ಜೆಡಿಎಸ್ ಮಹಿಳಾ ಘಟಕಕ್ಕೆ ಲೀಲಾದೇವಿ ಆರ್ ಪ್ರಸಾದ್ ಸಾರಥ್ಯ
ಬೆಂಗಳೂರು, ಜೂನ್ 27: ಜೆಡಿಎಸ್ ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್ ಅವರನ್ನು ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡರು ನಾಮನಿರ್ದೇಶನ ಮಾಡಿದ್ದಾರೆ.
ಹಾಗೆಯೇ ಬೆಂಗಳೂರು ನಗರದ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ರುತ್ ಮನೋರಮಾ ಅವರ ಹೆಸರನ್ನು ನಾಮನಿರ್ದೇಶ ಮಾಡಲಾಗಿದೆ.
ಇನ್ನೂ ಜೆಡಿಎಸ್ನ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಬುಧವಾರವಷ್ಟೇ ದೇವೇಗೌಡರು ದಲಿತರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಾಗಿ ಘೋಷಿಸಿದ್ದರು. ಇದೀಗ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಎನ್ನುವ ಕಡೆಗೆ ಎಲ್ಲ ಚಿತ್ತ ನೆಟ್ಟಿದೆ.
ಪಕ್ಷದಿಂದ ಆರು ಮಂದಿ ಪರಿಶಿಷ್ಟ ಶಾಸಕರು ಗೆದ್ದಿದ್ದಾರೆ. ದಲಿತರಿಗೆ ದೇವೇಗೌಡರು ಏನೂ ಮಾಡಲಿಲ್ಲ ಎಂಬ ಅಸಮಾಧಾನವಿದೆ. ಹೀಗಾಗಿ, ಪರಿಶಿಷ್ಟ ಸಮುದಾಯದ ನಾಯಕರಿಗೇ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಕುರಿತು ಆಲೋಚಿಸಿರುವುದಾಗಿ ದೇವೇಗೌಡರು ತಿಳಿಸಿದ್ದರು.
ಮಧು ಬಂಗಾರಪ್ಪ ಅವರೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದು, ಜವಾಬ್ದಾರಿ ನಿರ್ವಹಿಸುವ ಶಕ್ತಿ ಅವರಿಗಿದೆ. ಸದ್ಯದಲ್ಲೇ ಎಲ್ಲರನ್ನೂ ಕರೆದು ಸಭೆ ನಡೆಸಿ 2-3 ದಿನಗಳಲ್ಲಿ ಹೊಸ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದ್ದರು.