ಹಲವು ಪ್ರಥಮಗಳಿಗೆ ಸಾಕ್ಷಿಯಾದ ವಿಧಾನಮಂಡಲ ಅಧಿವೇಶನ: ಸಿಎಂ ಬೊಮ್ಮಾಯಿ
ಬೆಳಗಾವಿ, ಡಿಸೆಂಬರ್ 28: ಭೂ ಸುಧಾರಣೆ ಕಾಯ್ದೆಗಳಿಂದ ಹಿಡಿದು ಕ್ರಾಂತಿಕಾರಿ ಮಸೂದೆಗಳ ಮಂಡನೆ, ಕರ್ನಾಟಕ ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ದೇಶದಲ್ಲಿಯೇ ಪ್ರಥಮವಾಗಿವೆ. ಈ ರೀತಿ ಕರ್ನಾಟಕದ ವಿಧಾನಮಂಡಲ ಹತ್ತು ಹಲವು ಪ್ರಥಮಗಳನ್ನು ದಾಖಲಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ 'ಸದನ ಶೂರರು- ಕಾಫಿ ಟೇಬಲ್' ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು, ರಾಜ್ಯದ ವಿಧಾನಮಂಡಲದಲ್ಲಿ ಕ್ರಾಂತಿಕಾರಿ ಮಸೂದೆಗಳು, ಬೇರೆ ರಾಜ್ಯಗಳಲ್ಲಿ ಇಂತಹ ಮಸೂದೆಗಳ ಚರ್ಚೆಯೂ ನಡೆದಿರಲಿಲ್ಲ. ಕರ್ನಾಟಕ ಪ್ರಗತಿಪರವಾದ ರಾಜ್ಯವಾದ್ದರಿಂದ ಪ್ರಮುಖ ಮಸೂದೆಗಳು ಬಂದವು. ಜಿಲ್ಲಾ ಪಂಚಾಯತ್ ಅಧಿಕಾರ ವಿಕೇಂದ್ರೀಕರಣ ಕಾನೂನು ನಂತರ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗೆ ನಾಂದಿಯಾಯಿತು ಎಂದರು.
ಕಾಫಿ ತೋಟದ ಮಾಲೀಕನ ಮೇಲೆ ಹಲ್ಲೆಗೆ ಮುಂದಾದ ಅಸ್ಸಾಂ ಕಾರ್ಮಿಕರು
ಆದರ್ಶದ ಹಾದಿಯಲ್ಲಿ ನಡೆಯಲು ಸ್ಪೂರ್ತಿ
ಕರ್ನಾಟಕದಲ್ಲಿ ಸರ್ವಸ್ವತಂತ್ರ ಲೋಕಾಯುಕ್ತ ಸಂಸ್ಥೆ ಸ್ಥಾಪಿಸಲಾಯಿತು. ಕರ್ನಾಟಕ ವಿಧಾನಮಂಢಲ 70 ವರ್ಷಗಳಲ್ಲಿ ಹಲವು ಪ್ರಥಮಗಳನ್ನು ದಾಖಲಿಸಿದೆ. ಆದ್ದರಿಂದ ಕರ್ನಾಟಕದ ವಿಧಾನಮಂಡಲಕ್ಕೆ ದೇಶದಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದೆ. ನಮ್ಮ ಹಿರಿಯರು ನಡೆದು ಬಂದ ದಾರಿಯಲ್ಲಿ ನಡೆದು, ಅವರ ಆದರ್ಶಗಳ ಹಾದಿಯಲ್ಲಿ ನಡೆಯಲು ಸ್ಪೂರ್ತಿ ತುಂಬುವಂತಹ ಕಾಫಿ ಟೇಬಲ್ ಪುಸ್ತಕವನ್ನು ವಿಜಯಕರ್ನಾಟಕ ಹೊರತಂದಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ಮಾಧ್ಯಮಗಳ ಪಾತ್ರ
ಒಂದು ಪತ್ರಿಕೆ 70 ವರ್ಷದ ವಿಧಾನಮಂಡಲದ ವಿಷಯಗಳನ್ನಾಧರಿಸಿ ಕಾಫಿ ಟೇಬಲ್ ಪುಸ್ತಕ ಮಾಡಿರುವುದು ಇದೇ ಪ್ರಥಮ ಎನಿಸುತ್ತದೆ. ಸಂಸದೀಯ ವ್ಯವಹಾರಗಳ ಇಲಾಖೆಗಳಿಂದ ಇಂತಹ ಪುಸ್ತಕಗಳನ್ನು ಹೊರತರುತ್ತೇವೆ. ಇಂದು ನಾವು ಆದರ್ಶ ಶಾಸಕರು ಎಂದು ಆರ್.ವಿ.ದೇಶಪಾಂಡೆಯವರಿಗೆ ನೀಡಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಯಾಗಿ ನಿಲ್ಲಲು ನಾಲ್ಕನೇ ಸ್ತಂಭವೆನ್ನಲಾಗುವ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ. ರಾಜಕಾರಣಿಗಳ ನಿಲುವುಗಳನ್ನು ಜನಪರವನ್ನಾಗಿಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ರಾಜಕಾರಣಿಗಳು ತಮ್ಮ ಭವಿಷ್ಯವನ್ನು ನೋಡಿಕೊಳ್ಳುವುದು ಸಹಜ ಪ್ರಕ್ರಿಯೆ. ಆದರೆ ರಾಜಕಾರಣಿಗಳ ಸಾಮಾಜಿಕ ಜವಾಬ್ದಾರಿಯನ್ನು ಮನವರಿಕೆ ಮಾಡಿಸುತ್ತಿರುವುದು ಪತ್ರಿಕೆಗಳು ಎಂದು ವಿವರಿಸಿದರು.
ನವಪೀಳಿಗೆಗೆ ಮಾದರಿ ಆಗಲಿ
ವಿರೋಧಪಕ್ಷ ಹಾಗೂ ಆಡಳಿತ ಪಕ್ಷದಲ್ಲಿ ಕೆಲಸ ಮಾಡಿದವರು ಒಳ್ಳೆಯ ಶಾಸಕರಾಗಬಹುದು. ಒಟ್ಟು ಪ್ರಜಾಪ್ರಭುತ್ವದ ಆಯಾಮಗಳು ತಿಳಿಯುತ್ತದೆ. ಕರ್ನಾಟಕ ಪರಂಪರೆ ನಾವೆಲ್ಲರೂ ಉಳಿಸಿಕೊಂಡು ಹೋಗಲು ಕಾಫಿ ಟೇಬಲ್ ಬುಕ್ ಮಾರ್ಗದರ್ಶನ ನೀಡಲಿದೆ. ಪತ್ರಿಕಾ ರಂಗಕ್ಕೂ ರಾಜಕಾರಣಿಗಳಿಗೂ ಅವಿನಾಭಾವ ಸಂಬಂಧ. ನಮ್ಮಿಬ್ಬರಿಗೂ ನಮ್ಮದೇ ಆದ ಮೌಲ್ಯಗಳಿದ್ದು, ಇಬ್ಬರೂ ಪರಸ್ಪರ ಅವಲಂಬಿತರಾಗಿದ್ದೇವೆ. ನಮ್ಮ ನಡವಳಿಕೆ ಮುಂದಿನ ಪೀಳಿಗೆ ಮಾದರಿ ಆಗುವಂತಿರಬೇಕು ಎಂದು ಸಲಹೆ ನೀಡಿದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಜಯ ಕರ್ನಾಟಕದ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ ಹಾಗೂ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.