ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ತೊಡಿಸಲು ಸರಕಾರ ಮುಂದಾಗಲಿ
Recommended Video

ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರ ವ್ಯಾಪಾರೀಕರಣಗೊಂಡು ಜನಸಾಮಾನ್ಯರ ಬದುಕು ಹೈರಾಣಗೊಂಡು ಹಲವು ವರ್ಷಗಳೇ ಕಳೆದವು, ನಮ್ಮ ಕಾಲದಲ್ಲಿ ಎಸೆಸೆಲ್ಸಿ ವರೆಗಿನ ಒಟ್ಟಾರೆ ಶಿಕ್ಷಣದ ಖರ್ಚು, ಈಗಿನ ಮಕ್ಕಳ ಯುನಿಫಾರಂಗೂ ಸಾಲುವುದಿಲ್ಲ ಎನ್ನುವುದು ವಸ್ತುಸ್ಥಿತಿ.
ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಸಿದ್ದರಾಮಯ್ಯ ಸರಕಾರ ಏನು ಮಸೂದೆ ಮಂಡಿಸಲು ಮುಂದಾಗಿದೆಯೋ, ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ಹಾಕುವ ಪ್ರಯತ್ನಕ್ಕೆ ಮುಂದಾಗಿದ್ದರೆ ಭಪ್ಪರೇ ಮಗನೇ ಅನ್ನಬಹುದಿತ್ತು. ಆದರೆ, ಅದು ಅಷ್ಟು ಸುಲಭ ಮಾತಲ್ಲ. ಎಲ್ಲಾ ಅಡೆತಡೆಯ ಹೊರತಾಗಿಯೂ, ಸಿದ್ದಾರಾಮಯ್ಯ ಈ ಮಸೂದೆ ಜಾರಿಗೆ ತಂದಿದ್ದೇ ಆದಲ್ಲಿ, ಮುಂದಿನ ಚುನಾವಣೆ ಗೆಲ್ಲಲು ಇದೇ ಅವರಿಗೆ ಟ್ರಂಪ್ ಕಾರ್ಡ್.
ಅಸಲಿಗೆ, ಸಿದ್ದರಾಮಯ್ಯ ಸರಕಾರ ಏನು 'ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ವಿಧೇಯಕ' ಮಂಡಿಸಲು ಮುಂದಾಗಿದೆಯೋ, ಅದಕ್ಕೆ ಸ್ವಪಕ್ಷೀಯರದ್ದೇ ಸಂಪೂರ್ಣ ಸಹಮತವಿಲ್ಲ. ಇದಕ್ಕೆ ಕಾರಣ ಸಿಂಪಲ್, ರಾಜಕಾರಣಿಗಳ ಒಡೆತನದ ಖಾಸಗಿ ಆಸ್ಪತ್ರೆಗಳಿಗೆ ರಾಜ್ಯದಲ್ಲಿ ಏನೂ ಬರವಿಲ್ಲ.
ಆಸ್ಪತ್ರೆ ಮತ್ತು ಶಾಲೆ ಎರಡೂ ಭರ್ಜರಿಯಾಗಿ ಲಾಭ ತಂದುಕೊಡುವ ಸಂಸ್ಥೆಯಾಗಿರುವುದರಿಂದಲೇ, ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ ಹಾಕುವ ಸರಕಾರದ ನಿರ್ಧಾರಕ್ಕೆ ಈ ಮಟ್ಟಿನ ವಿರೋಧ ವ್ಯಕ್ತವಾಗುತ್ತಿರುವುದು ಮತ್ತು ಕಾಂಗ್ರೆಸ್ಸಿನ ಪ್ರಮುಖ ನಾಯಕರು ಮಸೂದೆಗೆ ಅಪಸ್ವರ ಎತ್ತುತ್ತಿರುವುದು. ಮಸೂದೆ ಮಂಡಣೆಯ ವಿರುದ್ದ ಎಐಸಿಸಿಗೆ ಪತ್ರ ಬರೆದಿರುವುದು ಎಲ್ಲಾ ಒಂದಕ್ಕೊಂದು ಲಿಂಕ್ ಅಷ್ಟೇ..
ನಾವೇನಾದರೂ ಅಧಿಕಾರಕ್ಕೆ ಬಂದರೆ 24ಗಂಟೆಯಲ್ಲಿ ಈ ಮಸೂದೆಯನ್ನು ವಾಪಸ್ ತೆಗೆದುಕೊಳ್ಳುತ್ತೇವೆ ಎನ್ನುವ ಬಿಜೆಪಿ ಮುಖಂಡರ ಬಾಲಿಶ ಹೇಳಿಕೆ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ರಾಜಕೀಯ ಶಾಸ್ತ್ರ ಕಲಿಯಬೇಕಾಗಿಲ್ಲ. ಮುಂದೆ ಓದಿ..

