ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ!
ಬೆಂಗಳೂರು, ಜೂನ್ 22 : ಕರ್ನಾಟಕ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಗುರುವಾರ ನಿವೃತ್ತರಾದರು. 'ಮೇಲ್ಮನೆ ಸದಸ್ಯತ್ವ ಮತ್ತು ಸಭಾಪತಿ ಹುದ್ದೆಯಿಂದ ಮಾತ್ರ ನಿವೃತ್ತಿ ಹೊಂದುತ್ತಿದ್ದೇನೆ ಹೊರತು ರಾಜಕೀಯದಿಂದ ಅಲ್ಲ' ಎಂದು ಅವರು ಹೇಳಿದ್ದಾರೆ.
ನೈಋತ್ಯ ಪದವೀಧರ ಕ್ಷೇತ್ರದಿಂದ ಸತತ 5 ಬಾರಿ ವಿಧಾನಪರಿಷತ್ ಸದಸ್ಯರಾಗಿ ಡಿ.ಎಚ್.ಶಂಕರಮೂರ್ತಿ ಆಯ್ಕೆಯಾಗಿದ್ದರು. ಗುರುವಾರ ಅವರು ನಿವೃತ್ತರಾಗಿದ್ದಾರೆ. ಪರಿಷತ್ ಹಿರಿಯ ಸದಸ್ಯ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಹಂಗಾಮಿ ಸಭಾಪತಿಯಾಗಿ ನೇಮಕವಾದರು.
ಶಂಕರಮೂರ್ತಿ ಅವರ ಅನುಪಸ್ಥಿತಿ ಪರಿಷತ್ತಿಗೆ ಭಾರೀ ನಷ್ಟ
ಐದು ಬಾರಿ ಚಿಂತಕರ ಚಾವಡಿ ಎಂದು ಕರೆಸಿಕೊಳ್ಳುವ ವಿಧಾನಪರಿಷತ್ತಿಗೆ ಡಿ.ಎಚ್.ಶಂಕರಮೂರ್ತಿ ಆಯ್ಕೆಯಾಗಿದ್ದರು. ಪರಿಷತ್ ಸದಸ್ಯರಾಗಿ ಮೂರು ದಶಕಗಳ ಕಾರ್ಯನಿರ್ವಹಿಸಿದ ಅಪಾರ ಅನುಭವ ಅವರದ್ದು. ಸಭಾಪತಿಯಾಗಿ ಆರು ವರ್ಷ ಕೆಲಸ ಮಾಡಿದ್ದಾರೆ.
ಒಂದು ಮತದಿಂದ ವಿಶ್ವಾಸಮತ ಗೆದ್ದ ಸಭಾಪತಿ ಶಂಕರಮೂರ್ತಿ
2017ರಲ್ಲಿ ಕಾಂಗ್ರೆಸ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ನಿರ್ಣಯದ ಪರ 36, ನಿರ್ಣಯದ ವಿರುದ್ಧ 37 ಮತಗಳು ಚಲಾವಣೆಯಾಗಿದ್ದವು. ಕೇವಲ 1 ಮತದಲ್ಲಿ ಶಂಕರಮೂರ್ತಿ ಅವರು ಗೆಲುವು ಕಂಡಿದ್ದರು.
5 ಬಾರಿ ಪರಿಷತ್ತಿಗೆ ಆಯ್ಕೆ
ನೈಋತ್ಯ ಪದವೀಧರ ಕ್ಷೇತ್ರದಿಂದ 1988ರಲ್ಲಿ ಜಯಗಳಿಸುವ ಮೂಲಕ ಡಿ.ಎಚ್.ಶಂಕರಮೂರ್ತಿ ಅವರು ಪರಿಷತ್ ಪ್ರವೇಶಿಸಿದರು. 1994, 2000, 2006 ಮತ್ತು 2012ರ ಚುನಾವಣೆಯಲ್ಲಿ ಸತತವಾಗಿ ಅವರು ಪರಿಷತ್ತಿಗೆ ಆಯ್ಕೆಯಾಗಿದ್ದಾರೆ.
