Karnataka Rains : ಕರ್ನಾಟಕದಲ್ಲಿ ಮಳೆ ಕ್ಷೀಣ, ಕೆಲವೆಡೆ ಹಗುರ ಮಳೆ ಸಾಧ್ಯತೆ
ಬೆಂಗಳೂರು, ನವೆಂಬರ್ 13: ರಾಜ್ಯದೆಲ್ಲೆಡೆ ಹಿಂಗಾರು ಮಳೆ ದುರ್ಬಲವಾಗಿದ್ದು, ಮುಂದಿನ ಐದು ದಿನಗಳಲ್ಲಿ ಮೂರು ದಿನ ವಿವಿಧ ಭಾಗದಲ್ಲಿ ಹಗುರದಿಂದ ಸಾಧಾರಣವಾಗಿ ಸುರಿಯಲಿದೆ. ಸದ್ಯ ವಾಯುಭಾರ ಕುಸಿತ ದುರ್ಬಲಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಕೆಲವು ದಿನಗಳಿಂದ ಆರ್ಭಟಿಸುತ್ತಿದ್ದ ಹಿಂಗಾರು ಮಳೆ ತಣ್ಣವಾಗುವ ಲಕ್ಷಣಗಳು ಗೋಚರಿಸಿವೆ. ಮುಂದಿನ ಐದು ದಿನಗಳ ರಾಜ್ಯ ಮಳೆ ವಾತಾವರಣ ನೋಡುವುದಾದರೆ, ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮೂರು ದಿನ ಹಗುರದಿಂದ ಸಾಧಾರಣವಾಗಿ ಮಳೆ ಆಗಲಿದೆ, ನಂತರ ಒಣ ಹವೆ ನಿರ್ಮಾಣವಾಗಲಿದೆ.
ಅದೇ ರೀತಿ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಮೂರರಿಂದ ನಾಲ್ಕು ದಿನ ಕೆಲವು ಕಡೆಗಳಲ್ಲಿ ಹಗುರ ಮಳೆ ಸುರಿಯುವ ನಿರೀಕ್ಷೆ ಇದೆ. ನಂತರ ಬಿಸಿಲಿನ ತಾಪಮಾನ, ಶೆಖೆ ಹೆಚ್ಚಾಗಲಿದೆ.

ಈ ವೇಳೆ ಕೆಲವೆಡೆ ಮೋಡ ಕವಿದ ವಾತಾವರಣ, ಬೆಳಗಿನ ಜಾವ ಕೆಲವೆಡೆ ಮಂಜು ಬೀಳಲಿದ್ದು, ಮಧ್ಯಾಹ್ನ ಉಷ್ಣಾಂಶ ಹೆಚ್ಚಿರಲಿದೆ. ಇದರ ಹೊರತು ರಾಜ್ಯದ ವಾತಾವರಣದಲ್ಲಿ ಯಾವುದೇ ಗಂಭೀರ ಬದಲಾವಣೆಗಳು ಇಲ್ಲ.
ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿವರೆಗೆ ಮೇಲ್ಮೈ ಸುಳಿಗಾಳಿ
ಇತ್ತೀಚೆಗಷ್ಟೆ ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ಸೃಷ್ಟಿಯಾಗಿದ್ದ ವಾಯುಭಾರ ಕುಸಿತವು ಕೇರಳದ ಕರಾವಳಿ ಈಶಾನ್ಯ ಅರಬ್ಬಿ ಸಮುದ್ರ ತಲುಪಿದೆ. ಅಲ್ಲಿ ತಲುಪಿ ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿಯಾಗಿ ಸೃಷ್ಟಿಯಾಗಿದೆ.
ಜೊತೆಗೆ ಅರಬ್ಬಿ ಸಮುದ್ರದಿಂದ ಸ್ಟ್ರಫ್ (ಮೇಲ್ಮೈ ತೀವ್ರ ಸುಳಿಗಾಳಿ) ಒಂದು ನೈಋತ್ಯ ಬಂಗಾಳಕೊಳ್ಳಿವರೆಗೆ ಪೂರ್ವ-ಪಶ್ಚಿಮ ದಿಕ್ಕಿನಲ್ಲಿ ಬೀಸಿದೆ. ಇದು ಸಮುದ್ರಮಟ್ಟದಿಂದ ಸುಮಾರು 3.1 ಕಿ.ಮಿ. ಎತ್ತರವಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಡಾ. ಪ್ರಸಾದ್ ತಿಳಿಸಿದ್ದಾರೆ.

ಈ ಹವಾಮಾನ ವೈಪರಿತ್ಯಗಳಿಂದ ಕರ್ನಾಟಕದಲ್ಲಿ ಮಬ್ಬು ವಾತಾವರಣ, ತುಂತುರು ಮತ್ತು ಜಿಟಿಜಿಟಿ ಮಳೆ ಸುರಿಯುತ್ತಿದೆ. ಈಗ ಸೃಷ್ಟಿಯಾಗಿರುವ ವೈಪರಿತ್ಯಗಳು ಅಷ್ಟೊಂದು ಪರಿಣಾಮಕಾರಿ ಅಲ್ಲದ್ದರಿಂದ ಹಿಂಗಾರು ಮಳೆಯ ಅಬ್ಬರ ಸದ್ಯ ರಾಜ್ಯದಲ್ಲಿ ಇಳಿಕೆಯಾಗುತ್ತಿದೆ.
ಕಳೆದ 24 ಗಂಟೆಯಲ್ಲಿ ಕರ್ನಾಟಕದಲ್ಲಿ ಎಚ್ಎಎಲ್ ವಿಮಾನ ನಿಲ್ದಾಣ, ಬೆಂಗಳೂರು ನಗರ, ಕೋಲಾರ, ರಾಮನಗರಲ್ಲಿ ತಲಾ 2ಸೆಂ.ಮೀ., ಕೊಳ್ಳೆಗಾಲದಲ್ಲಿ, ಸರಗೂರು, ಕುಣಿಗಲ್ ಇನ್ನಿತರ ಕಡೆ ಜೋರು ಮಳೆ ದಾಖಲಾಗಿದೆ. ಕಾರವಾರ ಗೋಕರ್ಣದಲ್ಲಿ ಗರಿಷ್ಠ ಉಷ್ಣಾಂಶ 33ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.












Click it and Unblock the Notifications