ಹೈಟೆಕ್ ಆಗಿದೆ ವಿಧಾನ ಪರಿಷತ್ ಸಭಾಂಗಣ
ಬೆಂಗಳೂರು, ಜೂ. 24 : ಚಿಂತಕರ ಚಾವಡಿ ಎಂದು ಕರೆಯುವ ವಿಧಾನ ಪರಿಷತ್ ಸಭಾಂಗಣವನ್ನು ಸುಮಾರು 7 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಣ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ನವೀಕೃತ ಸಭಾಂಗಣವನ್ನು ಉದ್ಘಾಟನೆ ಮಾಡಿ, ಸಭಾಂಗಣದ ಆಧುನೀಕರಣ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಸುಣ್ಣ, ಬಣ್ಣ ಪಾಲೀಶ್ ಕಣ್ಣು ಕೊರೈಸುವ ಬೆಳಕಿನಿಂದ ನವೀಕರಣಗೊಂಡಿರುವ ವಿಧಾನ ಪರಿಷತ್ ಸಭಾಂಗಣದಲ್ಲಿ ಸೋಮವಾರದಿಂದ ಕಲಾಪ ಆರಂಭವಾಗಿದೆ. ನವೀಕರಣಗೊಂಡ ಸಭಾಂಗಣವನ್ನು ನೋಡಿ ಪರಿಷತ್ ಸದಸ್ಯರು, ಸಭಾಂಗಣ ಮದುಮಗಳಂತೆ ಕಂಗೊಳಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. [ಅಧಿವೇಶನದ ಮೊದಲ ದಿನದ ಮುಖ್ಯಾಂಶಗಳು]
ಸುಮಾರು ಏಳು ಕೋಟಿ ರೂ.ಗಳ ವೆಚ್ಚದಲ್ಲಿ ವಿಧಾನಪರಿಷತ್ ಸಭಾಂಗಣವನ್ನು ನವೀಕರಣ ಮಾಡಲಾಗಿದೆ. ನೆಲಹಾಸು, ಬೆಳಕಿನ ವ್ಯವಸ್ಥೆ, ಮೈಕ್ ಮುಂತಾದವುಗಳನ್ನು ಬದಲಾವಣೆ ಮಾಡಿ ಪರಿಷತ್ ಸಭಾಂಗಣವನ್ನು ಆಧುನೀಕರಣಗೊಳಿಸಲಾಗಿದೆ. ಪರಿಷತ್ ಸಭಾಂಗಣದ ಚಿತ್ರಗಳು
ಸಿದ್ದರಾಮಯ್ಯರಿಂದ ಉದ್ಘಾಟನೆ
ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ವಿಧಾನ ಪರಿಷತ್ ಸಭಾಂಗಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟನೆ ಮಾಡಿ, ಸಭಾಂಗಣದ ಆಧುನೀಕರಣ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು. ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸದಸ್ಯರು ಚೇಷ್ಟೆ ಮಾಡುವಂತಿಲ್ಲ
ಪರಿಷತ್ ಸಭಾಂಗಣದ ನೋಡಿದ ನಂತರ ಮಾತನಾಡಿದ ಮಾಹಿತಿ ತಂತ್ರಜ್ಞಾನ ಸಚಿವರಾದ ಎಸ್.ಆರ್. ಪಾಟೀಲ್, ಬೆಳಕಿನ ವ್ಯವಸ್ಥೆ ಹಾಗೂ ಆಧುನಿಕ ಸೌಲಭ್ಯಗಳನ್ನೊಳಗೊಂಡಂತೆ ಸಭಾಂಗಣವನ್ನು ಸುಸಜ್ಜಿತಗೊಳಿಸಿಲಾಗಿದೆ ಎಂದು ಅಭಿಪ್ರಾಯಪಟ್ಟರು. ಸಭಾಂಗಣದಲ್ಲಿ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿರುವುದರಿಂದ ಸದಸ್ಯರು ಚೇಷ್ಟೆ ಮಾಡಲು ಅವಕಾಶವಿರುವುದಿಲ್ಲವೆಂದು ಮೋಟಮ್ಮ ಅವರು ಹಾಸ್ಯ ಚಟಾಕಿ ಹಾರಿಸಿದರು.
ಅಂಬೇಡ್ಕರ್ ಫೋಟೋ ಹಾಕಿ
ಪರಿಷತ್ ಸದಸ್ಯರಾದ ವಿಜಯಶಂಕರ್ ಹಾಗೂ ಮತ್ತಿಕಟ್ಟಿ ವೀರಣ್ಣ ಅವರು ನವೀಕೃತ ಸಭಾಂಗಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿ.ಜೆ. ಪುಟ್ಟಸ್ವಾಮಿ ಅವರು ಸಭಾಂಗಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕುವಂತೆ ಸೂಚನೆ ನೀಡಿದರು.
ಸದಸ್ಯರ ಚಿತ್ರ ಲಭ್ಯ
ಪರಿಷತ್ ಸದಸ್ಯರು ಮಾತನಾಡುವಾಗ ಹೊಸದಾಗಿ ಅಳವಡಿಸಿರುವ ಮೈಕ್ ಗಳನ್ನು ಆನ್ ಮಾಡಿಕೊಳ್ಳಬೇಕು. ಮೈಕ್ ಆನ್ ಆದ ಕೂಡಲೇ ಸಭಾಂಗಣದಲ್ಲಿ ಅಳವಡಿಸಿರುವ ಕ್ಯಾಮರಾ ಮಾತನಾಡುವ ಸದಸ್ಯರ ಚಿತ್ರಣವನ್ನು ಸೆರೆಹಿಡಿಯುತ್ತದೆ. ಆದ್ದರಿಂದ ಸದಸ್ಯರು ಒಬ್ಬರಾದ ಮೇಲೆ ಒಬ್ಬರು ಮಾಡನಾಡುವಂತೆ ಸಭಾಧ್ಯಕ್ಷರಾದ ಡಿ.ಹೆಚ್. ಶಂಕರಮೂರ್ತಿ ಅವರು ಸದಸ್ಯರಿಗೆ ಮನವಿ ಮಾಡಿದರು.
ಆಧುನಿಕ ಸಭಾಂಗಣವಾಗಿದೆ
ಸಭಾಂಗಣದ ನೆಲಹಾಸು, ಮೈಕ್, ಬೆಳಕಿನ ವ್ಯವಸ್ಥೆ, ಕ್ಯಾಮರಾ ವ್ಯವಸ್ಥೆಗಳನ್ನು ಬದಲಾವಣೆ ಮಾಡಲಾಗಿದೆ. ಸಭಾಂಗಣದ ಪಿಠೋಪಕರಣಗಳನ್ನು ಬದಲಾಯಿಸಿ ಸಭಾಂಗಣವನ್ನು ಆಧುನೀಕರಣಗೊಳಿಸಲಾಗಿದೆ.