2006ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಡಿ.ಎಚ್.ಶಂಕರಮೂರ್ತಿ ಅವರು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2018ರ ಜೂನ್ 21ರ ಗುರುವಾರ ಅವರು ಪರಿಷತ್ ಸದಸ್ಯ ಸ್ಥಾನದಿಂದ ನಿವೃತ್ತರಾದರು.
ಅವಿಶ್ವಾಸ ನಿರ್ಣಯದ ನೆನಪು
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಎಚ್.ಶಂಕರಮೂರ್ತಿ ಅವರು ಅವಿಶ್ವಾಸ ನಿರ್ಣಯ ಮಂಡನೆ ಆಗಿದ್ದನ್ನು ನೆನಪಿಸಿಕೊಂಡರು. 'ಕಾಂಗ್ರೆಸ್ ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ತಂದಿತ್ತು. ಜೆಡಿಎಸ್ ಬೆಂಬಲಕ್ಕೆ ನಿಂತ ಕಾರಣ ಆ ಪ್ರಯತ್ನ ವಿಫಲವಾಯಿತು' ಎಂದು ನೆನಪು ಮಾಡಿಕೊಂಡರು.
'ಸಭಾಪತಿ ಸ್ಥಾನದಲ್ಲಿ ಕುಳಿತು ದೊಡ್ಡ ಪ್ರಮಾಣದಲ್ಲಿ ಯಶಸ್ಸು ಕಂಡಿದ್ದೇನೆ. ವಿಧಾನಸೌಧದ ಆವರಣದಲ್ಲಿ ಗಾಂಧೀಜಿ ಪ್ರತಿಮೆ ಸ್ಥಾಪನೆ ಮಾಡಿದ ಖುಷಿ ಇದೆ' ಎಂದು ಅವರು ಹೇಳಿದ್ದಾರೆ.
ರಾಜಕೀಯದಿಂದ ನಿವೃತ್ತಿ ಇಲ್ಲ
'ಮೇಲ್ಮನೆ ಸದಸ್ಯತ್ವ ಮತ್ತು ಸಭಾಪತಿ ಹುದ್ದೆಯಿಂದ ನಿವೃತ್ತನಾಗುತ್ತಿದ್ದೇನೆ ಹೊರತು ರಾಜಕೀಯದಿಂದ ಅಲ್ಲ' ಎಂದು ಡಿ.ಎಚ್.ಶಂಕರಮೂರ್ತಿ ಸ್ಪಷ್ಟಪಡಿಸಿದರು.
'ಹಿಂದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ರಾಜ್ಯಪಾಲ ಹುದ್ದೆ ನೀಡುವುದಾಗಿ ತಿಳಿಸಿದ್ದರು ಮತ್ತು ನಾನು ಸಮ್ಮತಿಸಿದ್ದೇ. ಆದರೆ, ಹುದ್ದೆ ಸಿಗಲಿಲ್ಲ, ಆ ಬಗ್ಗೆ ಬೇಸರವಿಲ್ಲ ಮುಂದೆ ಅವಕಾಶ ಸಿಗುವ ಆಶಾವಾದವಿದೆ' ಎಂದು ಹೇಳಿದರು.
ಹೊರಟ್ಟಿ ಹಂಗಾಮಿ ಸಭಾಪತಿ
ವಿಧಾನಪರಿಷತ್ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರು ನಿವೃತ್ತರಾಗಿದ್ದರಿಂದ ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕಮಾಡಲಾಗಿದೆ. ಈ ಕುರಿತು ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಅಧಿವೇಶನ ಆರಂಭವಾದಾಗ ಹೊಸ ಸಭಾಪತಿ ಆಯ್ಕೆ ಮಾಡಲಾಗುತ್ತದೆ.
ನೈಋತ್ಯ ಪದವೀಧರ ಕ್ಷೇತ್ರದಿಂದ ಸತತ 5 ಬಾರಿ ವಿಧಾನಪರಿಷತ್ ಸದಸ್ಯರಾಗಿ ಶಂಕರಮೂರ್ತಿ ಆಯ್ಕೆಯಾಗಿದ್ದರು. ಕೆಲವು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಆಯನೂರು ಮಂಜುನಾಥ್ ಕ್ಷೇತ್ರದಿಂದ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ.