ಬೊಮ್ಮಾಯಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ
ಬೆಂಗಳೂರು, ಆಗಸ್ಟ್ 4: ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿದೆ. ರಾಜಭವನದಲ್ಲಿ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಗೌಪ್ಯತಾ ವಿಧಿ, ಪ್ರತಿಜ್ಞೆ ಪ್ರಮಾಣ ವಚನ ಸ್ವೀಕಾರ ನಡೆಯಿತು. ಈಗ ಯಾರಿಗೆ ಯಾವ ಖಾತೆ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಭಾರಿ ಬೇಡಿಕೆ, ಒತ್ತಡ ಕಂಡು ಬಂದರೂ ಡಿಸಿಎಂ ಹುದ್ದೆ ಸೃಷ್ಟಿಸದಿರಲು ಹೈಕಮಾಂಡ್ ನಿರ್ಧರಿಸಿದೆ.
ಹೈಕಮಾಂಡ್ ಅಣತಿಯಂತೆ 6 ಹೊಸಬರು, ಅನುಭವವುಳ್ಳರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರಮುಖವಾಗಿ ಮುಂಬರುವ ಬಿಬಿಎಂಪಿ ಚುನಾವಣೆ ಮೇಲೆ ಬಿಜೆಪಿ ಕಣ್ಣಿರಿಸಿಕೊಂಡು ಬೆಂಗಳೂರಿನ ಶಾಸಕರಿಗೆ ಮಣೆ ಹಾಕಲಾಗಿದೆ. 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ಆರಂಭವಾಗಿದ್ದು, ಜಾತಿವಾರು ಲೆಕ್ಕಾಚಾರದಂತೆ ಕೂಡಾ ಲಿಂಗಾಯತ, ದಲಿತ, ಹಿಂದುಳಿತ ವರ್ಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 18 ಸಚಿವರು ಪದವಿ ಶಿಕ್ಷಣವನ್ನು ಮುಗಿಸಿದ್ದರೆ, ಉಳಿದ 12 ಸಚಿವರಲ್ಲಿ ಪಿಯುಸಿ, ಎಸ್ಎಸ್ಎಲ್ಸಿ ಅಥವಾ ಅದಕ್ಕಿಂತ ಕಡಿಮೆ ಶಿಕ್ಷಣವನ್ನು ಪಡೆದಿದ್ದಾರೆ.
"ಪಕ್ಷ ನಮ್ಮ ಮೇಲೆ ನಂಬಿಕೆಯಿಟ್ಟು ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುತ್ತೇವೆ" ಎಂಬುದು ಈ ದಿನ ಹೆಚ್ಚಾಗಿ ಕೇಳಿ ಬಂದ ಹೇಳಿಕೆ. ಪ್ರಭು ಚೌವ್ಹಾಣ್, ಬಿ.ಸಿ ಪಾಟೀಲ್ ಬಿಟ್ಟರೆ ಮಿಕ್ಕವರು ಯಾರೂ ಕೂಡಾ ಇಂಥದ್ದೇ ಖಾತೆ ಬೇಕು ಎಂದು ವರಾತ ಹಿಡಿದಿಲ್ಲ.

ಸಚಿವರು-ಕ್ಷೇತ್ರ-ಸಂಭಾವ್ಯ ಖಾತೆ
1. ಬಸವರಾಜ ಬೊಮ್ಮಾಯಿ-ಮುಖ್ಯಮಂತ್ರಿ, ಹಣಕಾಸು, ಗೃಹ,ಗುಪ್ತಚರ ಸೇರಿದಂತೆ 4 ಖಾತೆ ಉಳಿಸಿಕೊಳ್ಳಲಿದ್ದಾರೆ
2. ವಿ ಸೋಮಣ್ಣ- ಗೋವಿಂದರಾಜನಗರ-ವಸತಿ
3. ಶಂಕರ್ ಪಾಟೀಲ್ ಮುನೇನಕೊಪ್ಪ-ನವಲಗುಂದ-
4. ಜೆ.ಸಿ ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ-ಕಾನೂನು, ಸಣ್ಣ ನೀರಾವರಿ
5. ಮುರುಗೇಶ್ ನಿರಾಣಿ-ಬೀಳಗಿ- ಬೃಹತ್ ಕೈಗಾರಿಕೆ
6. ಸಿ. ಸಿ ಪಾಟೀಲ-ನರಗುಂದ-ಪೌರಾಡಳಿತ, ವಾರ್ತಾ
7. ಬಿ.ಸಿ ಪಾಟೀಲ್-ಹಿರೇಕೆರೂರು-ಕೃಷಿ
8. ಉಮೇಶ್ ಕತ್ತಿ-ಹುಕ್ಕೇರಿ- ಆಹಾರ
9. ಶಶಿಕಲಾ ಜೊಲ್ಲೆ- ನಿಪ್ಪಾಣಿ-ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ
10. ಆರ್ ಅಶೋಕ-ಪದ್ಮನಾಭನಗರ-ಕಂದಾಯ
11. ಎಸ್ ಟಿ ಸೋಮಶೇಖರ್-ಯಶವಂತಪುರ-ಸಹಕಾರ
12. ಡಾ. ಸಿ. ಎನ್ ಅಶ್ವಥ ನಾರಾಯಣ-ಮಲ್ಲೇಶ್ವರ- ಉನ್ನತ ಶಿಕ್ಷಣ, ಐಟಿ-ಬಿಟಿ
13. ಆರಗ ಜ್ಞಾನೇಂದ್ರ- ತೀರ್ಥಹಳ್ಳಿ-ಅರಣ್ಯ /ಪ್ರವಾಸೋದ್ಯಮ
14. ಕೆ ಗೋಪಾಲಯ್ಯ-ಮಹಾಲಕ್ಷ್ಮಿ ಲೇಔಟ್-ಅಬಕಾರಿ
15. ಡಾ. ಸುಧಾಕರ್-ಚಿಕ್ಕಬಳ್ಳಾಪುರ-ಆರೋಗ್ಯ
16. ಕೆ. ಸಿ ನಾರಾಯಣ ಗೌಡ- ಕೆ. ಆರ್ ಪೇಟೆ-ಕ್ರೀಡೆ, ಯುವಜನ, ಕೌಶಲ್ಯಾಭಿವೃದ್ಧಿ
17. ಬೈರತಿ ಬಸವರಾಜ್- ಕೆ. ಆರ್ ಪುರ-ನಗರಾಭಿವೃದ್ಧಿ
18: ಕೆಎಸ್ ಈಶ್ವರಪ್ಪ-ಶಿವಮೊಗ್ಗ-ಗ್ರಾಮೀಣಾಭಿವೃದ್ಧಿ
19. ಗೋವಿಂದ ಕಾರಜೋಳ-ಮುಧೋಳ- ಲೋಕೋಪಯೋಗಿ
20. ಹಾಲಪ್ಪ ಆಚಾರ್- ಯಲಬುರ್ಗಿ-ತೋಟಗಾರಿಕೆ
21. ಆನಂದ್ ಸಿಂಗ್-ಹೊಸಪೇಟೆ-ಪ್ರವಾಸೋದ್ಯಮ
22 ಕೋಟಾ ಶ್ರೀನಿವಾಸ ಪೂಜಾರಿ- ಎಂಎಲ್ಸಿ-ಮುಜರಾಯಿ
23. ಪ್ರಭು ಚೌವಾಣ್- ಔರಾದ್-ಪಶು ಸಂಗೋಪಣೆ
24 ಸುನಿಲ್ ಕುಮಾರ್- ಕಾರ್ಕಳ-ಪ್ರಾಥಮಿಕ ಶಿಕ್ಷಣ
25 ಬಿ. ಸಿ ನಾಗೇಶ್- ತಿಪಟೂರು- ಕನ್ನಡ ಮತ್ತು ಸಂಸ್ಕೃತಿ
26. ಎಸ್ ಅಂಗಾರ- ಸುಳ್ಯ-ಬಂದರು ಮತ್ತು ಮೀನುಗಾರಿಕೆ
27. ಬಿ ಶ್ರೀರಾಮುಲು-ಮೊಳಕಾಲ್ಮೂರು- ಸಮಾಜ ಕಲ್ಯಾಣ
28. ಶಿವರಾಂ ಹೆಬ್ಬಾರ್- ಯಲ್ಲಾಪುರ-ಕಾರ್ಮಿಕ
29. ಮುನಿರತ್ನ- ಆರ್ ಆರ್ ನಗರ-ಬೆಂಗಳೂರು ನಗರಾಭಿವೃದ್ಧಿ
30. ಎಂ. ಟಿ. ಬಿ ನಾಗರಾಜ್-ಸಾರಿಗೆ
ಬೊಮ್ಮಾಯಿ ಸಂಪುಟಕ್ಕೆ ಆಯ್ಕೆಯಾದವರ ಪೈಕಿ 8 ಲಿಂಗಾಯತ, 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ ಟಿ ಮತ್ತು ಒಬ್ಬ ಮಹಿಳೆಗೆ ಸ್ಥಾನ ಕಲ್ಪಿಸಲಾಗಿದೆ. ಯಡಿಯೂರಪ್ಪ ಸಂಪುಟದಲ್ಲಿದ್ದ ಜಗದೀಶ್ ಶೆಟ್ಟರ್, ಆರ್. ಶಂಕರ್, ಸಿ. ಪಿ. ಯೋಗೇಶ್ವರ್, ಅರವಿಂದ ಲಿಂಬಾವಳಿ, ಶ್ರೀಮಂತ ಪಾಟೀಲ್, ಎಸ್. ಸುರೇಶ್ ಕುಮಾರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಒಟ್ಟು 34 ಶಾಸಕರು ಸಚಿವರಾಗಬಹುದು. ಇಂದು 29 ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಈ ಬಗ್ಗೆ ರಾಜ್ಯಪಾಲರಿಗೆ ಅಧಿಕೃತವಾಗಿ ಪತ್ರ ಮೂಲಕ ತಿಳಿಸಲಾಗಿತ್ತು. ಆದರಂತೆ, 29 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಉಳಿದಿರುವ 4 ಸ್ಥಾನಗಳನ್ನು ಕಾಯ್ದಿರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ.












Click it and Unblock the Notifications