ಕಾಂಗ್ರೆಸ್ಸಿನ 'ವೈದ್ಯಕೀಯ ಮಾಫಿಯಾ'ಗೆ ಹೆದರುವುದಿಲ್ಲ
ಕಾಂಗ್ರೆಸ್ಸಿನ 'ವೈದ್ಯಕೀಯ ಮಾಫಿಯಾ'ಗೆ ಹೆದರುವುದಾದರೆ, ನನಗೆ ಈ ಪದವಿ ಬೇಕಾಗಿಲ್ಲ ಎನ್ನುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಹೇಳಿಕೆ, ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳು ಎಷ್ಟರ ಮಟ್ಟಿಗೆ ರಾಜಕಾರಣಿಗಳ ಹಿಡಿತದಲ್ಲಿದೆ ಎನ್ನುವುದನ್ನು ಅರ್ಥ ಮಾಡಿಸಿಬಿಡುತ್ತೆ. ಆಸ್ಪತ್ರೆಗಳ ವ್ಯವಹಾರ ಏನಿದೆಯೋ ಅದನ್ನೂ ಮೀರಿಸುವುದು ಶಿಕ್ಷಣ ಸಂಸ್ಥೆಗಳು! ಇತ್ತೀಚಿನ ದಿನಗಳಲ್ಲಿ ಐಟಿ ಉದ್ಯಮಗಳನ್ನೇ ನಾಚಿಸುವಂತೆ ಲಾಭ ತಂದುಕೊಡುವ ವ್ಯಾವಹಾರಿಕ ಕೇಂದ್ರವಾಗಿವೆ ಖಾಸಗಿ ಶಿಕ್ಷಣ ಸಂಸ್ಥೆಗಳು.

ಶಿಕ್ಷಣ ಕ್ಷೇತ್ರದಲ್ಲಿ ಪ್ರಭಲ ವಾಗಿರುವ ರಾಜಕಾರಣಿಗಳ ಲಾಬಿ
ನರ್ಸರಿಯಿಂದ ಹಿಡಿದು ಪದವೀಧರರಾಗುವ ತನಕ, ಡೊನೇಶನ್, ಫೀಸ್, ಲೈಬ್ರೆರಿ, ಟ್ಯೂಷನ್ .. ಹೀಗೆ ಪೋಷಕರ ಜೇಬಿನಿಂದ ಹಣ ನೀರಿನಂತೆ ಖರ್ಚಾಗುತ್ತಿದ್ದರೆ, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಸದಸ್ಯರ ವಿಕಾಸಸೌಧ ಏರುತ್ತಲೇ ಇದೆ. ಒಂದು ವೇಳೆ, ವೈದ್ಯಕೀಯ ನಿಯಂತ್ರಣ ಬಿಲ್ ರೀತಿಯಲ್ಲೇ ಶಿಕ್ಷಣ ಕ್ಷೇತ್ರದಲ್ಲೂ ಮಸೂದೆ ಮಂಡಿಸಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆಂದು ಗೊತ್ತಾದರೆ ಸಾಕು, ಅದು ಅವರ ಖುರ್ಚಿಗೇ ಸಂಚಕಾರ ತರುವಷ್ಟು ಪ್ರಭಲವಾಗಿದೆ ಈ ಕ್ಷೇತ್ರದಲ್ಲಿನ ರಾಜಕಾರಣಿಗಳ ಲಾಬಿ.

ರಾಜಕಾರಣಿಗಳಿಗೆ ಶಿಕ್ಷಣ ಸಂಸ್ಥೆಗಳ ಮೇಲೆ ಹೂಡಿಕೆಯ ಪ್ರೇಮ ಜಾಸ್ತಿ
ರಾಜ್ಯದ ಮೂರು ಪ್ರಮುಖ ಪಕ್ಷಗಳ ಹಲವು ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳ ಮಾಲೀಕ/ಟ್ರಸ್ಟಿಗಳಾಗಿದ್ದಾರೆ. ಹೊರಗಡೆ ಜನನಾಯಕ ಎಂದು ಬಿಂಬಿಸಿಕೊಳ್ಳುವ ಇವರ ಶಿಕ್ಷಣ ಸಂಸ್ಥೆಗಳಲ್ಲಿ ಫೀಸುಗಳು ಸಾಮಾನ್ಯ ಮತ್ತು ಮಧ್ಯಮವರ್ಗದ ಕುಟುಂಬದ ಕೈಗೆಟಕುವ ಮಟ್ಟದಲ್ಲೇನೂ ಇಲ್ಲ. ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲೋ ಕೆಲವೊಂದು ಶಾಲಾ/ಕಾಲೇಜು ಫೀಸುಗಳಲ್ಲಿ ರಿಯಾಯತಿ ತೋರಿಸುವುದನ್ನು ಬಿಟ್ಟರೆ, ಬಹುತೇಕ ಎಲ್ಲರೂ ಶಿಕ್ಷಣ ಸಂಸ್ಥೆಗಳನ್ನು ಲಾಭದ ದೃಷ್ಟಿಯಿಂದ ನೋಡುತ್ತಿರುವುದರಿಂದಲೇ ರಾಜಕಾರಣಿಗಳು ಶಿಕ್ಷಣ ಸಂಸ್ಥೆಗಳ ಮೇಲೆ ಹೂಡಿಕೆ ಜಾಸ್ತಿ ಮಾಡುತ್ತಿರುವುದು.

