ಕೊಡಗಿನಲ್ಲಿ ಬಿಜೆಪಿ ಅಭ್ಯರ್ಥಿ ನಾಮಪತ್ರ ತಿರಸ್ಕೃತ!
ಕೊಡಗು, ಡಿಸೆಂಬರ್ 11 : ವಿಧಾನ ಪರಿಷತ್ ಚುನಾವಣೆಗೆ ಕೊಡಗಿನಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿ ಸಲ್ಲಿಸಿದ್ದ ನಾಮಪತ್ರ ತಿರಸ್ಕೃತವಾಗಿದೆ. ಪಕ್ಷದ ಎರಡನೇ ಅಭ್ಯರ್ಥಿ ಸುನೀಲ್ ಸುಬ್ರಮಣಿ ಅವರು ಸಲ್ಲಿಸಿದ್ದ ನಾಮಪತ್ರ ಸ್ವೀಕೃತಗೊಂಡಿದೆ. ಸುನೀಲ್ ಸುಬ್ರಮಣಿ ಗೆಲ್ಲಿಸಲು ಪಕ್ಷದ ನಾಯಕರು ಪಣ ತೊಟ್ಟಿದ್ದಾರೆ.
ಕೊಡಗು ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಸುಜಾ ಕುಶಾಲಪ್ಪ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಪ್ರಕರಣವೊಂದರ ಸಂಬಂಧ ನಾಮಪತ್ರ ತಿರಸ್ಕರಿಸುವ ಸಾಧ್ಯತೆಯ ಮುನ್ಸೂಚನೆ ಅರಿತ ನಾಯಕರು, ಕೊನೆಗಳಿಗೆಯಲ್ಲಿ ಸುನೀಲ್ ಸುಬ್ರಮಣಿ ಅವರ ಮೂಲಕವೂ ನಾಮಪತ್ರ ಸಲ್ಲಿಕೆ ಮಾಡಿಸಿದ್ದರು. [ಪರಿಷತ್ ಫೈಟ್ : ಕಣದಲ್ಲಿರುವ ಜೆಡಿಎಸ್ 19 ಅಭ್ಯರ್ಥಿಗಳು]

ಗುರುವಾರ ಜಿಲ್ಲಾಧಿಕಾರಿ ಮೀರ್ ಅನೀಸ್ ಅಹಮ್ಮದ್ ಅವರು, ಸುಜಾ ಕುಶಾಲಪ್ಪ ನಾಮಪತ್ರ ತಿರಸ್ಕರಿಸಿದ್ದಾರೆ. ಇದರಿಂದಾಗಿ ಸುನೀಲ್ ಸುಬ್ರಮಣಿ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಅಧಿಕೃತ ಅಭ್ಯರ್ಥಿ ಎಂದು ಘೋಷಿತವಾಗಿದ್ದ ಸುಜಾ ಕುಶಾಲಪ್ಪ ಅವರು ಚುನಾವಣಾ ಕಣದಿಂದ ಹೊರಗುಳಿದಿದ್ದಾರೆ. [ಕೊಡಗು : ಬಿಜೆಪಿಯಿಂದ 2 ನಾಮಪತ್ರ]
ತಿರಸ್ಕಾರ ಏಕೆ? : ಪತ್ರಕರ್ತರಿಗೆ ಬೆದರಿಕೆ ಹಾಕಿದ ಮತ್ತು ನಿಂದನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ತೀರ್ಪಿನ ಆಧಾರದ ಮೇಲೆ ಸುಜಾ ಕುಶಾಲಪ್ಪ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಸುಜಾ ಕುಶಾಲಪ್ಪ ಅವರ ಸಹೋದರ ಸುನೀಲ್ ಸುಬ್ರಮಣಿ ಅವರ ನಾಮಪತ್ರ ಸ್ವೀಕೃತವಾಗಿದೆ. [ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]
ಬಂಡಾಯದ ಬಿಸಿ : ಕೊಡಗು ಬಿಜೆಪಿ ಭದ್ರಕೋಟೆಯಾಗಿದ್ದರೂ ನಾಮಪತ್ರ ಸಲ್ಲಿಕೆ ಗೊಂದಲ ಪಕ್ಷಕ್ಕೆ ಹಿನ್ನಡೆ ಉಂಟುಮಾಡಿದೆ. ಇದರ ನಡುವೆಯೇ ಪಕ್ಷದ ಮತ್ತೊಬ್ಬ ಮುಖಂಡ ಎಸ್.ಜಿ.ಮೇದಪ್ಪ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ಸ್ವೀಕೃತವಾಗಿದ್ದು, ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ.
ಕಣದಲ್ಲಿರುವ ಅಭ್ಯರ್ಥಿಗಳು : ಕೊಡಗು ಕ್ಷೇತ್ರದಲ್ಲಿನ ಚುನಾವಣಾ ಕಣದಲ್ಲಿ ಬಿಜೆಪಿಯಿಂದ ಸುನೀಲ್ ಸುಬ್ರಮಣಿ, ಕಾಂಗ್ರೆಸ್ನಿಂದ ಚಂದ್ರಮೌಳಿ, ಜೆಡಿಎಸ್ನಿಂದ ಸಂಕೇತ್ ಪೂವಯ್ಯ, ಪಕ್ಷೇತರರಾಗಿ ಎಸ್.ಜಿ. ಮೇದಪ್ಪ, ಹಿಂದೂ ಮಹಾಸಭಾದ ನಾಗವೇಣಿ, ಎಸ್.ಪಿ. ಮಹದೇವಪ್ಪ ಸೇರಿದಂತೆ 6 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿಸೆಂಬರ್ 27ರಂದು ಚುನಾವಣೆ ನಡೆಯಲಿದೆ.












Click it and Unblock the Notifications