ಕೊರೊನಾ ವೈರಸ್: ಪೇಜಾವರ ಶ್ರೀಗಳು ನೀಡಿದ ಕರೆ
ಬೆಂಗಳೂರು, ಮಾರ್ಚ್ 26: ಮಾರಣಾಂತಿಕ ಕೊರೊನಾ ವೈರಸ್ ಹರಡದಿರಲು ಶೃಂಗೇರಿ ಮಠದ ಶ್ರೀಗಳು ದುರ್ಗಾ ಪಾರಾಯಣ ಮಾಡಲು ಹೇಳಿದ್ದರು. ಈಗ, ಉಡುಪಿ ಪೇಜಾವರ ಮಠದ ಶ್ರೀಗಳು ಕರೆಯೊಂದನ್ನು ನೀಡಿದ್ದಾರೆ.
ಈ ವಿಚಾರದಲ್ಲಿ ವಿಡಿಯೋ ಸಂದೇಶವನ್ನು ಕಳುಹಿಸಿರುವ ವಿಶ್ವಪ್ರಸನ್ನ ತೀರ್ಥರು, "ವೇದವ್ಯಾಸ ದೇವರು ಇಡೀ ವಿಶ್ವಕ್ಕೆ ನೀಡಿದ ಅಪೂರ್ವವಾದ ಮಂತ್ರ ಶ್ರೀಮದ್ ವಿಷ್ಣುಸಹಸ್ರನಾಮ. ಇದನ್ನು ಪಠಿಸಿದರೆ, ನಮಗೊದಗಿಬರುವ ಎಲ್ಲಾ ಆಪತ್ತುಗಳಿಂದ ನಾವು ದೂರವಾಗಿರಬಹುದು" ಎಂದು ಹೇಳಿದ್ದಾರೆ.
"ವಿಷ್ಣು ಸಹಸ್ರನಾಮ ಪಾರಾಯಣದಿಂದ ಎಲ್ಲಾ ಭಯಗಳನ್ನು ದೂರಪಡಿಸಬಹುದು ಎಂದು ವೇದವ್ಯಾಸರು ಹೇಳಿದ್ದಾರೆ. ಅಂತಹ ವಿಷ್ಣುಸಹಸ್ರನಾಮ ಪಾರಾಯಣವನ್ನು ಪ್ರಪಂಚದಾದ್ಯಂತ ಎಲ್ಲರೂ ಒಂದಾಗಿ ಮುಂಬರುವ ಶುಕ್ರವಾರ, ಮಾರ್ಚ್ 27ರಂದು ಸಂಜೆ ಆರು ಗಂಟೆಗೆ ಸರಿಯಾಗಿ ಅವರವರು ಇರುವ ಸ್ಥಳದಿಂದಲೇ ಪಠಿಸೋಣ" ಎಂದು ಪೇಜಾವರ ಶ್ರೀಗಳು ಕರೆ ನೀಡಿದ್ದಾರೆ.

"ಪಾರಾಯಣದ ಫಲವಾಗಿ ಭಗವಂತ, ಪ್ರಪಂಚಕ್ಕೆ ಆಗಮಿಸಿರುವ ಆಪತ್ತನ್ನು ದೂರ ಮಾಡಿ, ಆಯುರಾರೋಗ್ಯವನ್ನು ಕರುಣಿಸಲಿ ಎಂಬುದಾಗಿ ಪ್ರಾರ್ಥಿಸೋಣ" ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ಭಕ್ತವೃಂದಕ್ಕೆ ಕರೆನೀಡಿದ್ದಾರೆ.
"ನಾವು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಜಗತ್ತಿನಾದ್ಯಂತ ಎಲ್ಲರೂ ಇದರಲ್ಲಿ ಪಾಲ್ಗೊಳ್ಳಿ" ಎಂದು ಶ್ರೀಗಳು ಕರೆ ನೀಡಿದ್ದಾರೆ.
ಭಾರತದಲ್ಲಿ ಇದುವರೆಗೆ 649 ಕೊರೊನಾ ಪ್ರಕರಣ ದಾಖಲಾಗಿದ್ದು, ಹದಿನಾಲ್ಕು ಜನ ಈ ವೈರಸ್ ನಿಂದಾಗಿ ಸಾವನ್ನಪ್ಪಿದ್ದಾರೆ.












Click it and Unblock the Notifications