ರಾಜ್ಯದ ಪ್ರಮುಖ ರಾಜಕೀಯ ಮುಖಂಡರು ಶಿಕ್ಷಣ ಸಂಸ್ಥೆಗಳು
ರಾಜ್ಯದ ಪ್ರಮುಖ ರಾಜಕೀಯ ಮುಖಂಡರು/ಸಚಿವರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಅದರಲ್ಲಿ ಕೆಲವೊಂದು ಉ.ದಾ. ಶಾಮನೂರು ಶಿವಶಂಕರಪ್ಪನವರ ಬಾಪೂಜಿ ಇನ್ಸ್ಟಿಟ್ಯೂಟ್, ಪ್ರಭಾಕರ್ ಕೋರೆಯವರ ಕೆಎಲ್ಇ, ಡಾ. ಪರಮೇಶ್ವರ್ ಅವರ ಸಿದ್ದಾರ್ಥ ಇನ್ಸ್ಟಿಟ್ಯೂಟ್, ಡಿ ಕೆ ಶಿವಕುಮಾರ್ ಅವರ ಗ್ಲೋಬಲ್, ಎಂ ಬಿ ಪಾಟೀಲ್ ಅವರ ಬಿಎಲ್ಡಿಇ, ಜಾಲಪ್ಪ ಕುಟುಂಬದ ದೇವರಾಜ್ ಅರಸ್ ಕಾಲೇಜ್, ಕೃಷ್ಣ ಭೈರೇಗೌಡ ಅವರ ಭೈರೇಗೌಡ ಕಾಲೇಜ್ ಇತ್ಯಾದಿ.

ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ಹಾಕುವ ದಿಟ್ಟತನ ತೋರಲಿ
ಖಾಸಗಿ ಆಸ್ಪತ್ರೆಗಳ ಮೇಲೆ ನಿರ್ಭಂದ ಹೇರಲು ಹೊರಟಿರುವ ಸಿದ್ದರಾಮಯ್ಯ, ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ಹಾಕುವ ದಿಟ್ಟತನ ತೋರಿಯಾರಾ? ಮೇಲೆ ಹೆಸರಿಸಿದ ರಾಜಕಾರಣಿಗಳ ಪಟ್ಟಿ ಕೆಲವು ಉದಾಹರಣೆಗಳಷ್ಟೇ.. ಇಂತದ್ದು ಬೇಕಾದಷ್ಟಿದೆ. ರಾಜಕಾರಣಿಗಳೇ ಶಿಕ್ಷಣ ಸಂಸ್ಥೆಗಳ ಮೇಲೆ ಹಣ ಹೂಡಿರುವುದರಿಂದ, ಸದ್ಯಕ್ಕಂತೂ ಸಿಎಂ ಶಿಕ್ಷಣ ಸಂಸ್ಥೆಗಳ ಮೇಲೂ ಮೂಗುದಾರ ಹಾಕುವ ಧೈರ್ಯ ತೋರಲಾರರು.

ಮುಂದಿನ ಚುನಾವಣೆ ಗೆಲ್ಲಲು ಇವರಿಗೆ ಇದೊಂದೇ ಪ್ರಮುಖ ಅಸ್ತ್ರ ಸಾಕು
ಒಂದು ವೇಳೆ, ಏನೇ ಒತ್ತಡ ಬಂದರೂ, ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ದ ಸಿಎಂ ಮಸೂದೆ ಮಂಡಿಸಿದ್ದೇ ಆದಲ್ಲಿ, ಮುಂದಿನ ಚುನಾವಣೆ ಗೆಲ್ಲಲು ಇವರಿಗೆ ಇದೊಂದೇ ಪ್ರಮುಖ ಅಸ್ತ್ರ ಸಾಕು. ಯಾಕೆಂದರೆ, ಜನಸಾಮಾನ್ಯ ಈಗಿನ ಶಿಕ್ಷಣ ಪದ್ದತಿ, ಫೀಸ್, ಡೊನೇಶನ್ ಮುಂತಾದವುಗಳಿಂದ ಹೈರಾಣವಾಗಿದ್ದಾನೆ. ಸಿದ್ದರಾಮಯ್ಯನವರು ಈ ಕೆಲಸಕ್ಕೂ ಮುಂದಾಗಲಿ ಎನ್ನುವುದು ಎಲ್ಲರ ಆಶಯ.












Click it and Unblock the Notifications