ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಜಯ, ಎಸ್ಆರ್ ಪಾಟೀಲ್ ವಿಶ್ವಾಸ
ಬಾಗಲಕೋಟೆ, ಡಿಸೆಂಬರ್, 28: ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಶಾಲಿಯಾಗುವ ಭರವಸೆ ವ್ಯಕ್ತಪಡಿಸಿದ ಮಾಹಿತಿ ತಂತ್ರಜ್ಞಾನ ಸಚಿವ ಎಸ್ಆರ್ ಪಾಟೀಲ್ ಈ ಬಾರಿ ಕಾಂಗ್ರೆಸ್ ಪಕ್ಷ ಜಯಬೇರಿ ಸಾಧಿಸಲಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೀಳಗಿ ಪಟ್ಟಣ ಪಂಚಾಯತಿ ಮತಗಟ್ಟೆಯಲ್ಲಿ ಡಿಸೆಂಬರ್ 27ರ ಭಾನುವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾವಣೆ ಮಾಡಿ ಮಾತನಾಡಿದ ಸಚಿವ ಎಸ್ಆರ್ ಪಾಟೀಲ್, ವಿಜಯಪುರ ಜಿಲ್ಲೆಯ ಜನ ಈ ಹಿಂದಿನ ಚುನಾವಣೆಗಳಲ್ಲಿ ಗೆಲ್ಲಿಸಿದ್ದಾರೆ. ಜನರ ಪ್ರೀತಿ-ವಿಶ್ವಾಸಕ್ಕೆ ಎಂದೂ ವ್ಯತ್ಯಯ ಉಂಟಾಗದಂತೆ ನಡೆದುಕೊಂಡಿದ್ದೇನೆ. ಮುಂದೆಯೂ ಅವರ ನಿರೀಕ್ಷೆ ಸುಳ್ಳು ಮಾಡುವುದಿಲ್ಲ. ಈ ಬಾರಿ ಅವಳಿ ಜಿಲ್ಲೆಯ ಜನ ಇನ್ನೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಸಚಿವ ಪಾಟೀಲ್ ಹೇಳಿದರು.[ಮತಪತ್ರ ಪ್ರದರ್ಶಿಸಿ ಗೋಜಿಗೆ ಸಿಕ್ಕಿದ ಜಿಲ್ಲಾ ಪಂಚಾಯತಿ ಸದಸ್ಯ]
ಬಾಗಲಕೋಟೆಯನ್ನೂ ಒಳಗೊಂಡ ದ್ವಿಸದಸ್ಯತ್ವ ಹೊಂದಿರುವ ವಿಜಯಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸತತವಾಗಿ ಮೂರುಬಾರಿ ಆಯ್ಕೆಯಾಗಿದ್ದ ಪಾಟೀಲರು ನಾಲ್ಕನೇ ಬಾರಿ ಪುನರಾಯ್ಕೆ ಬಯಸಿ ಚುನಾವಣಾ ಕಣದಲ್ಲಿದ್ದಾರೆ. ಡಿಸೆಂಬರ್ 30ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.[ನನ್ನನ್ನು ಗೆಲ್ಲಿಸಿ, ಸರ್ಕಾರದ ಬೆವರಿಳಿಸುತ್ತೇನೆ: ವಾಟಾಳ್]
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಜನರಲ್ಲಿ, ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಹಾಗಾಗಿ ಈ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೆ. ಇದರಲ್ಲಿ ಯಾರಿಗೂ ಅನುಮಾನವೇ ಬೇಡ ಎಂದು ಹೇಳಿದರು.